ರೋಹಿತ್ ಶರ್ಮಾರನ್ನು ಉಪನಾಯಕ ಸ್ಥಾನದಿಂದ ತೆಗೆಯುವಂತೆ ವಿರಾಟ್ ಕೊಹ್ಲಿ ಸಲಹೆ
ಬಿಸಿಸಿಐನ ಬಲ್ಲ ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಪ್ರಸ್ತುತ ಟೀಮ್ ಇಂಡಿಯಾದ ಉಪನಾಯಕನಾಗಿರುವ ರೋಹಿತ್ ಶರ್ಮಾರನ್ನು ಉಪ ನಾಯಕನ ಸ್ಥಾನದಿಂದ ತೆಗೆಯಬೇಕೆಂದು ಸಲಹೆಯನ್ನು ನೀಡಿದ್ದಾರಂತೆ. ರೋಹಿತ್ ಶರ್ಮಾಗೆ 34 ವರ್ಷ ವಯಸ್ಸಾಗಿದ್ದು ಹಿರಿಯ ಆಟಗಾರನಾಗಿರುವ ಕಾರಣ ಆತನನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಬೇಕೆಂದು ಕೊಹ್ಲಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಭಾರತಕ್ಕೆ ಈ ಆಟಗಾರರು ಉಪ ನಾಯಕರಾಗಬೇಕು ಎಂದ ಕೊಹ್ಲಿ
ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಳಿಕ ಟೀಮ್ ಇಂಡಿಯಾ ಟಿ ಟ್ವೆಂಟಿ ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳಗಿಳಿಯಲಿದ್ದು ಭಾರತ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳಿಗೆ ಇಬ್ಬರು ನೂತನ ಉಪ ನಾಯಕರ ಹೆಸರನ್ನು ವಿರಾಟ್ ಕೊಹ್ಲಿ ಸೂಚಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಹೌದು, ರೋಹಿತ್ ಶರ್ಮಾರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಿದ ನಂತರ ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಕೆಎಲ್ ರಾಹುಲ್ ಅವರನ್ನು ಉಪನಾಯಕನನ್ನಾಗಿ ಘೋಷಿಸಬೇಕು ಮತ್ತು ಭಾರತ ಟಿ ಟ್ವೆಂಟಿ ತಂಡಕ್ಕೆ ರಿಷಭ್ ಪಂತ್ ಅವರನ್ನು ಉಪನಾಯಕನನ್ನಾಗಿ ಘೋಷಣೆ ಮಾಡಬೇಕೆಂದು ವಿರಾಟ್ ಕೊಹ್ಲಿ ಬಿಸಿಸಿಐಗೆ ಸಲಹೆ ನೀಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
ಹಾಗಾದ್ರೆ ಟೀಮ್ ಇಂಡಿಯಾದ ನಾಯಕ ಯಾರು?
ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಟಿ ಟ್ವೆಂಟಿ ತಂಡದಿಂದ ಕೆಳಗಿಳಿಯುವ ಘೋಷಣೆಯನ್ನು ಮಾಡುತ್ತಿದ್ದಂತೆಯೇ ಕೊಹ್ಲಿ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಹೆಚ್ಚಾಗಿವೆ. ಇನ್ನು ಕೊಹ್ಲಿ ಟೀಮ್ ಇಂಡಿಯಾ ಏಕದಿನ ತಂಡಕ್ಕೆ ಕೆಎಲ್ ರಾಹುಲ್ ಉಪ ನಾಯಕರಾಗಬೇಕು ಮತ್ತು ಟಿ ಟ್ವೆಂಟಿ ತಂಡಕ್ಕೆ ರಿಷಭ್ ಪಂತ್ ಉಪ ನಾಯಕರಾಗಬೇಕು ಎಂಬ ಸಲಹೆಯನ್ನು ನೀಡಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ತಿಳಿಸಿದ್ದು ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ತಂಡದ ನಾಯಕನಾಗಬೇಕು ಎಂಬುದನ್ನು ವಿರಾಟ್ ಕೊಹ್ಲಿ ಪರೋಕ್ಷವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ನಂತರ ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಈ ಮೂವರಲ್ಲಿ ಒಬ್ಬರು ಭಾರತ ಟಿ ಟ್ವೆಂಟಿ ತಂಡದ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಗಳಿವೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ.