ಇತ್ತೀಚೆಗಷ್ಟೇ ಮುಕ್ತಾಯವಾದ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದ್ದಲ್ಲದೆ, ಐದನೇ ಬಾರಿಗೆ ಟ್ರೋಫಿಯನ್ನ ಎತ್ತಿಹಿಡಿಯಿತು.
ಯುವ ಟೀಂ ಇಂಡಿಯಾ ಫೈನಲ್ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಚಾಂಪಿಯನ್ ಆಗಿದೆ.
ಆದ್ರೆ, ವಿಶ್ವಕಪ್ಗಾಗಿ ವೆಸ್ಟ್ಇಂಡೀಸ್ಗೆ ತೆರಳಿದ್ದ ಟೀಂ ಇಂಡಿಯಾ ಯುವ ತಂಡ, ಎದುರಿಸಿದ ಅವಮಾನಕರ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನ ಹೊಂದಿಲ್ಲದ ಕಾರಣ ಏಳು ಭಾರತೀಯ ಕ್ರಿಕೆಟಿಗರನ್ನ ಪೋರ್ಟ್ ಆಫ್ ಸ್ಪೇನ್ ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದರು ಎಂದು ತಿಳಿದುಬಂದಿದೆ.
ವಿಂಡೀಸ್ ಗಡಿಗೆ ಬಂದಿಳಿದ ಸಂದರ್ಭದಲ್ಲಿ ಪೋರ್ಟ್ ಆಫ್ ಸ್ಪೇನ್ ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಂಡದ ಮ್ಯಾನೇಜರ್ ಲೋಬ್ಜಾಂಗ್ ಜಿ ತೇನ್ಸಿಂಗ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಭಾರತದಲ್ಲಿ ಹದಿಹರೆಯದ ಹುಡುಗರಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿಲ್ಲ ಎಂದು ಅವರು ಎಷ್ಟು ವಿವರಿಸಿದರೂ ವಲಸೆ ಅಧಿಕಾರಿಗಳು ಕಾಳಜಿ ವಹಿಸಲಿಲ್ಲ ಎಂದು ಅವರು ಹೇಳಿದರು.
ಹೀಗಾಗಿ ಇಡೀ ದಿನ ಅವರನ್ನು ವಿಮಾನ ನಿಲ್ದಾಣದಲ್ಲಿ ಇರಿಸಲಾಗಿತ್ತು ಎಂದರು. ಮುಂದಿನ ವಿಮಾನದಲ್ಲಿ ಭಾರತಕ್ಕೆ ಮರಳುವುದಾಗಿ ಏಳು ಆಟಗಾರರು ಬೆದರಿಕೆ ಹಾಕಿದ್ದರು ಎಂದೂ ಅವರು ಹೇಳಿದ್ದಾರೆ. ಭಾರತ ಸರ್ಕಾರದಿಂದ ಅನುಮತಿ ಸಿಗುವವರೆಗೆ ವಿಂಡೀಸ್ ಪ್ರವೇಶಿಸಲು ಬಿಡುವುದಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರವಿಕುಮಾರ್ ಮತ್ತು ರಘುವಂಶಿ ಸೇರಿದಂತೆ ಏಳು ಮಂದಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ತಡೆದಿದ್ದಾರೆ ಎಂದು ಲೋಬ್ಜಂಗ್ ಜಿ ತೇನ್ಸಿಂಗ್ ವಿವರಿಸಿದರು.
24 ಗಂಟೆಗಳ ನಂತರ, ಐಸಿಸಿ ಮತ್ತು ಬಿಸಿಸಿಐ ಅಧಿಕಾರಿಗಳ ಉಪಕ್ರಮದಿಂದ ವಿಮಾನ ನಿಲ್ದಾಣದ ಅಧಿಕಾರಿಗಳು ಹಿಂದೆ ಸರಿದರು ಎಂದು ಅವರು ಹೇಳಿದರು. ನಂತರ ಆಟಗಾರರು ಗಯಾನಾಗೆ ಆಗಮಿಸಿದರು, ಅಲ್ಲಿ ಪಂದ್ಯ ನಡೆಯಲಿದೆ ಎಂದು ಲೋಬ್ಜಾಂಗ್ ಜಿ ತೇನ್ಸಿಂಗ್ ಹೇಳಿದರು.
ಟೀಂ ಇಂಡಿಯಾ ವಿಶ್ವಕಪ್ನಲ್ಲಿ ಎರಡು ಪಂದ್ಯಗಳನ್ನು ಆಡಿದ ನಂತರ ತಂಡದಲ್ಲಿದ್ದ ಐವರು ಆಟಗಾರರು ಕೊರೊನಾ ಪಾಸಿಟಿವ್ ಆಗಿದ್ದರು. ಕೊರೊನಾ ಪೀಡಿತ ಪ್ರಮುಖ ಆಟಗಾರರಲ್ಲಿ ನಾಯಕ ಯಶ್ ಧುಲ್, ಉಪನಾಯಕ ಶೇಖ್ ರಶೀದ್ ಮತ್ತು ಆರಾಧ್ಯ ಯಾದವ್ ಸೇರಿದ್ದಾರೆ. ಇವರೊಂದಿಗೆ ಹಲವು ಆಡಳಿತ ಸಿಬ್ಬಂದಿ ಕೂಡ ಕೊರೊನಾದಿಂದ ಬಳಲುತ್ತಿದ್ದರು. ಆದಾಗ್ಯೂ, ಯುವ ಭಾರತೀಯ ತಂಡವು ಅದ್ಭುತ ವಿಜಯಗಳೊಂದಿಗೆ ನಾಕೌಟ್ ಹಂತಗಳಿಗೆ ಅರ್ಹತೆ ಗಳಿಸಿತು.
ಭಾರತ ಯುವ ತಂಡವು ಪ್ರಮುಖ ಆಟಗಾರರಿಲ್ಲದೆ ಲೀಗ್ನ ಉಳಿದ ಪಂದ್ಯಗಳನ್ನು ಆಡಿದರು. ನಾಕೌಟ್ ಹಂತದಲ್ಲಿ ಕೊರೊನಾದಿಂದ ಚೇತರಿಸಿಕೊಂಡ ಎಲ್ಲಾ ಆಟಗಾರರು ತಂಡವನ್ನು ಸೇರಿಕೊಂಡರು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ದಾಖಲೆ ಮಟ್ಟದಲ್ಲಿ ಐದನೇ ಬಾರಿ ವಿಶ್ವಕಪ್ ಗೆದ್ದು ಭಾರತ ಇತಿಹಾಸ ನಿರ್ಮಿಸಿದೆ.