ಆಶ್ಚರ್ಯಕರ ರೀತಿಯಲ್ಲಿ ಹೆಚ್ಚಿದ ಮೌಲ್ಯ
47 ಐಪಿಎಲ್ ಪಂದ್ಯಗಳನ್ನಾಡಿರುವ ಜಯದೇವ್ ಉನದ್ಕತ್ 57 ವಿಕೆಟ್ ಕಬಳಿಸಿದ್ದಾರೆ. ಪ್ರತಿಭಾನ್ವಿತ ಬೌಲರ್ ಆಗಿರುವ ಜಯದೇವ್ ಅವರು ಐಪಿಎಲ್ ನಲ್ಲಿ ಕೊಲ್ಕತ್ತ, ಬೆಂಗಳೂರು, ಡೆಹಲಿ, ಪುಣೆ ತಂಡಗಳ ಪರವಾಗಿ ಆಡಿದ್ದಾರೆ. ಅವರು ಈ ಬಾರಿಯ ಐಪಿಎಲ್ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಭಾರತದ ಆಟಗಾರ ಎಂಬ ಗರಿಮೆಗೆ ಪಾತ್ರವಾಗಿದ್ದು 11.50 ಕೋಟಿಗೆ ರಾಜಸ್ಥಾನ ತಂಡ ಇವರನ್ನು ಕೊಂಡುಕೊಂಡಿದೆ.
ಸ್ಥಿರ ಆಟಗಾರನಿಗೆ ಭಾರಿ ಡಿಮ್ಯಾಂಡ್
ಕರ್ನಾಟಕ ರಾಜ್ಯದ ಪ್ರತಿಭಾನ್ವಿತ ಆಟಗಾರ ಕೆ.ಎಲ್.ರಾಹುಲ್ ಅವರನ್ನು 11 ಕೋಟಿ ಮೊತ್ತಕ್ಕೆ ಪಂಜಾಬ್ ತಂಡ ಖರೀದಿಸಿದೆ. ಸ್ಥಿರ ಆಟಗಾರ ಎಂದೇ ಖ್ಯಾತರಾಗಿರುವ ಕೆ.ಎಲ್ ರಾಹುಲ್ಗೆ ಮುಂಬೈ, ಪಂಜಾಬ್, ಚೆನ್ನೈ, ದೆಹಲಿ ತಂಡಗಳು ಬಿರುಸಿನ ಹರಾಜು ಕೂಗಿದವು. ಅಂತಿಮವಾಗಿ ಪಂಜಾಬ್ ತಂಡದ ಒಡತಿ ಪ್ರೀತಿ ಹರಾಜಿನಲ್ಲಿ ವಿಜಯಿಯಾದರು.
ರಾಜ್ಯದ ಹುಡುಗ ಹೈದರಾಬಾದ್ ಪಾಲು
ಕರ್ನಾಟಕದ ಮತ್ತೊಬ್ಬ ಪ್ರತಿಭಾನ್ವಿತ ಆಟಗಾರ ಮನೀಷ್ ಪಾಂಡೆ 11 ಕೋಟಿ ಮೊತ್ತಕ್ಕೆ ಹೈದರಾಬಾದ್ ತಂಡದ ಪಾಲಾದರು. ಕಳೆದ ಬಾರಿ ಕೊಲ್ಕತ್ತ ಪರವಾಗಿ ಬ್ಯಾಟ್ ಬೀಸಿದ್ದ ಮನೀಷ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ನಿಂದ ಹಲವು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ಗಳನ್ನು ಆಡಿದವರು. ಐಪಿಎಲ್ನಲ್ಲಿ ಶತಕ ಭಾರಿಸಿದ ಮೊದಲ ಭಾರತದ ಆಟಗಾರ ಎಂಬ ಶ್ರೇಯ ಕೂಡ ಮನೀಷ್ ಪಾಂಡೆ ಅವರದ್ದೆ.
ಅನ್ಕ್ಯಾಪ್ ಆಟಗಾರನಿಗೆ ಇಷ್ಟು ಹಣವೇ?
