ಆರೋಪ ನಿರಾಕರಿಸಿದ ಜಾಫರ್
ಈ ಆರೋಪವನ್ನು ವಾಸಿಮ್ ಜಾಫರ್ ನಿರಾಕರಿಸಿದ್ದಾರೆ. ಈ ವಿಚಾರಕ್ಕೂ ಕೋಮು ಬಣ್ಣ ನೀಡಿರುವುದು ನನಗೆ ದುಃಖ ತರಿಸಿದೆ. ನಾನು ಜಾತಿವಾದಿಯಲ್ಲ. ಜಾತಿ ಧರ್ಮದ ಆಧಾರದಲ್ಲಿ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿಲ್ಲ. ಈ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದರು. ತಂಡದ ಆಯ್ಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳ ಹಸ್ತಕ್ಷೇಪ ಮತ್ತು ಪಕ್ಷಪಾತಿ ಧೋರಣೆಯಿಂದ ಬೇಸತ್ತು ನಾನು ರಾಜೀನಾಮೆ ನೀಡಿದ್ದೆ. ನಾನು ಜಾತಿವಾದಿಯಾಗಿದ್ದರೆ ನನ್ನನ್ನು ಕಿತ್ತೊಗೆಯುತ್ತಿದ್ದರು. ಆದರೆ ನಾನೇ ರಾಜೀನಾನೆಯನ್ನು ನೀಡಿದ್ದೇನೆ ಎಂದಿದ್ದಾರೆ. ಇದರ ಜೊತೆಯಲ್ಲಿ ಉತ್ತರಾಖಂಡ್ ಕ್ರಿಕೆಟ್ ಅಸೋಸಿಯೇಶನ್ನ ಪದಾಧಿಕಾರಿಗಳ ಆರೋಪಗಳಿಗೆ ಕೆಲ ಪ್ರತ್ಯಿತ್ತರಗಳನ್ನು ಕೂಡ ಟ್ವಿಟ್ಟರ್ನಲ್ಲಿ ನೀಡಿದ್ದಾರೆ.
ಬೆಂಬಲಕ್ಕೆ ನಿಂತ ಮಾಜಿ ಕ್ರಿಕೆಟಿಗರು
ಇನ್ನು ಈ ವಿಚಾರ ವಿವಾದವಾಗುತ್ತಿದ್ದಂತೆಯೇ ವಾಸಿಮ್ ಜಾಫರ್ಗೆ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ದೊಡ್ಡ ಗಣೇಶ್ ಬೆಂಬಲಕ್ಕೆ ನಿಂತಿದ್ದಾರೆ. ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅನಿಲ್ ಕುಂಬ್ಳೆ "ನಿಮ್ಮ ಬೆಂಬಲಕ್ಕೆ ನಾನಿದ್ದೇನೆ ಜಾಫರ್, ನೀವು ಸರಿಯಾಗಿದ್ದನ್ನೇ ಮಾಡಿದ್ದೀರಿ. ನಿಮ್ಮ ಮಾರ್ಗದರ್ಶನವನ್ನು ಕಳೆದುಕೊಂಡ ಆಟಗಾರರು ದುರದೃಷ್ಟವಂತರು" ಎಂದಿದ್ದಾರೆ. ಇನ್ನು ದೊಡ್ಡ ಗಣೇಶ್ ಕೂಡ ಟ್ವಿಟ್ಟರ್ನಲ್ಲಿ ಜಾಫರ್ಗೆ ಬೆಂಬಲವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಮತ್ತೆ ಆರೋಪ ಮಾಡಿದ ಮಹಿಮ್ ವರ್ಮ
ಈ ಮಧ್ಯೆ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ನ ಕಾರ್ಯದರ್ಶಿ ಮಹಿಮ್ ವರ್ಮ ವಾಸಿಮ್ ಜಾಫರ್ ವಿರುದ್ಧ ಮತ್ತೆ ಆರೋಪಗಳ ಸುರಿಮಳೆಗೈದಿದ್ದಾರೆ. "ವಾಸಿಮ್ ಜಾಫರ್ ಹೇಳುತ್ತಿರುವುದು ಎಲ್ಲವೂ ಸುಳ್ಳು. ಆತನ ಮನವಿಯ ನಂತರವೇ ನಾವು ಎಲ್ಲಾ ಚಟುವಟಿಕೆಗಳನ್ನು ಮಾಡಿದ್ದೆವು. ಆದರೆ ವಾಸಿಮ್ ಜಾಫರ್ ವರ್ತನೆ ಸರಿಯಿರಲಿಲ್ಲ. ಆತನಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದವು. ಉತ್ತಮ ಕ್ರಿಕೆಟ್ ವಾತಾವರಣದ ಉದ್ದೇಶದೊಂದಿಗೆ ನಾವು ಅವರನ್ನು ಸೇರಿಸಿಕೊಂಡಿದ್ದೆವು" ಎಂದಿದ್ದಾರೆ.