ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡಕ್ಕೆ ಸೌರಾಷ್ಟ್ರ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದು ಚಾಂಪಿಯನ್ ಪಟ್ಟಕ್ಕೇರಿದೆ. ಜಯದೇವ್ ಉನಾದ್ಕಟ್ ನೇತೃತ್ವದ ಸೌರಾಷ್ಟ್ರ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದು ಫೈನಲ್ನಲ್ಲಿಯೂ ಸಾಂಘಿಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಬಲಿಷ್ಠ ಮಹಾರಾಷ್ಟ್ರ ವಿರುದ್ಧ ವಿಜಯ ಸಾಧಿಸಿ ಟ್ರೋಫಿ ಗೆದ್ದಿದೆ.
ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿತ್ತು. ನಾಯಕ ಋತುರಾಜ್ ಗಾಯಕ್ವಾಡ್ ಅವರ ಶತಕದ ನೆರವಿನಿಂದಾಗಿ ಮಹಾರಾಷ್ಟ್ರ ತಂಡ 9 ವಿಕೆಟ್ ಕಳೆದುಕೊಂಡು 248 ರನ್ಗಳನ್ನು ಗಳಿಸಿತ್ತು. ಋತುರಾಜ್ ಗಾಯಕ್ವಾಡ್ 131 ಎಸೆತಗಳನ್ನು ಎದುರಿಸಿ 108 ರನ್ಗಳನ್ನು ಗಳಿಸಿದರು. ಇವರನ್ನು ಹೊರತುಪಡಿಸಿ ಉಳಿದ ಆಟಗಾರರಿಂದ ದೊಡ್ಡ ಮೊತ್ತದ ಕೊಡುಗೆ ಬರಲಿಲ್ಲ. ಹೀಗಾಗಿ ಸಾಧಾರಣ ಮೊತ್ತದ ಗುರಿ ನೀಡಲು ಮಾತ್ರವೇ ಮಹಾರಾಷ್ಟ್ರ ತಂಡಕ್ಕೆ ಸಾಧ್ಯವಾಯಿತು.
ರಿಷಭ್ ಮ್ಯಾಚ್ ವಿನ್ನರ್, ಸಂಜು ಸ್ಯಾಮ್ಸನ್ ಕಾಯಲೇ ಬೇಕು: ಶಿಖರ್ ಧವನ್
ಸೌರಾಷ್ಟ್ರ ಪರವಾಗಿ ನಾಯಕ ಉನಾದ್ಕಟ್ ಬೌಲಿಂಗ್ನಲ್ಲಿ ಅದ್ಭುತ ನಿಯಂತ್ರಣ ಸಾಧಿಸಿದ್ದು 10 ಓವರ್ಗಳಲ್ಲಿ 2.50 ಎಕಾನಮಿಯಲ್ಲಿ 25 ರನ್ಗಳನ್ನು ನೀಡಿ ಒಂದು ವಿಕೆಟ್ ಪಡೆದುಕೊಂಡರು. ಇದು ಆರಂಭದಲ್ಲಿಯೇ ಮಹಾರಾಷ್ಟ್ರ ತಂಡಕ್ಕೆ ಭಾರೀ ಸವಾಲನ್ನುಂಟು ಮಾಡಿತ್ತು. ಮತ್ತೊಂದೆಡೆ ಅಂತಿಮ ಹಂತದಲ್ಲಿ ಚಿರಾಗ್ ಜಾನಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು.
ಇನ್ನು ಮಹಾರಾಷ್ಟ್ರ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ಸೌರಾಷ್ಟ್ರ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಮೊದಲ ವಿಕೆಟ್ಗೆ ಹಾರ್ವಿಕ್ ದೇಸಾಯಿ ಹಾಗೂ ಶೆಲ್ಡನ್ ಜಾಕ್ಸನ್ ಭರ್ಜರಿ 125 ರನ್ಗಳ ಜೊತೆಯಾಟವನ್ನು ನೀಡಿದರು. ಹಾರ್ವಿಕ್ ಅರ್ಧ ಶತಕ ಗಳಿಸಿ ವಿಕೆಟ್ ಕಳೆದುಕೊಂಡರೆ ಶೆಲ್ಡನ್ ಜಾಕ್ಸನ್ ಅಮೋಘ ಶತಕ ಸಿಡಿಸಿದರು. 133 ರನ್ಗಳಿಸಿ ಅಜೇಯವಾಗುಳಿದ ಜಾಕ್ಸನ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾದರು. ಹ್ಯಾಟ್ರಿಕ್ ವಿಕೆಟ್ ಪಡೆದ ಚಿರಾಗ್ ಜಾನಿ ಬ್ಯಾಟಿಂಗ್ನಲ್ಲಿಯೂ 30 ರನ್ಗಳ ಕೊಡುಗೆ ನೀಡಿದ್ದಾರೆ.
