ಅಸ್ಸಾಂ ವಿರುದ್ಧ ಸೋಲನುಭವಿಸುವ ಮೂಲಕ ಆಘಾತ ಅನುಭವಿಸಿದ್ದ ಕರ್ನಾಟಕ ಸಿಕ್ಕಿಂ ವಿರುದ್ಧ ಜಯ ಸಾಧಿಸುವ ಮೂಲಕ ವಿಜಯ್ ಹಜಾರೆ ಟ್ರೋಫಿ 2022 ಪಂದ್ಯಾವಳಿಯಲ್ಲಿ ಗೆಲುವಿನ ಹಳಿಗೆ ಮರಳಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಮಯಾಂಕ್ ಅಗರ್ವಾಲ್ ತೀರ್ಮಾನವನ್ನು ಸಮರ್ಥಿಸಿಕೊಳ್ಳುವಂತೆ ಕರ್ನಾಟಕದ ಬೌಲರ್ ಗಳು ಪ್ರದರ್ಶನ ನೀಡಿದರು.
ಆರಂಭಿಕರಾದ ಅನ್ವೇಶ್ ಶರ್ಮಾ, ಪಂಕಜ್ ರಾವತ್ರನ್ನು ಔಟ್ ಮಾಡುವ ಮೂಲಕ ವಿ ಕೌಶಿಕ್ ಆರಂಭದಲ್ಲೇ ಸಿಕ್ಕಿಂ ತಂಡಕ್ಕೆ ಆಘಾತ ನೀಡಿದರು. ಸಿಕ್ಕಿಂ ಪರವಾಗಿ ಸುಮಿತ್ ಸಿಂಗ್ ಮತ್ತು ನೀಲೇಶ್ ಲಮಿಚನೆ ಅವರನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟರ್ ಕೂಡ ಕರ್ನಾಟಕದ ಬೌಲಿಂಗ್ ಅನ್ನು ದಿಟ್ಟವಾಗಿ ಎದುರಿಸಲಿಲ್ಲ.
ನಿಲೇಶ್ ಲಮಿಚನೆ 23 ರನ್ ಗಳಿಸಿದರೆ, ಸುಮಿತ್ ಸಿಂಗ್ 42 ರನ್ ಗಳಿಸಿದರು. ಅಂತಿಮವಾಗಿ ಸಿಕ್ಕಿಂ 46.2 ಓವರ್ ಗಳಲ್ಲಿ 117 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್ ಮತ್ತು ವಿ ಕೌಶಿಕ್ ತಲಾ 3 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಎಂ ವೆಂಕಟೇಶ್ 1 ವಿಕೆಟ್ ಪಡೆದರು.
ಮಯಾಂಕ್ ಅಗರ್ವಾಲ್ ಅರ್ಧಶತಕ
118 ರನ್ಗಳ ಗುರಿಯನ್ನು ಬೆನ್ನತ್ತಿದ ಕರ್ನಾಟಕ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮನೀಶ್ ಪಾಂಡೆ 4 ರನ್ ಗಳಿಸಿ ಔಟಾದರೆ, ಕೃಷ್ಣಪ್ಪ ಗೌತಮ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಮನೋಜ್ ಬಂಡಾಗೆ 6 ರನ್ ಗಳಿಸಿದರೆ, ರವಿಕುಮಾರ್ ಸಮರ್ಥ್ 4 ರನ್ ಗಳಿಸಿ ಔಟಾದರು.
ಕರ್ನಾಟಕ 37 ರನ್ ಆಗುವಷ್ಟರಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಮಯಾಂಕ್ ಅಗರ್ವಾಲ್ ಮತ್ತು ನಿಕಿನ್ ಜೋಸ್ ತಾಳ್ಮೆಯ ಆಟವಾಡಿ ಕರ್ನಾಟಕವನ್ನು ಗೆಲುವಿನ ದಡ ಮುಟ್ಟಿಸಿದರು.
ಮಯಾಂಕ್ ಅಗರ್ವಾಲ್ 57 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 54 ರನ್ ಗಳಿಸಿದರು. ನಿಕಿನ್ ಜೋಸ್ 52 ಎಸೆತಗಳಲ್ಲಿ 5 ಬೌಂಡರಿ ಸಹಿತ 46 ರನ್ ಗಳಿಸಿದರು. ಇವರಿಬ್ಬರ ಜೊತೆಯಾಟದಿಂದ ಕರ್ನಾಟಕ ಸುಲಭವಾಗಿ ಜಯ ಸಾಧಿಸಿತು.
ಉಭಯ ತಂಡಗಳ ಪ್ಲೇಯಿಂಗ್ 11
ಕರ್ನಾಟಕ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ಮನೀಶ್ ಪಾಂಡೆ, ಕೃಷ್ಣಪ್ಪ ಗೌತಮ್, ಶರತ್ ಬಿಆರ್, ಮನೋಜ್ ಭಾಂಡಗೆ, ಶ್ರೇಯಸ್ ಗೋಪಾಲ್, ವಾಸುಕಿ ಕೌಶಿಕ್, ರೋನಿತ್ ಮೋರ್, ಮುರಳೀಧರ ವೆಂಕಟೇಶ್
ಸಿಕ್ಕಿಂ: ಅನ್ವೇಶ್ ಶರ್ಮಾ, ಪಂಕಜ್ ರಾವತ್, ನೀಲೇಶ್ ಲಾಮಿಚಾನೆ, ಆಶಿಶ್ ಥಾಪಾ (ನಾಯಕ), ಸುಮಿತ್ ಸಿಂಗ್, ಪಲ್ಜೋರ್ ತಮಾಂಗ್, ಲೀ ಯೋಂಗ್ ಲೆಪ್ಚಾ, ಅಂಕುರ್ ಮಲಿಕ್, ಚಿತಿಜ್ ತಮಾಂಗ್, ಎಂಡಿ ಸಪ್ತುಲ್ಲಾ, ಜೀತೇಂದ್ರ ಶರ್ಮಾ