ಕ್ರೈಸ್ಟ್ಚರ್ಚ್ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಸೋಲುವ ಮೂಲಕ ಭಾರತ ತಂಡ ನಿರಾಸೆ ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 218 ರನ್ಗಳಿಗೆ ಆಲೌಟ್ ಆಗಿತ್ತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ 18 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಜಯಗಳಿಸುವ ವಿಶ್ವಾಸದಲ್ಲಿದ್ದಾಗ, ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಮಳೆ ಹೆಚ್ಚಾದ ಕಾರಣ ಫಲಿತಾಂಶವಿಲ್ಲದೆ ಪಂದ್ಯವನ್ನು ಸ್ಥಗಿಯಗೊಳಿಸಲಾಯಿತು.
ಈ ಸರಣಿಯಲ್ಲಿ ಭಾರತ ತಂಡ ಸೋತರು ಹಲವು ವಿಚಾರಗಳಲ್ಲಿ ತಂಡಕ್ಕೆ ಧನಾತ್ಮಕ ವಿಚಾರಗಳು ಸಿಕ್ಕಿವೆ. ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಈ ಸರಣಿಯಲ್ಲಿ ಆಡಿದ ರೀತಿಯಿಂದ ತಂಡಕ್ಕೆ ಒಬ್ಬ ಆಲ್ರೌಂಡರ್ ಸಿಕ್ಕಂತಾಗಿದೆ.
ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 37 ರನ್ ಗಳಿಸುವ ಮೂಲಕ ಮಿಂಚಿದ್ದ ವಾಷಿಂಗ್ಟನ್ ಸುಂದರ್, ಮೂರನೇ ಏಕದಿನ ಪಂದ್ಯದಲ್ಲಿ ಅಮೂಲ್ಯ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.
ಭಾರತ ತಂಡದಲ್ಲಿ ಆಲ್ರೌಂಡ್ ಆಯ್ಕೆಗಳ ಕೊರತೆಯಿರುವುದರಿಂದ 2023ರ ವಿಶ್ವಕಪ್ಗೆ ವಾಷಿಂಗ್ಟನ್ ಸುಂದರ್ ಅತ್ಯುತ್ತಮ ಆಯ್ಕೆಯಾಗಿದ್ದು, ಅವರ ಆಟವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ತಂಡದಲ್ಲಿ ಹೆಚ್ಚಿನ ಅವಕಾಶ ನೀಡಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ರವೀಂದ್ರ ಜಡೇಜಾ ಗಾಯದಿಂದ ಹೊರಗುಳಿದ ನಂತರ ಸುಂದರ್ ಭಾರತ ತಂಡದಲ್ಲಿ ಸ್ಥಾನ ಪಡೆದರು.
ಆತನಿಗೆ ಉತ್ತಮ ಕ್ರಿಕೆಟಿಗನಾಗುವ ಅವಕಾಶ ಇದೆ
"ಗಾಯಗೊಂಡು ಕ್ರಿಕೆಟ್ನಿಂದ ದೂರವಿದ್ದ ಆತ, ಚೇತರಿಸಿಕೊಂಡ ನಂತರ ಉತ್ತಮ ಪ್ರದರ್ಶನ ನೀಡಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅವರು ಉತ್ತಮವಾಗಿ ಆಡಿದರು. ಅವರು ಪವರ್ಪ್ಲೇಯಲ್ಲೂ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆತ ಇನ್ನೂ ಚಿಕ್ಕ ವಯಸ್ಸಿನವನಾಗಿದ್ದು, ಮುಂದೆ ಉತ್ತಮ ಕ್ರಿಕೆಟಿಗನಾಗುವ ಅವಕಾಶ ಇದೆ" ಎಂದು ಹೇಳಿದರು.
"2010 ರ ಮತ್ತು ಅದಕ್ಕೂ ಮೊದಲಿನ ಭಾರತ ತಂಡವನ್ನು ನೋಡಿದರೆ, ಬಹಳಷ್ಟು ಬ್ಯಾಟರ್ಗಳು ಬೌಲ್ ಮಾಡುತ್ತಿದ್ದರು. ಸಚಿನ್, ಸೆಹ್ವಾಗ್, ಯುವರಾಜ್, ಗಂಗೂಲಿ ಬೌಲಿಂಗ್ ಮಾಡುತ್ತಿದ್ದರಿಂದ ತಂಡಕ್ಕೆ ಸಾಕಷ್ಟು ಆಯ್ಕೆಗಳಿದ್ದವು. ಆದರೆ, ಈಗಿರುವ ತಂಡದಲ್ಲಿ, ಬಹಳಷ್ಟು ಬ್ಯಾಟರ್ಗಳು ಹಾಗೆ ಬೌಲಿಂಗ್ ಮಾಡುವುದಿಲ್ಲ. ಜಡೇಜಾ ಮತ್ತು ಪಾಂಡ್ಯ ಆಡದಿರುವಾಗ ಭಾರತಕ್ಕೆ ಬದಲೀ ಆಟಗಾರರ ಸಮಸ್ಯೆ ಇದೆ. ಆದ್ದರಿಂದ 2023ರಲ್ಲಿ ವಿಶ್ವಕಪ್ಗೆ ಮುನ್ನ ತಂಡ ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದು, ಬಾಂಗ್ಲಾದೇಶ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಸರಣಿಯಿಂದ ಹೊರಗುಳಿಯಲಿದ್ದಾರೆ. ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.