ಬಾಂಗ್ಲಾ ನಾಯಕ ಅಕ್ಬರ್ ಆಲಿ ಕ್ಷಮೆ
ಭಾರತ ಬ್ಯಾಟ್ ಮಾಡುತ್ತಿದ್ದ ವೇಳೆ, ಬಾಂಗ್ಲಾ ಬೌಲರ್ ಗಳು ಬ್ಯಾಟ್ಸ್ ಮ್ಯಾನ್ ಗಳನ್ನು ನಿಂದಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ, ಭಾರತದ ಆಟಗಾರರೂ ಅದನ್ನೇ ಮಾಡಿದ್ದರು. ಪಂದ್ಯದ ಮುಕ್ತಾಯದ ಬಳಿಕ ಇತ್ತಂಡಗಳ ನಡುವಿನ ಆಕ್ರೋಶ ಸ್ಪೋಟಗೊಂಡಿತ್ತು. ಇದಕ್ಕೆ ಬಾಂಗ್ಲಾ ನಾಯಕ ಅಕ್ಬರ್ ಆಲಿ ಕ್ಷಮೆ ಕೋರಿದ್ದರು.
ಐಸಿಸಿಗೆ ದೂರು ನೀಡಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ
ಎರಡು ತಂಡಗಳ ವರ್ತನೆಯ ಬಗ್ಗೆ ಕ್ರಿಕೆಟ್ ಆಟಗಾರರು ಮತ್ತು ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಭಾರತ ತಂಡದ ಆಡಳಿತ ಮಂಡಳಿ, ಬಾಂಗ್ಲಾ ಆಟಗಾರರ ವರ್ತನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ, ದಾಖಲೆ ಸಮೇತ ಐಸಿಸಿಗೆ ದೂರು ನೀಡಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿತ್ತು.
ಭಾರತದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್
ಈ ಬಗ್ಗೆ ಭಾರತದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. "ನಮ್ಮ ಹುಡುಗರನ್ನು ಸರಿದಾರಿಗೆ ತರುವುದು ನಮ್ಮ ಕೆಲಸ. ಬಿಸಿಸಿಐ ಸೂಕ್ತ ಕ್ರಮ ತೆಗೆದುಕೊಳ್ಳಲಿ, ಇದು ಎಲ್ಲರಿಗೂ ಪಾಠವಾಗಲಿ. ಕ್ರಿಕೆಟ್ ಅನ್ನುವುದು ವಿರೋಧಿ ಬಣವನ್ನು ಟೀಕಿಸುವುದಕ್ಕೆ ಇರುವುದಲ್ಲ. ಫೈನಲ್ ನಲ್ಲಿ ನಡೆದ ಘಟನೆಯನ್ನು ಆಧರಿಸಿ, ಸೂಕ್ತ ನಿರ್ಧಾರವನ್ನು ಬೋರ್ಡ್ ತೆಗೆದುಕೊಳ್ಳಬೇಕು" ಎಂದು ಕಪಿಲ್ ದೇವ್ ಹೇಳಿದ್ದಾರೆ.
ಇನ್ನೋರ್ವ ಮಾಜಿ ನಾಯಕ ಅಜರುದ್ದೀನ್
ಇನ್ನೋರ್ವ ಮಾಜಿ ನಾಯಕ ಅಜರುದ್ದೀನ್ ಕೂಡಾ ಘಟನೆಯ ಬಗ್ಗೆ ಕಿಡಿಕಾರಿದ್ದಾರೆ. "ಹುಡುಗರು ಯಾಕೆ ಈ ರೀತಿ ವರ್ತಿಸಿದರು. ಆಸ್ಟ್ರೇಲಿಯಾ ಕೂಡಾ ಪಂದ್ಯದಲ್ಲಿ ವಿರೋಧಿಗಳನ್ನು ಟೀಕಿಸುವ ಕೆಲಸವನ್ನು ಮಾಡುತ್ತದೆ. ಆದರೆ, ಅವರು ವೈಯಕ್ತಿಕ ಮಟ್ಟಕ್ಕೆ ಎಂದೂ ಇಳಿದಿಲ್ಲ. ಕ್ರಿಕೆಟ್ ನಲ್ಲಿ ಆಕ್ರಮಣಶೀಲತೆ ಇರಬೇಕು. ಆದರೆ, ಅದು ಇತಿಮಿತಿಯಲ್ಲಿ ಸಾಗಬೇಕು" ಎಂದು ಅಜರ್ ಹೇಳಿದ್ದಾರೆ.