ಬ್ರಿಸ್ಬೇನ್ನಲ್ಲಿ ಮಡೆದ ಅಂತಿಮ ಟೆಸ್ಟ್ ಪಂದ್ಯವನ್ನು ರೋಚಕವಾಗಿ ಗೆದ್ದುಕೊಳ್ಳುವ ಮೂಲಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಟೀಮ್ ಇಂಡಿಯಾದ ಈ ಸಾಧನೆಗೆ ವಿಶ್ವಾದ್ಯಂತ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಮಾಜಿ ನಾಯಕ ವಾಸಿಮ್ ಅಕ್ರಮ್ ಕೂಡ ಭಾರತ ತಂಡದ ಸಾಧನೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಕಳೆದ 32 ವರ್ಷಗಳಿಂದ ಅಜೇಯವಾಗಿ ಉಳಿದ ಗಾಬಾ ಅಂಗಳದಲ್ಲಿ ಟೀಮ್ ಇಂಡಿಯಾ ಸಾಧಿಸಿದ ಐತಿಹಾಸಿಕ ಗೆಲುವಿಗೆ ವಾಸಿಮ್ ಅಕ್ರಮ್ ಪ್ರತಿಕ್ರಿಯಿಸಿದರು. ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡ ತಂಡಗಳಲ್ಲಿ ಏಷ್ಯಾದ ತಂಡವೊಂದು ಇಷ್ಟು ದಿಟ್ಟವಾಗಿ ಹಾಗೂ ಧೈರ್ಯಶಾಲಿಯಾಗಿರುವುದು ನಾನು ನೋಡಿಯೇ ಇಲ್ಲ ಎಂದಿದ್ದಾರೆ ವಾಸಿಮ್ ಅಕ್ರಮ್.
ಭಾರತ vs ಆಸ್ಟ್ರೇಲಿಯಾ: ಗೆದ್ದಿದ್ದು ಭಾರತ, ಸದ್ದು ಮಾಡಿದ್ದು ಆರ್ಸಿಬಿ!
"ಭಾರತ ತಂಡಕ್ಕೆ ನಂಬಲಾಗದ ಟೆಸ್ಟ್ ಮತ್ತು ಸರಣಿ ಗೆಲುವು. ಆಸ್ಟ್ರೇಲಿಯಾದಂತ ಕಠಿಣ ಪ್ರವಾಸದಲ್ಲಿ ದಿಡ್ಡವಾಗಿ ಧೈರ್ಯಶಾಲಿಯಾಗಿ ಹಾಗೂ ಉತ್ಸಾಹಭರಿತವಾಗಿ ಏಷ್ಯಾದ ತಂಡವೊಂದು ಆಡಿರುವುದನ್ನು ನಾನು ನೋಡಿಲ್ಲ. ಯಾವುದೇ ಪ್ರತಿಕೂಲತೆಗಳು ಕೂಡ ಅವರನ್ನು ತಡೆಯಲು ಸಾಧ್ಯವಿಲ್ಲ."
"ಪ್ರಮುಖ ಆಟಗಾರರ ಗಾಯ, 36 ರನ್ಗಳಿಗೆ ಆಲೌಟ್ ಆದ ಬಳಿಕ ಅತ್ಯಂತ ಶ್ರೇಷ್ಠವಾದ ಗೆಲುವು, ಇತರರಿಗೆ ಸ್ಪೂರ್ತಿಯನ್ನು ನೀಡುತ್ತದೆ. ಭಾರತ ಕೀರ್ತಿಯನ್ನು ತಂದಿದೆ" ಎಂದು ವಾಸಿಮ್ ಅಕ್ರಮ್ ಟೀಮ್ ಇಂಡಿಯಾದ ಐತಿಹಾಸಿಕ ಸರಣಿ ಗೆಲುವಿನ ಬಳಿಕ ಟ್ವೀಟ್ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್: ಅಗ್ರ ಸ್ಥಾನಕ್ಕೇರಿದ ಟೀಮ್ ಇಂಡಿಯಾ
ಬ್ರಿಸ್ಬೇಬ್ ಅಂಗಳದಲ್ಲಿ ಆಸ್ಟ್ರೇಲಿಯಾ ತಂಡ 1988ರಲ್ಲಿ ಕೊನೆಯ ಬಾರಿಗೆ ಸೋಲು ಕಂಡಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಆ ಪಂದ್ಯದ ಬಳಿಕ ಆಸ್ಟ್ರೇಲಿಯಾ ಗೆಲುವುಗಳನ್ನು ಕಾಣುತ್ತಾ ಬಂದಿದೆ. ಆದರೆ ಈಗ ಟೀಮ್ ಇಂಡಿಯಾ ಆಸ್ಟ್ರೇಲಿಯಾದ ಈ ಗೆಲುವಿನ ಸರಪಳಿಯನ್ನು ತುಂಡರಿಸುವಲ್ಲಿ ಯಶಸ್ವಿಯಾಗಿದ್ದು ಐತಿಹಾಸಿಕವಾಗಿ ಸರಣಿಯನ್ನು ಗೆದ್ದು ಬೀಗಿದೆ.