ಈ ಭರ್ಜರಿ ಪ್ರದರ್ಶನದಿಂದಾಗಿ ಸೌರಾಷ್ಟ್ರ 46.3 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿವಲ್ಲಿ ಯಶಸ್ವಿಯಾಯಿತು. ಈ ಮೂಲಕ 2008ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ 14 ವರ್ಷಗಳ ಬಳಿಕ ಮತ್ತೆ ಆ ಸಾಧನೆ ಮಾಡುವಲ್ಲಿ ಸೌರಾಷ್ಟ್ರ ಯಶಸ್ವಿಯಾಗಿದೆ. ಜಯ್ದೇವ್ ಉನಾದ್ಕಟ್ ನೇತೃತ್ವದ ಸೌರಾಷ್ಟ್ರ ತಂಡದ ಈ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಫಿಫಾ ವಿಶ್ವಕಪ್: ಪೊಲಾಂಡ್ ವಿರುದ್ಧ 2-0 ಅಂತರದಿಂದ ಗೆದ್ದು ಬೀಗಿದ ಮೆಸ್ಸಿ ಪಡೆ
ಸೌರಾಷ್ಟ್ರ ಆಡುವ ಬಳಗ: ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಶೆಲ್ಡನ್ ಜಾಕ್ಸನ್, ಜೇ ಗೋಹಿಲ್, ಸಮರ್ಥ ವ್ಯಾಸ್, ಪ್ರೇರಕ್ ಮಂಕಡ್, ಅರ್ಪಿತ್ ವಾಸವಾಡ, ಚಿರಾಗ್ ಜಾನಿ, ಧರ್ಮೇಂದ್ರಸಿನ್ಹ್ ಜಡೇಜಾ, ಜಯದೇವ್ ಉನದ್ಕತ್ (ನಾಯಕ), ಕುಶಾಂಗ್ ಪಟೇಲ್, ಪಾರ್ಥ್ ಭುತ್
ಬೆಂಚ್: ನವನೀತ್ ವೋರಾ, ಚೇತನ್ ಸಕರಿಯಾ, ವಿಶ್ವರಾಜ್ ಜಡೇಜಾ, ಯುವರಾಜ್ ಚುಡಾಸಮ
ಮಹಾರಾಷ್ಟ್ರ ಆಡುವ ಬಳಗ: ಋತುರಾಜ್ ಗಾಯಕ್ವಾಡ್ (ನಾಯಕ), ಸತ್ಯಜೀತ್ ಬಚಾವ್, ಅಂಕಿತ್ ಬಾವ್ನೆ, ಅಜೀಂ ಕಾಜಿ, ರಾಜವರ್ಧನ್ ಹಂಗರ್ಗೇಕರ್, ಸೌರಭ್ ನವಲೆ (ವಿಕೆಟ್ ಕೀಪರ್), ಮನೋಜ್ ಇಂಗಳೆ, ಮುಖೇಶ್ ಚೌಧರಿ, ಪವನ್ ಶಾ, ನೌಶಾದ್ ಶೇಖ್, ವಿಕ್ಕಿ ಓಸ್ತ್ವಾಲ್
ಬೆಂಚ್: ರಾಹುಲ್ ತ್ರಿಪಾಠಿ, ಕೌಶಲ್ ತಾಂಬೆ, ನಿಕಿತ್ ಧುಮಾಲ್, ದಿವ್ಯಾಂಗ್ ಹಿಂಗನೇಕರ್, ಕೇದಾರ್ ಜಾಧವ್, ತರಂಜಿತ್ಸಿಂಗ್ ಧಿಲ್ಲೋನ್, ಶಂಶುಜಾಮ ಕಾಜಿ