ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಜಾಹೀರಾತು ಎಂದರೆ ಅದು ರಾಹುಲ್ ದ್ರಾವಿಡ್ ಅಭಿನಯಿಸಿರುವ ಕ್ರೆಡ್ ಜಾಹೀರಾತು. ಟ್ರಾಫಿಕ್ ಒಂದರಲ್ಲಿ ಸಿಲುಕಿಕೊಂಡಿದ್ದ ರಾಹುಲ್ ದ್ರಾವಿಡ್ ತಮ್ಮ ಆಕ್ರೋಶವನ್ನು ಸುತ್ತಮುತ್ತ ನೆರೆದಿದ್ದವರ ಮೇಲೆ ಹಾಕುತ್ತಾ ನಾನು ಇಂದಿರಾನಗರದ ಗೂಂಡಾ ಎಂದು ಡೈಲಾಗ್ ಹೊಡೆದಿದ್ದರು. ರಾಹುಲ್ ದ್ರಾವಿಡ್ ಅವರ ಈ ಜಾಹೀರಾತು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬೆಂಗಳೂರು ನಿವಾಸಿ ರಾಹುಲ್ ದ್ರಾವಿಡ್ ಜಾಹೀರಾತಿನಲ್ಲಿ ನಾನು ಇಂದಿರಾನಗರದ ಗೂಂಡಾ ಎಂದು ಡೈಲಾಗ್ ಹೊಡೆದಿದ್ದರೆ ಇತ್ತ ಮತ್ತೊಬ್ಬ ಕನ್ನಡಿಗ ವೆಂಕಟೇಶ್ ಪ್ರಸಾದ್ ಟ್ವಿಟರ್ನಲ್ಲಿ ನಾನು ಇಂದಿರಾನಗರದ ಗೂಂಡಾ ಎಂದು ಪಾಕಿಸ್ತಾನಕ್ಕೆ ಕೌಂಟರ್ ನೀಡಿದ್ದಾರೆ.
1996ರ ವಿಶ್ವಕಪ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ವೇಳೆ ಭಾರತದ ಆಟಗಾರ ವೆಂಕಟೇಶ್ ಪ್ರಸಾದ್ 15ನೇ ಓವರ್ ಬೌಲಿಂಗ್ ಮಾಡಿದ್ದರು. ಈ 15ನೇ ಓವರ್ನ ಐದನೇ ಎಸೆತದಲ್ಲಿ ಪಾಕಿಸ್ತಾನದ ಬ್ಯಾಟ್ಸ್ಮನ್ ಆಮಿರ್ ಸೊಹೈಲ್ ಬೌಂಡರಿ ಬಾರಿಸಿ ವೆಂಕಟೇಶ್ ಪ್ರಸಾದ್ ಅವರಿಗೆ ಮುಂದಿನ ಎಸೆತದಲ್ಲಿಯೂ ಕೂಡ ಬೌಂಡರಿ ಬಾರಿಸುವುದಾಗಿ ಎಚ್ಚರಿಕೆ ನೀಡಿದ್ದರು.
Me to Aamir Sohail in Bangalore at 14.5- #IndiraNagarkaGunda hoon main 😊 pic.twitter.com/uF7xaPeTPl
— Venkatesh Prasad (@venkateshprasad) April 11, 2021
ಆದರೆ ವೆಂಕಟೇಶ್ ಪ್ರಸಾದ್ ಎಸೆದ 15ನೇ ಓವರ್ನ ಕೊನೆಯ ಎಸೆತಕ್ಕೆ ಆಮಿರ್ ಸೊಹೈಲ್ ಕ್ಲೀನ್ ಬೌಲ್ಡ್ ಆದರು. ಬೌಂಡರಿ ಬಾರಿಸುವುದಾಗಿ ಎಚ್ಚರಿಕೆ ನೀಡಿದ್ದ ಸೊಹೈಲ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದರು. ಈ ಹಳೆಯ ಘಟನೆಯ ಚಿತ್ರಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ವೆಂಕಟೇಶ್ ಪ್ರಸಾದ್ ಇಂದಿರಾನಗರದ ಗೂಂಡಾ ನಾನು ಎಂದು ಬರೆದುಕೊಂಡಿದ್ದಾರೆ.