ಮೈಸೂರು, ಆ.29 : ಕರ್ನಾಟಕ ಪ್ರಿಮಿಯರ್ ಲೀಗ್ ನ ಚೊಚ್ಚಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮಂಗಳೂರು ಯುನೈಟೆಡ್ ವಿರುದ್ಧ ಕಿಚ್ಚ ಸುದೀಪ್ ಅವರ ರಾಕ್ ಸ್ಟಾರ್ಸ್ ತಂಡ ಸೋಲುಂಡಿದೆ. ಆದರೆ, ಗಂಗೋತ್ರಿ ಗ್ಲೇಡ್ ನಲ್ಲಿ ನಡೆದ ಕಾರ್ಬನ್ ಒಡೆಯರ್ ಕಪ್ ಪಂದ್ಯ ಪ್ರೇಕ್ಷಕರಿಗೇನೂ ಮೋಸ ಮಾಡಲಿಲ್ಲ.
ವೇಳಾಪಟ್ಟಿ || ಕೆಪಿಎಲ್ ಎಬಿಸಿಡಿ
ಗೆಲ್ಲಲು ಬೇಕಿದ್ದ 118 ರನ್ ಗಳ ಗುರಿ ಬೆನ್ನು ಹತ್ತಿದ್ದ ಮಂಗಳೂರು ತಂಡಕ್ಕೆ ಸ್ಟಾರ್ ಆಟಗಾರ, ಕರಣ್ ನಾಯರ್ ಆಸರೆಯಾದರು. ಕರಣ್ 46 (44 ಎಸೆತ, 5X4, 1X6) ರನ್ ಚೆಚ್ಚಿ ಗೆಲುವಿನ ದಡ ಸೇರಿಸಿದರು. ಕರಣ್ ಗೆ ಗಣೇಶ್ ಸತೀಶ್, ಪವನ್ ದೇಶಪಾಂಡೆ ಸಾಥ್ ನೀಡಿದರು. ಅಂತಿಮವಾಗಿ 18.1 ಓವರ್ ಗಳಲ್ಲಿ ಗೆಲುವಿನ ಗುರಿ ಮುಟ್ಟಿದರು.
ಮಂಗಳೂರು ಪರ ಪವನ್ ದೇಶಪಾಂಡೆ 24 ರನ್, ಗಣೇಶ್ ಸತೀಶ್ 27 (23 ಎಸೆತ, 2X4) ರನ್ ಗಳಿಸಿದರು. ನಾಯಕ ರೋಹಿತ್ ಶಭರವಾಲ್ 11 ರನ್ ಮಾತ್ರ ಗಳಿಸಿ ಔಟಾದರು. ಅದರೆ, ಅದಕ್ಕೂ ಮುನ್ನ ರೋಹಿತ್ ಗೆ ಜೀವದಾನ ಸಿಕ್ಕಿತ್ತು. ವಿಕೆಟ್ ಕೀಪರ್ ಕಮ್ ನಾಯಕ ಸುದೀಪ್ ಸೇರಿದಂತೆ ರಾಕ್ ಸ್ಟಾರ್ಸ್ ತಂಡ ನಾಲ್ಕು ಕ್ಯಾಚ್ ಗಳನ್ನು ಕೈ ಚೆಲ್ಲಿದ್ದು, ಮುಳುವಾಯಿತು.
ಪಂದ್ಯದ ನಂತರ ಮಾತನಾಡಿದ ಕಿಚ್ಚ ಸುದೀಪ್, ನಮ್ಮ ತಂಡ ಇನ್ನಷ್ಟು 30 ರಿಂದ 40 ರನ್ ಗಳನ್ನು ಗಳಿಸಬೇಕಿತ್ತು. ನಾವು ಉತ್ತಮ ಹೋರಾಟ ನೀಡಿದ ಖುಷಿಯಿದೆ ಎಂದರು. ನಾಯಕ ರೋಹಿತ್ ಮಾತನಾಡಿ, ಸುದೀಪ್ ಅವರ ತಂಡ ಉತ್ತಮ ಆಟ ಪ್ರದರ್ಶಿಸಿದರು ಲೀಗ್ ನ ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ಉತ್ತಮ ಆಟ ನೋಡಬಹುದಾಗಿದೆ ಎಂದರು.
ರಾಕ್ ಸ್ಟಾರ್ಸ್ ಇನ್ನಿಂಗ್ಸ್ : ಟಾಸ್ ಗೆದ್ದ ರೋಹಿತ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಸುದೀಪ್ ತಂಡ 20 ಓವರ್ ಗಳಲ್ಲಿ 117/7 ಸ್ಕೋರ್ ಮಾಡಿತು. ಆಫ್ ಸ್ಪಿನ್ನರ್ ಉದಿತ್ ಪಟೇಲ್ 3/25 ಬೌಲಿಂಗ್ ಮಾಡಿ ಸುದೀಪ್ ತಂಡದ ಬೆನ್ನುಲುಬು ಮುರಿದರು.
ಸುದೀಪ್ ತಂಡದಲ್ಲಿ ಎಡಗೈ ಬ್ಯಾಟ್ಸ್ ಮ ನ್ ಮೈಸೂರಿನ ಹುಡುಗ ಪ್ರದೀಪ್ ಬೋಗಾದಿ 39 ಎಸೆತಗಳಲ್ಲಿ 44 ರನ್(3X4, 2X6) ಗಳಿಸಿ ರನ್ ಗತಿ ಹೆಚ್ಚಿಸಿದರು. ರಾಜೀವ್ 35 ರನ್ (6X4,1X1) ಗಳಿಸಿದ್ದು ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಮುಂದಿನ ಪಂದ್ಯ ಶುಕ್ರವಾರ(ಆ.29) ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್ (ಸಂಜೆ 5 IST)
ಮಂಗಳೂರು ಯುನೈಟೆಡ್ : 118/3,18.1 ಓವರ್ಸ್ (ಕರಣ್ ನಾಯರ್ 46, ಗಣೇಶ್ ಸತೀಶ್ 27, ಪವನ್ ದೇಶಪಾಂಡೆ ಅಜೇಯ 24, ರೋಹಿತ್ ಸಭರವಾಲ್ 11, ವಿಕ್ರಾಂತ್ 2/19, ಪ್ರದೀಪ್ 1/18)