ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯವನ್ನು ಭಾರತದ ವಿರುದ್ಧ ಗೆದ್ದು ಬೀಗಿತ್ತು.
ಈ ಮೂಲಕ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಸೋಲನ್ನು ಅನುಭವಿಸಿತ್ತು. ಹಾಗೂ ಕಳೆದ 12 ವಿಶ್ವಕಪ್ ಹಣಾಹಣಿಗಳಲ್ಲಿಯೂ ಭಾರತದ ವಿರುದ್ಧ ಸೋಲುಂಡಿದ್ದ ಪಾಕಿಸ್ತಾನ ಕೊನೆಗೂ ಟೀಮ್ ಇಂಡಿಯಾ ವಿರುದ್ಧ ವಿಶ್ವಕಪ್ ಪಂದ್ಯವೊಂದರಲ್ಲಿ ಗೆಲುವನ್ನು ಸಾಧಿಸಿದ ಸಾಧನೆಯನ್ನು ಮಾಡಿ ತನ್ನ ಸೋಲಿನ ಸರಪಳಿಗೆ ಬ್ರೇಕ್ ಹಾಕಿದೆ.
ಆಯ್ಕೆಗಾರರು ಪಾಂಡ್ಯನನ್ನು ಮನೆಗೆ ಕಳುಹಿಸಲು ಮುಂದಾದಾಗ ತಡೆದು ತಂಡದಲ್ಲಿ ಉಳಿಸಿಕೊಂಡಿದ್ದು ಆ ಒಬ್ಬ ವ್ಯಕ್ತಿ!
ಹೀಗೆ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲನ್ನು ಕಂಡ ಟೀಮ್ ಇಂಡಿಯಾ ಮತ್ತು ತಂಡದ ಆಟಗಾರರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಟೀಕೆಗಳು ನಡೆದವು. ಅದರಲ್ಲಿಯೂ ತಂಡದ ಪ್ರಮುಖ ಆಟಗಾರನಾದ ಮೊಹಮ್ಮದ್ ಶಮಿ ವಿರುದ್ಧ ಟೀಕೆಗಳು ಇನ್ನೂ ದೊಡ್ಡಮಟ್ಟದಲ್ಲಿಯೇ ನಡೆದವು. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಯಾವುದೇ ಬೌಲರ್ ಕೂಡ ಪಾಕಿಸ್ತಾನ ತಂಡದ ಆರಂಭಿಕ ಆಟಗಾರರ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಲೇ ಇಲ್ಲ. ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ ಮತ್ತು ಜಸ್ ಪ್ರೀತ್ ಬೂಮ್ರಾ ರೀತಿಯ ಅನುಭವಿ ಹಾಗೂ ಯುವ ಬೌಲರ್ಗಳು ಬೌಲಿಂಗ್ ಮಾಡಿದರೂ ಕೂಡ ಪಾಕಿಸ್ತಾನದ ಆರಂಭಿಕ ಆಟಗಾರರು ವಿಕೆಟ್ ಒಪ್ಪಿಸಲಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ವಿರುದ್ಧ ತುಸು ಹೆಚ್ಚಾಗಿಯೇ ಟ್ರೋಲ್ಸ್ ಮತ್ತು ಟೀಕೆಗಳು ವ್ಯಕ್ತವಾದವು.
ಈ ಟ್ರೋಲ್ಸ್ ಮತ್ತು ಟೀಕೆಗಳು ಹೆಚ್ಚಾಗಿ ನೆಡೆದಿದ್ದು ಭಾರತದ ಪ್ರಮುಖ ಆಟಗಾರನಾದ ಮೊಹಮ್ಮದ್ ಶಮಿ ವಿರುದ್ಧ ಬಹಳ ದೊಡ್ಡ ಮಟ್ಟದಲ್ಲಿದ್ದವು. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮೊಹಮ್ಮದ್ ಶಮಿ ವಿರುದ್ಧ ದೊಡ್ಡ ಮಟ್ಟದ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿ ವಿಶ್ವ ಕ್ರಿಕೆಟ್ನಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಇತರೆ ದೇಶದ ಕ್ರಿಕೆಟ್ ಅಭಿಮಾನಿಗಳು ತಮ್ಮ ತಂಡದ ಆಟಗಾರರ ವಿರುದ್ಧವೇ ಈ ರೀತಿಯಾದ ಟೀಕೆಗಳನ್ನು ಮಾಡಬಾರದು ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿ ಹೇಳಿದ್ದರು.
ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಾಗಬೇಕಾದ ಬದಲಾವಣೆಗಳನ್ನು ತಿಳಿಸಿದ ಪಠಾಣ್
ಮೊಹಮ್ಮದ್ ಶಮಿ ವಿರುದ್ಧ ಬೇಕಂತಲೇ ಟೀಕೆಗಳನ್ನು ಮಾಡಲಾಗುತ್ತಿದೆ ಎಂಬ ಸುದ್ದಿಯೂ ಕೂಡ ದೊಡ್ಡ ಮಟ್ಟದಲ್ಲಿ ಹಬ್ಬಿತ್ತು. ಹೀಗೆ ಮೊಹಮ್ಮದ್ ಶಮಿ ಅವರ ವಿರುದ್ಧ ಬೇಕಂತಲೇ ಟ್ರೋಲ್ ಮಾಡುವ ಮತ್ತು ಟೀಕೆ ವ್ಯಕ್ತಪಡಿಸುವವರಿಗೆ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಇನ್ನೂ ಹಲವಾರು ಪ್ರಮುಖ ಕ್ರಿಕೆಟಿಗರು ತಿಳಿಹೇಳುವ ಪ್ರಯತ್ನವನ್ನು ಮಾಡಿದ್ದರು.
ಇದೀಗ ಈ ಕುರಿತು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದು "ನಾವು ಮೈದಾನದಲ್ಲಿ ಒಳ್ಳೆಯ ಉದ್ದೇಶದಿಂದ ಕ್ರಿಕೆಟ್ ಆಟವನ್ನು ಆಡುತ್ತೇವೆ. ಆದರೆ ಕೆಲವು ಮೂಳೆಯಿಲ್ಲದ ಜೀವಿಗಳು ತಮ್ಮ ಗುರುತನ್ನು ಮರೆಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಆಟಗಾರರ ವಿರುದ್ಧ ಟೀಕೆಗಳನ್ನು ನಡೆಸುತ್ತಾರೆ. ತಮ್ಮ ಗುರುತನ್ನು ಮರೆಮಾಡಿಕೊಳ್ಳುವ ಅವರು ಎದುರಿಗೆ ಮಾತನಾಡುವ ಧೈರ್ಯವಿಲ್ಲದೇ ಆಟಗಾರರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಿಸಿ, ಅವರ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುತ್ತಾರೆ. ಇದು ಇತ್ತೀಚಿನ ದಿನಗಳಲ್ಲಿ ಒಂದು ರೀತಿಯ ಮನರಂಜನೆ ಆಗಿಬಿಟ್ಟಿದೆ. ಈ ರೀತಿಯ ಬೆಳವಣಿಗೆಗಳನ್ನು ನೋಡಲು ದುರದೃಷ್ಟವಾಗಿದೆ ಮತ್ತು ತುಂಬಾ ದುಃಖಕರವಾಗಿದೆ" ಎಂದು ವಿರಾಟ್ ಕೊಹ್ಲಿ ಮೊಹಮ್ಮದ್ ಶಮಿ ವಿರುದ್ಧ ಟೀಕೆ ಮಾಡಿದವರಿಗೆ ಚಾಟಿ ಬೀಸಿದರು.