ಕರ್ನಾಟಕ ಕಂಡ ಪ್ರತಿಭಾನ್ವಿತ ಬೌಲರ್, ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ದಾವಣಗೆರೆ ಎಕ್ಸ್ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಟ್ವಿಟ್ಟರ್ನಲ್ಲಿ ಈ ಬಗ್ಗೆ ವಿನಯ್ ಕುಮಾರ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
"ನನ್ನ ವೃತ್ತಿ ಜೀವನದುದ್ದಕ್ಕೂ ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ನೀಡಿದ್ದಕ್ಕೆ ಧನ್ಯವಾದಗಳು. ನನ್ನ ಪಾದರಕ್ಷೆಗಳನ್ನು ಇಂದು ಕಳಚಿಡುತ್ತಿದ್ದೇನೆ" ಎಂದು ವಿನಯ್ ಕುಮಾರ್ ತಮ್ಮ ನಿವೃತ್ತಿಯನ್ನು ತಿಳಿಸಿದ್ದಾರೆ. ಇದರ ಜೊತೆಗೆ ವಿನಯ್ ಮುಕಾರ್ ಸುದೀರ್ಘ ಪತ್ರವನ್ನು ಕೂಡ ಟ್ವೀಟ್ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಈ ಪತ್ರದಲ್ಲಿ ವಿನಯ್ ಕುಮಾರ್ "25 ವರ್ಷಗಳ ಓಟದ ನಂತರ ದಾವಣಗೆರೆ ಎಕ್ಸ್ಪ್ರೆಸ್ ಕ್ರಿಕೆಟ್ನ ಹಲವಾರು ನಿಲ್ದಾಣಗಳನ್ನು ದಾಟಿದ್ದು, ಕಡೆಗೂ ಈಗ ನಿವೃತ್ತಿ ಎಂಬ ನಿಲ್ದಾಣಕ್ಕೆ ಬಂದು ತಲುಪಿದೆ. ಸಾಕಷ್ಟು ವಿಭಿನ್ನ ಭಾವನೆಗಳೊಂದಿಗೆ ನಾನು ವಿನಯ್ ಕುಮಾರ್ ಆರ್ ನನ್ನ ಅಂತಾರಾಷ್ಟ್ರೀಯ ಹಾಗೂ ಪ್ರಥಮದರ್ಜೆ ಕ್ರಿಕೆಟ್ಗೆ ವಿದಾಯವನ್ನು ಘೋಷಿಸುತ್ತಿದ್ದೇನೆ. ಇದು ಖಂಡಿಯಾ ಸುಲಭದ ನಿರ್ಧಾರವಲ್ಲ. ಆದರೆ ಕ್ರೀಡಾ ಬದುಕಿನಲ್ಲಿರುವ ಪ್ರತಿಯೊಬ್ಬರಿಗೂ ಇಂತಾ ಒಂದು ದಿನ ಬರುತ್ತದೆ" ಎಂದು ಬರೆದುಕೊಂಡಿದ್ದಾರೆ.
ದಾವಣಗೆರೆ ಎಕ್ಸ್ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಮೂರು ಮಾದರಿಯ ಕ್ರಿಕೆಟ್ನಲ್ಲೂ ಪ್ರತಿನಿಧಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ವಿನಯ್ ಕುಮಾರ್ ಟೀಮ್ ಇಂಡಿಯಾ ಪರವಾಗಿ ಒಂದು ಟೆಸ್ಟ್, 31 ಏಕದಿನ ಹಾಗೂ 9 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಎಲ್ಲಾ ಮಾದರಿಯಲ್ಲೂ ಒಟ್ಟು 49 ವಿಕೆಟ್ಗಳನ್ನು ಪಡೆದಿದ್ದಾರೆ ವಿನಯ್ ಕುಮಾರ್.
ದೇಶೀಯ ಕ್ರಿಕೆಟ್ನಲ್ಲಿ ವಿನಯ್ ಕುಮಾರ್ 2018ರ ವರೆಗೆ ಕರ್ನಾಟಕ ತಂಡವನ್ನು 100 ರಣಜಿ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. 2014-15 ಹಾಗೂ 2015-16ರಲ್ಲಿ ಸತತ ಎರಡು ಆವೃತ್ತಿಗಳಲ್ಲಿ ಕರ್ನಾಟಕ ರಣಜಿ ಚಾಂಪಿಯನ್ ಪಟ್ಟಕ್ಕೇರಿದಾಗ ವಿನಯ್ ಕುಮಾರ್ ಕರ್ನಾಟಕ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ. 2019ರ ಆವೃತ್ತಿಗಾಗಿ ವಿನಯ್ ಕುಮಾರ್ ಕರ್ನಾಟಕ ತಂಡವನ್ನು ತೊರೆದು ಪುದುಚೇರಿ ಪರವಾಗಿ ಕಣಕ್ಕಿಳಿದಿದ್ದರು.
ಐಪಿಎಲ್ನಲ್ಲಿ ವಿನಯ್ ಕುಮಾರ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು ಪ್ರತಿನಿಧಿಸಿದ್ದಾರೆ.