ಕೇವಲ 40 ಲಕ್ಷ ಮೂಲ ಬೆಲೆ ಇದ್ದ ದೇಸೀ ಆಟಗಾರ ಕೃಣಾಲ್ ಪಾಂಡ್ಯಾ ಅವರು ಬರೋಬ್ಬರಿ 8.80 ಕೋಟಿಗೆ ಹರಾಜಾದರು. ಅವರನ್ನು ಪಂಜಾಬ್ ಮತ್ತು ಚೆನ್ನೈ ತಂಡಗಳು ಪೈಪೋಟಿ ಮೇಲೆ ಹರಾಜು ಕೂಗಿ ಕೊನೆಗೆ 8.80 ಕೋಟಿಗೆಕ್ಕೆ ಪಂಜಾಬ್ ತಂಡ ಅವರನ್ನು ಖರೀದಿಸಿತ್ತು. ಆದರೆ ಅಷ್ಟರಲ್ಲಿ ಮುಂಬೈ ತಂಡ ರೈಟ್ ಟು ಮ್ಯಾಚ್ ಹಕ್ಕು ಚಲಾಯಿಸಿ ಅಷ್ಟೇ ಮೊತ್ತಕ್ಕೆ ಪಾಂಡ್ಯಾ ಅವರನ್ನು ತಮ್ಮ ತಂಡದಲ್ಲಿಯೇ ಉಳಿಸಿಕೊಂಡಿತು.
ಯುವ ಆಟಗಾರಿಗೆ ಹೆಚ್ಚಿದ ಮೌಲ್ಯ
ತಾನಾಡಿದ ಮೊದಲ ಐಪಿಎಲ್ ಪಂದ್ಯದಿಂದಲೂ ಭಾರಿ ಕುತೂಹಲ ಮೂಡಿಸಿರುವ ಕೇರಳದ ಯುವ ಆಟಗಾರ ಸಂಜು ಸ್ಯಾಮ್ಸನ್ಗೆ ಈ ಬಾರಿ ಭಾರಿ ಮೌಲ್ಯ ದೊರೆತಿದೆ. ಕೇರಳದ ಈ ದೇಸೀ ಆಟಗಾರನನ್ನು ರಾಜಸ್ಥಾನ 8 ಕೋಟಿ ನೀಡಿ ಖರೀದಿಸಿದೆ. ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪರ್ ಕೂಡ ಆಗಿರುವ ಸಂಜು ಅವರು 66 ಐಪಿಎಲ್ ಪಂದ್ಯಗಳನ್ನಾಡಿ 1426 ರನ್ ಹೊಡೆದಿದ್ದಾರೆ ಅದರಲ್ಲಿ 7 ಅರ್ಧಶತಕ, 1 ಶತಕವೂ ಸೇರಿದೆ.
ಚೆನ್ನೈ ಪಾಲಾದ ಆಲ್ರೌಂಡರ್
ಬ್ಯಾಟಿಂಗ್ ಆಲ್ರೌಂಡರ್ ಕೇದಾರ್ ಜಾದವ್ ಅವರನ್ನು 7.80 ಕೋಟಿ ತೆತ್ತು ಚೆನ್ನೈ ತಂಡ ಖರೀದಿಸಿದೆ. ಮೊದಲು ಬೆಂಗಳೂರು ತಂಡದಿಂದ ಐಪಿಎಲ್ ಕರೀರ್ ಪ್ರಾರಂಭಿಸಿದ ಜಾದವ್ ಅವರು ಆ ನಂತರ ದೆಹಲಿ ಮತ್ತು ಕೇರಳ ತಂಡಗಳ ಪರವಾಗಿ ಬ್ಯಾಟ್ ಬೀಸಿದ್ದರು. ಈಗ ಅವರು ಚೆನ್ನೈ ಪರ ಆಡಲಿದ್ದಾರೆ.
