ಬೆಂಗಳೂರು, ಜನವರಿ 08: ಟೀಂ ಇಂಡಿಯಾದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರು ಟಿ20 ಅಂತಾರಾಷ್ಟ್ರೀಯ ವಿಶ್ವಕಪ್ ಗಾಗಿ ತಮ್ಮ ಆಯ್ಕೆಯ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಮಾಜಿ ನಾಯಕ, ಹಿರಿಯ ವಿಕೆಟ್ ಕೀಪರ್ ಎಂಎಸ್ ಧೋನಿಗೆ ಸ್ಥಾನ ಕಲ್ಪಿಸಿಲ್ಲ. ಜೊತೆಗೆ ಆರಂಭಿಕ ಆಟಗಾರ ಶಿಖರ್ ಧವನ್ ಗೂ ಕೊಕ್ ನೀಡಿದ್ದಾರೆ. ಈ ಆಯ್ಕೆ ಕಾರಣ ಇದೀಗ ಬಹಿರಂಗವಾಗಿದೆ.
ಆಸ್ಟ್ರೇಲಿಯಾದಲ್ಲಿ ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ಐಸಿಸಿ ವಿಶ್ವ ಟಿ20 ಟೂರ್ನಮೆಂಟ್ ನಡೆಯಲಿದೆ. ಐಸಿಸಿ ವಿಶ್ವಕಪ್ 2019ರ ಸೆಮಿಫೈನಲ್ ಪಂದ್ಯದಲ್ಲಿ ರನೌಟ್ ಆದ ಬಳಿಕ ಮತ್ತೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಜೊತೆಗೆ ಹಾಲಿ ಟಿ20 ಸಮತೋಲನದಿಂದ ಕೂಡಿದ್ದು, ವಿಕೆಟ್ ಕೀಪರ್ ಆಗಿ ರಿಷಬ್ ಪಂತ್ ಆ ವೇಳೆಗೆ ಇನ್ನಷ್ಟು ಪಳಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ ಎಂದು ಲಕ್ಷ್ಮಣ್ ಹೇಳಿದ್ದಾರೆ.
ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ಬದಲಿಗೆ ಬಲಗೈ ಆಟಗಾರ ಕೆಎಲ್ ರಾಹುಲ್ ಅವರನ್ನು ಲಕ್ಷ್ಮಣ್ ಆಯ್ಕೆ ಮಾಡಿದ್ದಾರೆ. ಗಾಯಾಳುವಾಗಿದ್ದ ಧವನ್ ಅವರು ಇನ್ನೂ ಲಯಕ್ಕೆ ಮರಳಿಲ್ಲ. ಸದ್ಯಕ್ಕೆ ಲಂಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಬದಲಿಗೆ ಧವನ್ ಹಾಗೂ ರಾಹುಲ್ ಕಣಕ್ಕಿಳಿದಿದ್ದು, ಧವನ್ ಅವರು ಈ ಸರಣಿ ಹಾಗೂ ಐಪಿಎಲ್ ನಲ್ಲಿ ಯಾವ ರೀತಿ ಆಡುತ್ತಾರೆ ಎಂಬುದು ಅವರ ಆಯ್ಕೆಗೆ ಮಾನದಂಡವಾಗಲಿದೆ. ಕಳೆದ ವರ್ಷದಿಂದ ಆರಂಭಿಕ ಆಟಗಾರರಾಗಿ ರೋಹಿತ್ ಹಾಗೂ ರಾಹುಲ್ ಉತ್ತಮ ಸರಾಸರಿ ಹೊಂದಿದ್ದು, ರಾಹುಲ್ ವಿಕೆಟ್ ಕೀಪರ್ ಆಗಿ ಕೂಡಾ ತಂಡಕ್ಕೆ ಬಲ ತುಂಬಬಹುದಾಗಿದೆ ಎಂಬ ಕಾರಣ ಲಕ್ಷ್ಮಣ್ ನೀಡಿದ್ದಾರೆ.
ಮಾಜಿ ಕ್ರಿಕೆಟರ್ ಕಮ್ ಕಾಮೆಂಟೆಟರ್ ಲಕ್ಷ್ಮಣ್ ಅವರು ಆಲ್ ರೌಂಡರ್ ಗಳ ಪೈಕಿ ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಿದ್ದಾರೆ. ಯುವ ವೇಗಿ ನವದೀಪ್ ಸೈನಿ, ಶಾರ್ದೂಲ್ ಠಾಕೂರ್ ಹಾಗೂ ಸ್ಪಿನ್ನರ್ ಕಮ್ ಬ್ಯಾಟ್ಸ್ ಮನ್ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಿಲ್ಲ.
ಐಸಿಸಿ ವಿಶ್ವ ಟಿ20ಗಾಗಿ ಲಕ್ಷ್ಮಣ್ ಆಯ್ಕೆಯ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಜಸ್ ಪ್ರೀತ್ ಬೂಮ್ರಾ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮನೀಶ್ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್.