ಕಪ್ ಗೆಲ್ಲದ ತಂಡವೆಂಬ ಅವಮಾನ, ಅಸಹಾಯಕತೆ..
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆರ್ಸಿಬಿ, ವಿರಾಟ್ ಕೊಹ್ಲಿ 39, ದೇವದತ್ ಪಡಿಕ್ಕಲ್ 21, ಶ್ರೀಕರ್ ಭಾರತ್ 9, ಗ್ಲೆನ್ ಮ್ಯಾಕ್ಸ್ವೆಲ್ 15, ಎಬಿ ಡಿವಿಲಿಯರ್ಸ್ 11, ಡೇನಿಯಲ್ ಕ್ರಿಶ್ಚಿಯನ್ 9, ಶಹಬಾಜ್ ಅಹ್ಮದ್ 13, ಹರ್ಷಲ್ ಪಟೇಲ್ 8 ರನ್ನೊಂದಿಗೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದು 138 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್ಮನ್ ಗಿಲ್ 29, ವೆಂಕಟೇಶ್ ಅಯ್ಯರ್ 26, ನಿತೀಶ್ ರಾಣಾ 23, ರಾಹುಲ್ ತ್ರಿಪಾಠಿ 6, ಇಯೋನ್ ಮಾರ್ಗನ್ 5, ದಿನೇಶ್ ಕಾರ್ತಿಕ್ 10, ಶಕೀಬ್ ಅಲ್ ಹಸನ್ 9, ಸುನಿಲ್ ನರೈನ್ 26 ರನ್ನೊಂದಿಗೆ 19.4 ಓವರ್ಗೆ 6 ವಿಕೆಟ್ ಕಳೆದು 139 ರನ್ ಗಳಿಸಿ ಗೆಲುವನ್ನಾಚರಿಸಿತು. ಕೊಹ್ಲಿ ಆರ್ಸಿಬಿಗೆ ನಾಯಕರಾಗಿ ಆಡಿದ ಕೊನೇ ಸೀಸನ್ ಇದು. ಹೀಗಾಗಿ ಈಗಲೂ ಕಪ್ ಗೆಲ್ಲದ ತಂಡವೆಂಬ ಹಣಪಟ್ಟಿ ಬಿಚ್ಚಿಡಲಾದ ಅಸಹಾಯಕತೆ ಆರ್ಸಿಬಿ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಣಸಿಕ್ಕಿತ್ತು.
ಆಟ ಮುಗಿದ ಮೇಲೆ ಆರ್ಸಿಬಿ ಡ್ರೆಸ್ಸಿಂಗ್ ರೂಮ್..
ಕೆಕೆಆರ್ ವಿರುದ್ಧ ಸೋಲನುಭವಿಸಿ ಈ ಬಾರಿಯ ಟೂರ್ನಿಯಿಂದ ಹೊರ ಬಿದ್ದ ಬಳಿಕ ಆರ್ಸಿಬಿ ಡ್ರೆಸ್ಸಿಂಗ್ ರೂಮ್ ಹೇಗಿತ್ತು? ಅಲ್ಲಿದ್ದವರ ಭಾವನೆಗಳು ಹೇಗಿದ್ದವು, ಸಂದೇಶ ಏನಾಗಿತ್ತು ಎನ್ನುವ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯೂಟ್ಯೂಬ್ನಲ್ಲಿ ವಿಡಿಯೋ ಹಂಚಿಕೊಂಡಿದೆ. ಪಂದ್ಯ ಮುಗಿದ ಬಳಿಕ ಹತಾಶರಾಗಿ ಡ್ರೆಸ್ಸಿಂಗ್ ರೂಮ್ಗೆ ಕಾಲಿಡುತ್ತಿರುವ ಆಟಗಾರರಿಂದ ಹಿಡಿದು ಮುಂದಿನ ಸೀಸನ್ಗೆ ಆತ್ಮಸ್ಥೈರ್ಯ ತುಂಬಿಕೊಂಡು ಮತ್ತೆ ಸಿದ್ಧರಾಗುತ್ತಿರುವ ಸ್ಫೂರ್ತಿಯ ಚಿತ್ರಣಗಳನ್ನು ಈ ಯೂಟ್ಯೂಬ್ ವಿಡಿಯೋ ನೀಡಿದೆ. ಕಪ್ ಗೆಲ್ಲಲಾಗಲಿಲ್ಲ ಎನ್ನುವ ನಿರಾಸೆ ಆರ್ಸಿಬಿ ತಂಡದ ಎಲ್ಲಾ ಆಟಗಾರರರಲ್ಲಿ, ಕೋಚ್ಗಳ ಮುಖಗಳಲ್ಲಿ ಸುಳಿದಾಡುತ್ತಿರುವುದಕ್ಕೆ ವಿಡಿಯೋ ಸಾಕ್ಷಿ ಹೇಳುತ್ತದೆ. ಆದರೆ ಆಟವೆಂದರೆ ಹಾಗೇನೆ; ಇಲ್ಲಿ ಸೋಲು-ಗೆಲುವು ಸ್ವೀಕರಿಸಿ ಮುನ್ನಡೆಯೋದೇ ಮುಖ್ಯ. ಇವತ್ತು ಕಪ್ ಕೈತಪ್ಪಿದರೂ ಮುಂದೊಮ್ಮೆ ಕಪ್ ಗೆದ್ದೇವು ಎನ್ನುವ ಸಂದೇಶ ಆರ್ಸಿಬಿ ಬಳಗದಿಂದ ಬಂದಿದೆ.