ಚೆನ್ನೈ ಬದಲಿಗೆ ಪಂಜಾಬ್
ಚೆನ್ನೈ ತಂಡದಲ್ಲಿ ಬಹುಕಾಲದಿಂದ ಆಡಿದ್ದ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು 7.60 ಕೋಟಿ ಹಣಕ್ಕೆ ಪಂಜಾಬ್ ಪಾಲಾಗಿದ್ದಾರೆ. ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗುವ ಆಟಗಾರ ಎಂದು ಬಿಂಬಿಸಲಾಗಿದ್ದ ಅಶ್ವಿನ್ ನಿರಾಸೆಯೇನು ಮಾಡಿಲ್ಲ ಆದರೆ ಇನ್ನೂ ಹೆಚ್ಚಿನ ಹಣಕ್ಕೆ ಹರಾಜಾಗಬಹುದಾಗಿದ್ದ ಗುಣಮಟ್ಟದ ಆಟಗಾರ ಅವರು.
ಅನುಭವಿ ಆಟಗಾರಿಗೆ ಹೆಚ್ಚು ಹಣ
ಧೋನಿ ನಂತರ ಭಾರತದ ಅತ್ಯುತ್ತಮ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ ಉತ್ತಮ ಮೌಲ್ಯವೇ ದೊರೆತಿದೆ. 7.40 ಕೋಟಿ ಹಣ ನೀಡಿ ಕೊಲ್ಕತ್ತ ತಂಡ ದಿನೇಶ್ ಕಾರ್ತಿಕ್ ಅವರನ್ನು ಸೆಳೆದುಕೊಂಡಿದೆ. ಇಲ್ಲಿಯವರೆಗೆ 152 ಐಪಿಎಲ್ ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್ ಅವರು 2903 ರನ್ ಬಾರಿಸಿದ್ದಾರೆ. ಇದರಲ್ಲಿ 14 ಅರ್ಧ ಶತಕ ಕೂಡಾ ಸೇರಿದೆ.
20 ಲಕ್ಷದಿಂದ 6.20 ಕೋಟಿಗೆ ಏರಿಕೆ
ರಾಜ್ಯದ ಆಟಗಾರ ಕೆ.ಗೌತಮ್ ಅವರೂ ಕೂಡ ಅತ್ಯುತ್ತಮ ಬೆಲೆಗೆ ಮಾರಾಟವಾದರು. ಕೇವಲ 20 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿದ್ದ ಅವರನ್ನು ರಾಜಸ್ಥಾನ ತಂಡ 6.20 ಕೋಟಿ ನೀಡಿ ಖರೀದಿಸಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೂ ಗೌತಮ್ ಅವರು ಈವರೆಗೆ ಒಂದೂ ಪಂದ್ಯ ಆಡಿಲ್ಲ. ಆದರೂ ಅವರು ಅತ್ಯುತ್ತಮ ಬೆಲೆಗೆ ಮಾರಾಟವಾಗಿದ್ದಾರೆ.
ಹೊಡಿ ಬಡಿ ಆಟಗಾರನಿಗೆ ತಗ್ಗಿಲ್ಲ ಬೆಲೆ
ಕೊಲ್ಕತ್ತ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಅವರನ್ನು ಕೊಲ್ಕತ್ತ ಈ ಬಾರಿಯೂ ತನ್ನ ತಂಡದಲ್ಲಿಯೇ ಉಳಿಸಿಕೊಂಡಿದೆ. ಹಲವು ತಂಡಗಳು ರಾಬಿನ್ಗಾಗಿ 6.20 ಕೋಟಿ ಹರಾಜು ಕೂಗಿದ್ದವು ಆದರೆ ರೈಟ್ ಟು ಮ್ಯಾಚ್ ಹಕ್ಕು ಬಳಸಿ ಕೊಲ್ಕತ್ತ ತಂಡವು ಅಷ್ಟೇ ಮೊತ್ತಕ್ಕೆ ರಾಬಿನ್ ಉತ್ತಪ್ಪ ಅವರನ್ನು ತನ್ನ ಬಳಿ ಉಳಿಸಿಕೊಂಡಿತು.