ಕೊಹ್ಲಿ ನಾಯಕತ್ವಕ್ಕೆ ಸಮಸ್ಯೆ ಇದೆ ಎಂಬುದು ಆಗಲೇ ತಿಳಿದಿತ್ತು ಎಂದ ಅಖ್ತರ್
ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ವೇಳೆ ನಾನೂ ಕೂಡ ದುಬೈನಲ್ಲಿ ಇದ್ದೆ ಹಾಗೂ ವಿರಾಟ್ ಕೊಹ್ಲಿ ನಾಯಕತ್ವ ಸಮಸ್ಯೆಯ ಸುಳಿಯಲ್ಲಿದೆ ಎಂಬುದನ್ನು ಅರಿತಿದ್ದೆ ಎಂದು ಶೋಯಬ್ ಅಖ್ತರ್ ಹೇಳಿದ್ದಾರೆ. ಆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲದೇ ಇದ್ದರೆ ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಳ್ಳಬಹುದು ಎಂದು ಆಗಲೇ ಊಹಿಸಿದ್ದೆನೆಂದು ಶೋಯಬ್ ಅಖ್ತರ್ ಹೇಳಿಕೊಂಡಿದ್ದಾರೆ.
ಕೊಹ್ಲಿ ವಿರುದ್ಧ ಲಾಬಿ ನಡೆಸಿದ್ದರು
ಇನ್ನೂ ಮುಂದುವರೆದು ಮಾತನಾಡಿರುವ ಶೋಯಬ್ ಅಖ್ತರ್ ವಿರಾಟ್ ಕೊಹ್ಲಿ ವಿರುದ್ಧ ಲಾಬಿಗಳು ನಡೆದಿದ್ದವು ಹಾಗೂ ತಂಡದಲ್ಲಿಯೇ ಆತನ ವಿರುದ್ಧ ಕೆಲ ಮಂದಿ ನಿಂತಿದ್ದರು, ಹೀಗಾಗಿಯೇ ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಿ ಕೆಳಗಿಳಿದರು ಎಂದು ಶೋಯಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. ಹಾಗೂ ಇಂತಹ ಪರಿಸ್ಥಿತಿ ವಿರಾಟ್ ಕೊಹ್ಲಿಗೆ ಪರೀಕ್ಷೆಯ ಸಮಯವಾಗಿದ್ದು, ಕೊಹ್ಲಿ ಯಾವುದಕ್ಕೂ ಹೆದರದೇ ಧೈರ್ಯದಿಂದಿರಬೇಕು ಹಾಗೂ ಉತ್ತಮ ಪ್ರದರ್ಶನ ನೀಡಿ ಕಮ್ ಬ್ಯಾಕ್ ಮಾಡಬೇಕು ಎಂದು ಶೋಯಬ್ ಅಖ್ತರ್ ಹೇಳಿದ್ದಾರೆ.
ಗಂಗೂಲಿ ವಿರುದ್ಧ ಚಾಟಿ ಬೀಸಿದ್ರಾ ಶೋಯಬ್ ಅಖ್ತರ್?
ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ್ದರ ಕುರಿತು ಇಲ್ಲಿಯವರೆಗೂ ಮಾತನಾಡಿರುವ ಯಾವುದೇ ಕ್ರಿಕೆಟಿಗ ಕೂಡ ಕೊಹ್ಲಿ ವಿರುದ್ಧ ಲಾಬಿ ನಡೆದಿತ್ತು ಎಂಬ ಹೇಳಿಕೆಯನ್ನು ನೀಡಿರಲಿಲ್ಲ. ಆದರೆ ಶೋಯಬ್ ಅಖ್ತರ್ ಆ ರೀತಿಯ ಹೇಳಿಕೆ ನೀಡುವುದರ ಮೂಲಕ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವೆ ದೊಡ್ಡ ಮಟ್ಟದ ಮನಸ್ತಾಪವಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದಂತಿದೆ. ಸೌರವ್ ಗಂಗೂಲಿ ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ, ಇದಕ್ಕೆಲ್ಲಾ ವಿರಾಟ್ ಕೊಹ್ಲಿ ಭಯಪಡಬಾರದು ಎಂಬರ್ಥದಲ್ಲಿ ಶೋಯಬ್ ಅಖ್ತರ್ ಹೇಳಿಕೆ ನೀಡಿದಂತಿದೆ. ಸದ್ಯ ಶೋಯಬ್ ಅಖ್ತರ್ ನೀಡಿರುವ ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಅಖ್ತರ್ ಗಂಗೂಲಿ ಕುರಿತಾಗಿಯೇ ಈ ಹೇಳಿಕೆಯನ್ನು ನೀಡಿದ್ದಾರೆ ಎಂಬ ಕಾಮೆಂಟ್ ಹೆಚ್ಚಾಗಿವೆ.