ರವಿಶಾಸ್ತ್ರಿ ಜೊತೆ ಸೇರಿದ ಕೊಹ್ಲಿಯ ರೆಕ್ಕೆಯನ್ನು ಬಿಸಿಸಿಐ ಬೇಕಂತಲೇ ಮುರಿದುಹಾಕಿದೆ ಎಂದ ಅತುಲ್
ವಿರಾಟ್ ಕೊಹ್ಲಿ ಭಾರತ ಏಕದಿನ ನಾಯಕತ್ವವನ್ನು ಕಳೆದುಕೊಂಡಿರುವುದರ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಇತ್ತೀಚೆಗೆ ನಡೆದ ಐಸಿಸಿ ಟೂರ್ನಿಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲಾಗದೇ ಇದ್ದದ್ದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು ಎಂದಿದ್ದಾರೆ. ಅಷ್ಟೇ ಅಲ್ಲದೆ ಕೋಚ್ ರವಿಶಾಸ್ತ್ರಿ ಜೊತೆ ಸೇರಿ ವಿರಾಟ್ ಕೊಹ್ಲಿ ಬಿಸಿಸಿಐಯನ್ನು ಮೂಲೆಗುಂಪು ಮಾಡಿದ್ದರು ಹೀಗಾಗಿಯೇ ಬಿಸಿಸಿಐ ಬೇಕಂತಲೇ ವಿರಾಟ್ ಕೊಹ್ಲಿಯ ರೆಕ್ಕೆಯನ್ನು ಮುರಿದು ಹಾಕಲು ನಿರ್ಧರಿಸಿದೆ. ಆದ್ದರಿಂದಲೇ ಇಷ್ಟೆಲ್ಲಾ ಜರುಗಿದೆ ಎಂದು ಅತುಲ್ ಹೇಳಿಕೆ ನೀಡಿದ್ದಾರೆ.
ಎಲ್ಲ ಮಾದರಿಗೂ ಏಕೈಕ ನಾಯಕ ಸರಿಯಲ್ಲ ಎಂದು ಈ ಹಿಂದೆಯೇ ಹೇಳಿದ್ದೆ ಎಂದ ಅತುಲ್
ನಾಯಕತ್ವದ ಹಂಚಿಕೆಯ ಕುರಿತು ವಿಶೇಷವಾಗಿ ಮಾತನಾಡಿರುವ ಅತುಲ್ ವಾಸನ್ ಎಲ್ಲಾ ಮಾದರಿಯ ಕ್ರಿಕೆಟ್ ತಂಡಗಳಿಗೂ ಓರ್ವನೇ ನಾಯಕನಾಗಿರುವುದು ಯಾವುದೇ ದೇಶಕ್ಕೂ ಕೂಡ ಸರಿಯಲ್ಲ ಎಂಬುದನ್ನು ಈ ಹಿಂದೆಯೇ ಹೇಳಿದ್ದೆ ಎಂದಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿದ ಅತುಲ್ ರೋಹಿತ್ ಶರ್ಮಾ ಐಪಿಎಲ್ ಟೂರ್ನಿಗಳಲ್ಲಿ ಟ್ರೋಫಿಗಳನ್ನು ಗೆಲ್ಲುವುದರ ಮೂಲಕ ತಾವು ಉತ್ತಮ ನಾಯಕ ಎಂಬುದನ್ನು ನಿರೂಪಿಸಿಕೊಂಡು ಟೀಮ್ ಇಂಡಿಯಾದ ನಾಯಕತ್ವವನ್ನು ಪಡೆದುಕೊಂಡಿದ್ದಾರೆ ಹಾಗೂ ವಿರಾಟ್ ಕೊಹ್ಲಿ ಯಾವುದೇ ಐಪಿಎಲ್ ಟ್ರೋಫಿಯನ್ನು ಹೊಂದಿಲ್ಲ ಎಂದು ಕೂಡ ಹೇಳಿದ್ದಾರೆ.
ಕೊಹ್ಲಿ ನಾಯಕತ್ವದ ಬಗ್ಗೆ ದಾಖಲೆಗಳೇ ಮಾತನಾಡುತ್ತವೆ
ಇಷ್ಟೆಲ್ಲಾ ಹೇಳಿಕೆಗಳನ್ನು ನೀಡಿರುವ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ವಿರಾಟ್ ಕೊಹ್ಲಿಯ ನಾಯಕತ್ವವನ್ನು ಕೂಡ ಹೊಗಳಿದ್ದಾರೆ. ವಿರಾಟ್ ಕೊಹ್ಲಿ ಅನೇಕ ವರ್ಷಗಳ ಕಾಲ ಭಾರತ ತಂಡವನ್ನು ಮುನ್ನಡೆಸಿದ್ದು, ಆತನ ನಾಯಕತ್ವ ಎಂಥದ್ದು ಎಂಬುದನ್ನು ಆತ ನಾಯಕನಾಗಿ ಸಾಧಿಸಿರುವ ದಾಖಲೆಗಳೇ ಹೇಳುತ್ತವೆ ಎಂದಿದ್ದಾರೆ.