ತ್ರಿಮೂರ್ತಿಗಳ ನೋಡುತ್ತ ಬ್ಯುಸಿಯಾಗಿದ್ದೆ
'ಆ ದಿನ ನಾನು 2007ರ ವಿಶ್ವಕಪ್ನಲ್ಲಿ ಭಾರತ ವಿರುದ್ಧ ಆಡುತ್ತಿದೆ. ನಾನಾಗ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರನ್ನು ನೋಡುವುದಲ್ಲೇ ಬ್ಯುಸಿ ಆಗಿದ್ದೆ. ನಾನು ಈ ಮೂವರು ತ್ರಿಮೂರ್ತಿಗಳನ್ನು ಸುಮ್ಮನೆ ನೋಡುತ್ತಿದ್ದೆ,' ಎಂದು ತಮೀಮ್ ಇಕ್ಬಾಲ್ ಹೇಳಿದ್ದಾರೆ.
ಅತೀವ ಖುಷಿಯಾಗಿತ್ತು
ಇಎಸ್ಪಿಎನ್ ಆಯೋಜಿಸಿದ್ದ ವೀಡಿಯೋ ಚಾಟ್ನಲ್ಲಿ ಭಾರತದ ಕಾಮೆಂಟೇಟರ್ ಅಂಜಯ್ ಮಂಜ್ರೇಕರ್ ಜೊತೆಗೆ ಮಾತನಾಡುತ್ತ ತಮೀಮ್, ಭಾರತದ ವಿರುದ್ಧದ ಪಂದ್ಯದ ವೇಳೆಯ ಖುಷಿ ಹಂಚಿಕೊಂಡರು. '(ಸಚಿನ್, ದ್ರಾವಿಡ್, ಗಂಗೂಲಿ) ಈ ಮೂವರು ದಿಗ್ಗಜರ ಸಮ್ಮುಖದಲ್ಲಿ ಆಡುತ್ತಿರುವುದಕ್ಕೆ ಆವತ್ತು ನನಗೆ ಅತೀವ ಖುಷಿ ಆಗಿತ್ತು,' ಎಂದು ತಮೀಮ್ ಹೇಳಿದರು.
ಜಹೀರ್ ಎದುರಿಸಬೇಕಾಗಿ ಬಂದಿತ್ತು
'ಆವತ್ತು ಭಾರತ 190 ರನ್ ಮಾಡಿದಾಗ ನಮಗೊಂದು ಚಾನ್ಸ್ ಇದೆ ಅಂತ ಅನ್ನಿಸಿತ್ತು. ನಾನು ಬ್ಯಾಟಿಂಗ್ಗೆ ಹೋದೆ, ಝಹೀರ್ ಖಾನ್ ಅವರ ಎಸೆತ ಎದುರಿಸಬೇಕಾಗಿ ಬಂತು. 140 kph ವೇಗದಲ್ಲಿ ಬರುವ ಬೌಲರ್ನನ್ನು ನಾನು ಎದುರಿಸಬಲ್ಲೆ ಎಂದು ನಾನು ಮನಸ್ಸು ಗಟ್ಟಿ ಮಾಡಿಕೊಂಡೆ. ಜಹೀರ್ ಮೊದಲ ಎಸೆತ ಎಸೆದರು. ನಾನು ಹೇಗೋ ಅದನ್ನು ನಿಭಾಯಿಸಿದೆ. ಮುಂದಿನ ಎಸೆತಕ್ಕೆ ನಾನು ಫೋರ್ ಬಾರಿಸಿದೆ. ಆಗ ನನಗೆ ಸ್ವಲ್ಪ ಆತ್ಮವಿಶ್ವಾಸ ಬಂತು,' ಎಂದು ತಮೀಮ್ ಪಂದ್ಯದ ಕ್ಷಣ ವಿವರಿಸಿದ್ದಾರೆ.
ಪಂದ್ಯದ ಫಲಿತಾಂಶ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ತಂಡ, ಆರಂಭಿಕ ಬ್ಯಾಟ್ಸ್ಮನ್ ಸೌರವ್ ಗಂಗೂಲಿ 66, ಯುವರಾಜ್ ಸಿಂಗ್ 47 ಗಮನಾರ್ಹ ರನ್ನೊಂದಿಗೆ 49.3 ಓವರ್ಗೆ ಎಲ್ಲಾ ವಿಕೆಟ್ ಕಳೆದು 191 ರನ್ ಮಾಡಿತ್ತು. ಗುರಿ ಬೆನ್ನಟ್ಟಿದ ಬಾಂಗ್ಲಾ, ತಮೀಮ್ ಇಕ್ಬಾಲ್ 51, ಮುಷ್ಫಕರ್ ರಹೀಮ್ 56, ಶಕೀಬ್ ಅಲ್ ಹಸನ್ 53 ರನ್ನೊಂದಿಗೆ 48.3 ಓವರ್ನಲ್ಲಿ 5 ವಿಕೆಟ್ ನಷ್ಟದಲ್ಲಿ 192 ರನ್ ಬಾರಿಸಿ, 5 ವಿಕೆಟ್ ಗೆಲುವನ್ನಾಚರಿಸಿತ್ತು.