ಆರ್ಸಿಬಿ ಪ್ರಮುಖರಿಂದ ಭಾವನಾತ್ಮಕ ಮಾತುಗಳು
ಆರ್ಸಿಬಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಂಡದ ಪ್ರಮುಖರು ಭಾವನಾತ್ಮಕ ಮಾತುಗಳನ್ನಾಡಿದ್ದಾರೆ. ವಿಡಿಯೋದಲ್ಲಿ ಕಾಣಸಿಕೊಂಡಿರುವ ಎಬಿ ಡಿ ವಿಲಿಯರ್ಸ್, "ಅದ್ಭುತ ಫ್ರಾಂಚೈಸಿ ಆರ್ಸಿಬಿಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಈ ವರ್ಷ ಟ್ರೋಫಿ ಗೆಲ್ಲಲಾಗದ್ದಕ್ಕೆ ಕ್ಷಮಿಸಿ, ಹಾಗಂತ ಇಲ್ಲಿಗೇ ಕೆಲಸ ಮುಗಿದಿಲ್ಲ. ನಾವು ಇನ್ನೂ ಬಲಿಷ್ಠರಾಗಿ ಕಮ್ಬ್ಯಾಕ್ ಮಾಡ್ತೇವೆ," ಎಂದಿದ್ದಾರೆ. ಆ ಬಳಿಕ ಮಾತನಾಡಿರುವ ಆರ್ಸಿಬಿ ಹೆಡ್ ಕೋಚ್ ಮೈಕ್ ಹೆಸನ್, "ಇಲ್ಲಿ ಕೆಲವಾರು ಆಟಗಾರರು ಬರುತ್ತಾರೆ ಹೋಗುತ್ತಾರೆ. ತಂಡ ಉತ್ತಮ ಪ್ರದರ್ಶನ ನೀಡಿದೆ. ವೈಯಕ್ತಿಕವಾಗಿ ಎಲ್ಲರೂ ತಮ್ಮ ಪ್ರಯತ್ನ ಮಾಡಿದ್ದೀರಿ," ಎಂದಿದ್ದಾರೆ. ಪರ್ಪಲ್ ಕ್ಯಾಪ್ ಹೋಲ್ಡರ್ ಹರ್ಷಲ್ ಪಟೇಲ್ ಕೂಡ ಮಾತನಾಡಿ ತನ್ನ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಕೊನೆಯಾಗಿ ಮಾತನಾಡಿರುವ ನಾಯಕ ಕೊಹ್ಲಿ ಕೂಡ ನಿರಾಶೆಯಾಗಿದ್ದರೂ ನಾವು ಹತಾಶರಾಗಿಲ್ಲ. ಮುಂದೆಯೂ ನಾನು ಈ ಫ್ರಾಂಚೈಗೆ ನನ್ನಿಂದ ಸಾಧ್ಯವಾದಷ್ಟು ಕೊಡುಗೆ ನೀಡುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಪಂದ್ಯ ಸೋತು, ಪ್ರಶಸ್ತಿ ಕೈ ತಪ್ಪಿದ್ದಾಗ ಆ ಸೋಲಿನ ಕ್ಷಣವನ್ನು ಹೇಗೆ ಸ್ಫೂರ್ತಿಯಿಂದ ಸ್ವೀಕರಿಸಬೇಕು ಅನ್ನೋದರ ಚಿತ್ರಣ ಈ ವಿಡಿಯೋದಲ್ಲಿದೆ.