ಕೊಹ್ಲಿಗೆ ಧೋನಿ ನೀಡಿದ್ರು ಈ ಮಹತ್ವದ ಸಲಹೆ
ಆಟಗಾರನೋರ್ವ ಮಾಡುವ ತಪ್ಪುಗಳ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ ಈ ಹಿಂದೆ ಈ ವಿಷಯದ ಕುರಿತಾಗಿ ಎಂಎಸ್ ಧೋನಿ ತಮಗೆ ನೀಡಿದ್ದ ಸಲಹೆಯೊಂದನ್ನು ಬಿಚ್ಚಿಟ್ಟಿದ್ದಾರೆ. "ಎಂಎಸ್ ಧೋನಿ ಈ ಹಿಂದೆ ಒಮ್ಮೆ ಆಟಗಾರನೋರ್ವ ಈ ಹಿಂದೆ ತಾನು ಮಾಡಿದ್ದ ತಪ್ಪೊಂದನ್ನು ಪುನಃ ಮಾಡಬೇಕೆಂದರೆ 7ರಿಂದ 8 ತಿಂಗಳ ಅಂತರವಾದರೂ ಇರಬೇಕು ಎಂದು ಹೇಳಿದ್ದರು. ಹೀಗೆ ತಪ್ಪುಗಳ ನಡುವೆ ಅಂತರವನ್ನು ಕಾಯ್ದುಕೊಂಡರೆ ಮಾತ್ರ ನೀನು ಹೆಚ್ಚು ದಿನ ಕ್ರಿಕೆಟ್ ಆಡಬಹುದು ಎಂದಿದ್ದರು. ಹಾಗೂ ಧೋನಿ ನೀಡಿದ ಈ ಸಲಹೆ ನನ್ನ ಕ್ರಿಕೆಟ್ ಜೀವನದುದ್ದಕ್ಕೂ ಅಂಟಿಕೊಂಡಿದೆ" ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ರಿಷಭ್ ಪಂತ್ ಔಟ್ ಆದ ರೀತಿ ಭಾರೀ ಚರ್ಚೆಗೆ ಕಾರಣವಾಗಿತ್ತು
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಜೋಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಮೂರನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಶೂನ್ಯಕ್ಕೆ ನಿರ್ಗಮಿಸಿದ್ದರು. ಕಗಿಸೋ ರಬಾಡ ಎಸೆದ ಶಾರ್ಟ್ ಡಿಲೆವರಿಗೆ ಮುನ್ನುಗ್ಗಿ ಹೊಡೆತವನ್ನು ಬಾರಿಸಲು ಯತ್ನಿಸಿದ ರಿಷಭ್ ಪಂತ್ ವಿಫಲವಾದ ತರುವಾಯ ಚೆಂಡು ಎಡ್ಜ್ ಆಗಿ ವಿಕೆಟ್ ಕೀಪರ್ ಕೈ ಸೇರಿತ್ತು. ಹೀಗೆ ರಿಷಭ್ ಪಂತ್ ಬೇಡದ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹಾಗೂ ಟೀಕೆಗಳು ನಡೆದಿದ್ದವು.
ಭಾರತ ಮತ್ತು ದಕ್ಷಿಣ ಆಫ್ರಿಕಾ ತೃತೀಯ ಟೆಸ್ಟ್ ಪಂದ್ಯ ಯಾವಾಗ?
ಸದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸರಣಿಯಲ್ಲಿ ಸಮಬಲ ಸಾಧಿಸಿರುವ ಕಾರಣದಿಂದ ಇತ್ತಂಡಗಳ ನಡುವೆ ನಡೆಯಲಿರುವ ತೃತೀಯ ಟೆಸ್ಟ್ ಪಂದ್ಯ ಸರಣಿಯಲ್ಲಿ ಯಾರು ವಿಜೇತರು ಎಂಬುದನ್ನು ತೀರ್ಮಾನಿಸಲಿದೆ. ಹೀಗಾಗಿ ಇತ್ತಂಡಗಳ ನಡುವೆ ನಡೆಯಲಿರುವ ತೃತೀಯ ಟೆಸ್ಟ್ ಪಂದ್ಯ ದೊಡ್ಡ ಮಟ್ಟದ ಕುತೂಹಲಕ್ಕೆ ಕಾರಣವಾಗಿದ್ದು ಕೇಪ್ ಟೌನ್ ನಗರದ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಜನವರಿ 11ರ ಮಂಗಳವಾರದಂದು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.