ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ಈ ಮೆಗಾ ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ಭಾರತೀಯ ಕ್ರಿಕೆಟ್ ತಂಡ ಮತ್ತೊಂದು ಮಹತ್ವದ ಸರಣಿಗೆ ಸಜ್ಜಾಗಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದ್ದು ಹರಿಣಗಳ ಪಡೆ ಈ ಸರಣಿಗಾಗಿ ಭಾರತ ಪ್ರವಾಸವನ್ನು ಕೈಗೊಳ್ಳಲಿದೆ. ಈ ಸರಣಿಗೆ ಈಗಾಗಲೇ ದಕ್ಷಿಣ ಆಫ್ರಿಕಾ ತಂಡವನ್ನು ಘೋಷಣೆ ಮಾಡಲಾಗಿದ್ದು ಭಾರತ ತಂಡದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.
ಈ ಮಧ್ಯೆ ಕುತೂಹಲಕಾರಿ ಬೆಳವಣಿಗೆಯೊಂದು ನಡೆಯುವ ಬಗ್ಗೆ ಸುಳಿವು ದೊರೆತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಹಾಗೂ ಇಂಗ್ಲೆಂಡ್ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಪ್ರತ್ಯೇಕ ತಂಡಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಮೂರು ಅಭ್ಯಾಸ ಪಂದ್ಯಗಳನ್ನು ಹಮ್ಮಕೊಳ್ಳಲಾಗಿದ್ದು ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಈ ವೇಳಾಪಟ್ಟಿ ಅಡ್ಡಿಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಯೋಜನೆಯನ್ನು ಬಿಸಿಸಿಐ ಮಾಡಿಕೊಂಡಿದೆ ಎನ್ನಲಾಗಿದೆ.
ಡೋಪಿಂಗ್ ಉಲ್ಲಂಘನೆ; ಐಸಿಸಿಯಿಂದ 9 ತಿಂಗಳು ಅಮಾನತಾದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್
ಈ ಕಾರಣದಿಂದಾಗಿ ರಾಹುಲ್ ದ್ರಾವಿಡ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ರಾಹುಲ್ ದ್ರಾವಿಡ್ ಕೋಚ್ ಆಗಿ ಕರ್ತವ್ಯ ನಿಭಾಯಿಸುವುದು ಅಸಂಭವ. ಹೀಗಾಗಿ ಬಿಸಿಸಿಐ ಪ್ರಸ್ತುತ ನ್ಯಾಶನಲ್ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯ ಮುಖ್ಯಸ್ಥರಾಗಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಎಸ್ ಲಕ್ಷ್ಮಣ್ ಬಳಿ ವಿಶೇಷ ಮನವಿಯನ್ನು ಮಾಡಿಕೊಂಡಿದ್ದು ಈ ಟಿ20 ಸರಣಿಗಾಗಿ ಕೋಚ್ ಹುದ್ದೆಯನ್ನು ನಿಭಾಯಿಸುವಂತೆ ಕೇಳಿಕೊಂಡಿದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ವಿರುದ್ಧ ಕಳೆದ ವರ್ಷ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಬಾಕಿಯಿದ್ದು ಈ ಒಂದು ಟೆಸ್ಟ್ ಪಂದ್ಯಕ್ಕೆ ಬರ್ಮಿಂಗ್ಹ್ಯಾಮ್ ಆತಿಥ್ಯವಹಿಸಿಕೊಳ್ಳಲಿದೆ. ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಈ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ಆಯೋಜನೆಯಾಗಬೇಕಾಗಿತ್ತು. 2-1 ಅಂತರದಿಂದ ಈ ಸರಣಿಯಲ್ಲಿ ಭಾರತ ಮುನ್ನಡೆಯಲ್ಲಿದ್ದು ಸರಣಿಯನ್ನು ವಶಕ್ಕೆ ಪಡೆಯುವ ಅವಕಾಶ ಹೆಚ್ಚಿದೆ. ಈ ಮಹತ್ವದ ಸರಣಿಗೂ ಮುನ್ನ ಭಾರತ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಲಿದೆ. ಇದೇ ಅವಧಿಯಲ್ಲಿ ಭಾರತದ ಸೀಮಿತ ಓವರ್ಗಳ ತಂಡ ಐರ್ಲೆಂಡ್ನಲ್ಲಿ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ.
IPL 2022: MI vs SRH ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್; ಆರ್ಸಿಬಿ ಫ್ಯಾನ್ಸ್ಗೆ ನಿರಾಸೆ
ದ್ರಾವಿಡ್ ಕೂಡ ತಾತ್ಕಾಲಿಕ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದರು: ಇನ್ನು ಬಿಸಿಸಿಐ ಕಳೆದ ವರ್ಷ ಕೂಡ ಇದೇ ರೀತಿಯ ಪ್ರಯೋಗವನ್ನು ನಡೆಸಿತ್ತು. ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಸಂದರ್ಭದಲ್ಲಿಯೇ ಶ್ರೀಲಂಕಾ ವಿರುದ್ಧ ಸೀಮಿತ ಓವರ್ಗಳ ಸರಣಿಯನ್ನು ಆಯೋಜನೆ ಮಾಡಿತ್ತು. ಇದಕ್ಕೆ ಪ್ರತ್ಯೇಕ ತಂಡವನ್ನು ಕಳುಹಿಸಿಕೊಟ್ಟಿತ್ತು. ಅಂದು ಎನ್ಸಿಎ ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡ್ ಅವರನ್ನು ಈ ಸಂದರ್ಭದಲ್ಲಿ ಶ್ರೀಲಂಕಾಗೆ ತೆರಳಿದ್ದ ಸೀಮಿತ ಓವರ್ಗಳ ತಂಡಕ್ಕೆ ತಾತ್ಕಾಲಿಕ ಕೋಚ್ ಆಗಿ ನೇಮಿಸಿತ್ತು.
ಇನ್ನು ಚೇತನ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಆಯ್ಕೆ ಸಮಿತಿ ಶೀಘ್ರದಲ್ಲಿಯೇ ಸಭೆ ಸೇರಲಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಲಿದೆ. ಮುಂದಿನ ವಾರ ಎರಡು ಸರಣಿಗಳಿಗೂ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ.