ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ನಂತರ ವಿರಾಮ ಪಡೆದುಕೊಂಡಿರುವ ವಿರಾಟ್ ಕೊಹ್ಲಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ರಿಷಿಕೇಶದಲ್ಲಿರುವ ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ವಿರಾಟ್ ಕೊಹ್ಲಿಗೆ ಆಧ್ಯಾತ್ಮದ ಮೇಲೆ ಹೆಚ್ಚಿನ ಒಲವು ಮೂಡಿದೆ. ಸಮಯ ಸಿಕ್ಕಾಗಲೆಲ್ಲಾ ಯಾವುದಾದರು ದೇವಸ್ಥಾನ ಇಲ್ಲವೇ ಧಾರ್ಮಿಕ ಗುರುಗಳ ಭೇಟಿಗೆ ಆದ್ಯತೆ ನೀಡುತ್ತಾರೆ.
ಭಾರತದ ದಿಗ್ಗಜ ಆಟಗಾರ್ತಿ ನೀಡಿದ ಸಲಹೆ ಸಹಕಾರಿಯಾಯಿತು ಎಂದ U-19 ಆಟಗಾರ್ತಿ ತಿತಾಸ್ ಸಧು
ಸ್ವಾಮಿ ದಯಾನಂದ ಗಿರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಧ್ಯಾತ್ಮಿಕ ಗುರುಗಳು ಕೂಡ ಹೌದು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಲ್ಲಿನ ಆಶ್ರಮಕ್ಕೆ ಆಗಮಿಸಿದ್ದು, ಮಂಗಳವಾರ (ಜನವರಿ 31) ರಂದು ಅನೇಕ ಧಾರ್ಮಿಕ ವಿಧಿವಿಧಾನಗಳು ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮಗಳು ವಾಮಿಕಾ ಜೊತೆ ರಿಷಿಕೇಶಕ್ಕೆ ಆಗಮಿಸಿ ಅಲ್ಲಿರುವ ಬ್ರಹ್ಮಲಿನ್ ದಯಾನಂದ ಸರಸ್ವತಿಯ ಸಮಾಧಿಗೆ ಭೇಟಿ ನೀಡಿರುವುದಾಗಿ ಆಶ್ರಮದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗುಣಾನಂದ್ ರಾಯಲ್ ಹೇಳಿದ್ದಾರೆ ಎಂದು ವರದಿಯಾಗಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಗಂಗಾ ಘಾಟ್ನಲ್ಲಿ ಸಂತರು ಮತ್ತು ಪಂಡಿತರ ಜೊತೆಗೂಡಿ ಗಂಗಾ ಆರತಿಯನ್ನು ಮಾಡಿರುವುದಾಗಿ ತಿಳಿದುಬಂದಿದೆ.
ಮಂಗಳವಾರ ಕೂಡ ಆಶ್ರಮದಲ್ಲಿ ತಂಗುವ ಸಾಧ್ಯತೆ
ವಿರಾಟ್ ಕೊಹ್ಲಿ ಜೊತೆಯಲ್ಲಿ ಅವರ ಯೋಗ ತರಬೇತುದಾರ ಕೂಡ ಆಶ್ರಮದಲ್ಲಿ ಉಳಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜನವರಿ 31ರಂದು ಮುಂಜಾನೆ ಯೋಗಾಭ್ಯಾಸ, ಪೂಜೆಯ ನಂತರ ಆಶ್ರಮದಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನ ಹಾಗೂ ಭಂಡಾರದಲ್ಲಿ ಕೊಹ್ಲಿ ಮತ್ತು ಕುಟುಂಬ ಭಾಗವಹಿಸಲಿದೆ.
ಆಸ್ಟ್ರೇಲಿಯಾ ವಿರುದ್ಧದ ಸುದೀರ್ಘ ಟೆಸ್ಟ್ ಸರಣಿಗೆ ಮುನ್ನ ಮಾನಸಿಕ ಆರೋಗ್ಯಕ್ಕಾಗಿ ಅವರು ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ದೇವರ ಆಶಿರ್ವಾದದಿಂದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
2015 ಸೆಪ್ಟೆಂಬರ್ 11ರ ರಂದು ನರೇಂದ್ರ ಮೋದಿ ತಮ್ಮ ಆಧ್ಯಾತ್ಮಿಕ ಗುರು ಸ್ವಾಮಿ ದಯಾನಂದ ಗಿರಿಯವರನ್ನು ಈ ಆಶ್ರಮದಲ್ಲಿ ಭೇಟಿಯಾದ ಬಳಿಕ, ಈ ಆಶ್ರಮ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ಅನೇಕ ಗಣ್ಯರು ಇಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಭೇಟಿ ನೀಡುತ್ತಾರೆ.
ವೃಂದಾವನಕ್ಕೆ ಭೇಟಿ ನೀಡಿದ್ದ ಕೊಹ್ಲಿ ದಂಪತಿ
ಜನವರಿ ಆರಂಭದಲ್ಲಿ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾ ವೃಂದಾವನಕ್ಕೆ ಭೇಟಿ ನೀಡಿದ್ದರು. ವೃಂದಾವನದಲ್ಲಿ ಪರಮಾನಂದರ ಆಶೀರ್ವಾದ ಪಡೆದಿದ್ದರು. ವೃಂದಾವನದಿಂದ ವಾಪಸಾದ ಬಳಿಕ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಫೆಬ್ರವರಿ 9 ರಂದು ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅವರಿಂದ ಶತಕ ಬರುವ ವಿಶ್ವಾಸದಲ್ಲಿದ್ದಾರೆ ಅಭಿಮಾನಿಗಳು.