ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ತಂಡವನ್ನ ಮುನ್ನಡೆಸಲಿದ್ದಾರೆ. ಫೆಬ್ರವರಿ 6ರಿಂದ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಹಿಟ್ಮ್ಯಾನ್ ಲಿಮಿಟೆಡ್ ಓವರ್ ಕ್ರಿಕೆಟ್ನಲ್ಲಿ ನಾಯಕನಾಗಿ ಗುರುತಿಸಿಕೊಳ್ಳಲಿದ್ದಾರೆ.
ಕಳೆದ ವರ್ಷ ವಿರಾಟ್ ಕೊಹ್ಲಿಯನ್ನ ಏಕದಿನ ಕ್ರಿಕೆಟ್ ನಾಯಕತ್ವದಿಂದ ವಜಾಗೊಳಿಸಿದ ಬಳಿಕ ರೋಹಿತ್ ಶರ್ಮಾರನ್ನ ಅಯ್ಕೆ ಮಾಡಲಾಯಿತು. ಈ ಕುರಿತಾಗಿ ಸಾಕಷ್ಟು ವಿವಾದ ಚರ್ಚೆಗೂ ಕಾರಣವಾಯಿತು. ಅದ್ರಲ್ಲೂ ದಕ್ಷಿಣ ಆಫ್ರಿಕಾದಲ್ಲಿ 1-2 ಅಂತರದಲ್ಲಿ ಸರಣಿ ಸೋತ ಬಳಿಕ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಾಯಕತ್ವದಿಂದಲೂ ಹೊರನಡೆದರು.
ಆದ್ರೆ ರೋಹಿತ್ ಶರ್ಮಾನನ್ನ ನಾಯಕನಾಗಿ ಆಯ್ಕೆ ಮಾಡಿದರ ಕುರಿತಾಗಿ ಕೊಹ್ಲಿಯ ಬಾಲ್ಯದ ಕೋಚ್ ರಾಜಕುಮಾರ್ ಶರ್ಮಾ ಉತ್ತಮ ಆಯ್ಕೆ ಎಂದು ಬೆಂಬಲಿಸಿದ್ದಾರೆ. ವಿರಾಟ್ ಕೊಹ್ಲಿಯಿಂದ ತೆರವಾದ ಸ್ಥಾನಕ್ಕೆ ರೋಹಿತ್ ಆಯ್ಕೆಮಾಡಿರುವುದು ಉತ್ತಮ ನಿರ್ಧಾರ ಎಂದಿದ್ದಾರೆ.
ರೋಹಿತ್ ಶರ್ಮಾ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಅನುಭವ ಹೊಂದಿದ್ದಾರೆ. ರೋಹಿತ್ ಭಾರತದ ಕ್ರಿಕೆಟ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಭಾವಿಸಿದ್ದಾರೆ.
"ರೋಹಿತ್ ಶರ್ಮಾ ಹೊರತುಪಡಿಸಿ ಯಾವುದೇ ಸ್ಪರ್ಧಿ ಇಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಎಲ್ಲಾ ಮೂರು ಸ್ವರೂಪಗಳಲ್ಲಿ ಸ್ಥಾನ ಖಚಿತವಾಗಿರುವ ಬೇರೆ ಯಾವುದೇ ಆಟಗಾರ ಇಲ್ಲ. ಹಾಗಾಗಿ ಅವರು ಉತ್ತಮ ಆಯ್ಕೆ ಎಂದು ನಾನು ನಂಬುತ್ತೇನೆ ಮತ್ತು ಅವರು ಐಪಿಎಲ್ನಲ್ಲಿ ಅತ್ಯುತ್ತಮ ನಾಯಕತ್ವವನ್ನು ಮಾಡಿದ್ದಾರೆ. ಅವರು ಭಾರತ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂಬ ಸಂಪೂರ್ಣ ನಿರೀಕ್ಷೆ ನನ್ನಲ್ಲಿದೆ '' ಎಂದು ರಾಜ್ಕುಮಾರ್ ಇಂಡಿಯಾ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ರೋಹಿತ್ ಕುರಿತಾಗಿ ಮತ್ತಷ್ಟು ಮಾತನಾಡಿರುವ ರಾಜಕುಮಾರ್, ಆಯ್ಕೆಗಾರರು ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ಗೆ ಅಗತ್ಯವಿರುವಂತೆ ತಂಡವನ್ನ ನೀಡಬೇಕು ಹೇಳಿದ್ದಾರೆ.
''ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ನಿರ್ದಿಷ್ಟ ತಂಡವನ್ನು ಬಯಸಿದರೆ, ಆಯ್ಕೆದಾರರು ಅವರಿಗೆ ಆ ತಂಡವನ್ನು ನೀಡುವುದು ಸರಿ ಎಂದು ಭಾವಿಸುತ್ತೇನೆ. ಅದು ಹಾಗೆಯೇ ಆಗುತ್ತದೆ ಎಂದು ನಾನು ನಂಬಿದ್ದೇನೆ "ಎಂದು ಅವರು ಹೇಳಿದರು.
ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಮತ್ತು ಟಿ20 ಸರಣಿಗೆ ಟೀಂ ಇಂಡಿಯಾ 18 ಸದಸ್ಯರ ಆಯ್ಕೆ ಮಾಡಲಾಗಿದೆ. ಮೂರು ಏಕದಿನ ಪಂದ್ಯಗಳು ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಮೂರು ಟಿ20 ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.