ಇಶಾನ್ ಕಿಶನ್ ಪ್ರದರ್ಶನಕ್ಕೆ ಮನಸೋತ ಸೆಹ್ವಾಗ್
ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಇಶಾನ್ ಕಿಶನ್ ನೀಡಿದ ಪ್ರದರ್ಶನಕ್ಕೆ ಮನಸೋತಿದ್ದಾರೆ. ಇಶಾನ್ ಕಿಶನ್ ದಕ್ಷಿಣ ಆಪ್ರಿಕಾ ವಿರುದ್ಧದ ಸರಣಿಯಲ್ಲಿ ಗಳಿಸಿದ ರನ್ಗಿಂತಲೂ ಅಲ್ಲಿ ಅವರು ತೋರಿದ ಆಕ್ರಮಣಶೀಲತೆಗೆ ಸೆಹ್ವಾಗ್ಗೆ ಹೆಚ್ಚು ಇಷ್ಟವಾಗಿದೆ. ಟಿ20 ಕ್ರಿಕೆಟ್ನಲ್ಲಿ ಭಾರತ ತಂಡ ಯಾವ ರೀತಿಯ ಮನಸ್ಥಿತಿಯನ್ನು ಹೊಂದಬೇಕು ಎಂದು ಇಶಾನ್ ಕಿಶನ್ ತೋರಿಸಿದಂತಿತ್ತು ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.
ರೋಹಿತ್ ಮತ್ತು ರಾಹುಲ್ಗೆ ಕ್ರಮಾಂಕ ಹೇಳಿದ ಸೆಹ್ವಾಗ್
ಇಶಾನ್ ಕಿಶನ್ ಆರಂಭಿಕ ಆಟಗಾರನಾಗಿ ಒಂದು ತುದಿಯಲ್ಲಿ ಕಣಕ್ಕಿಳಿಯುವುದು ಅಗತ್ಯ ಎಂದಿರುವ ವೀರೇಂದ್ರ ಸೆಹ್ವಾಗ್ ಮತ್ತೊಂದು ತುದಿಯಲ್ಲಿ ರೋಹಿತ್ ಶರ್ಮಾ ಅಥವಾ ಕೆಎಲ್ ರಾಹುಲ್ ಕಣಕ್ಕಿಳಿಯಲು ಎಂದಿದ್ದಾರೆ. ರೋಹಿತ್ ಶರ್ಮಾ ಆರಂಬಿಕ ಆಟಗಾರನಾಗಿ ಕಣಕ್ಕಿಳಿದರೆ ಕೆಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡಲು ಇಳಿಯಬೇಕಿದೆ ಎಂದಿದ್ದಾರೆ ಮಾಜಿ ಕ್ರಿಕೆಟಿಗ ಸೆಹ್ವಾಗ್.
ಯುವ ವೇಗಿಗೂ ಸ್ಥಾನವಿರಲಿ
ಇನ್ನು ಈ ಸಂದರ್ಭದಲ್ಲಿ ಬೌಲಿಂಗ್ ವಿಭಾಗದ ಬಗ್ಗೆ ಸೆಹ್ವಾಗ್ ಮಾತನಾಡಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಅನುಭವಿಗಳಾದ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಅಗತ್ಯವಿದ್ದು ಅವರೊಂದಿಗೆ ಯುವ ವೇಗಿ ಉಮ್ರಾನ್ ಮಲಿಕ್ಗೆ ಕೂಡ ಅವಕಾಶ ನೀಡಬೇಕು ಎಂದಿದ್ದಾರೆ. ಈ ಸಂದರ್ಭದಲ್ಲಿ ಸೆಹ್ವಾಗ್ ಯುವ ಆಟಗಾರ ಉಮ್ರಾನ್ ಮಲಿಕ್ ಭಾರತ ತಂಡದಲ್ಲಿ ಎಲ್ಲಾ ಮಾದರಿಯಲ್ಲಿಯೂ ಮ್ಯಾಚ್ ವಿನ್ನರ್ ಎನಿಸಿಕೊಳ್ಳುವ ಬೌಲರ್ ಎಂದಿದ್ದಾರೆ.
ಸುದೀರ್ಘ ಕಾಲ ತಂಡದಲ್ಲಿ ಸ್ಥಾನ ಪಡೆಯುವ ಆಟಗಾರ
ಇನ್ನು ಉಮ್ರಾನ್ ಮಲಿಕ್ ಬಗ್ಗೆ ವಿರೇಂದ್ರ ಸೆಹ್ವಾಗ್ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ನಾನು ಅತಿಯಾಗಿ ಮೆಚ್ಚಿಕೊಂಡಿರುವ ಬೌಲರ್ ಎಂದರೆ ಅದು ಉಮ್ರಾನ್ ಮಲಿಕ್. ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಜೊತೆಗೆ ಅವರು ಭಾರತ ತಂಡದ ಭಾಗವಾಗಿರಬೇಕು. ಐಪಿಎಲ್ನಿಂದ ಸಾಕಷ್ಟು ಯುವ ಭರವಸೆಯ ವೇಗಿಗಳು ದೊರೆತಿದ್ದಾರೆ. ಆದರೆ ಉಮ್ರಾನ್ ಮಲಿಕ್ ಅವರಲ್ಲಿರುವ ಕೌಶಲ್ಯ ಹಾಗೂ ಪ್ರತಿಬೆಯ ಕಾರಣದಿಂದಾಗಿ ಅವರು ಭಾರತ ತಂಡದಲ್ಲಿ ಖಂಡಿತವಾಗಿಯೂ ಸುದೀರ್ಘ ಕಾಲ ಉಳಿದುಕೊಳ್ಳಲಿದ್ದಾರೆ" ಎಂದು ಸೆಹ್ವಾಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.