ಇತ್ತೀಚೆಗಷ್ಟೇ ಅಂತ್ಯಗೊಂಡ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೊನೆಯದಾಗಿ ಮುನ್ನಡೆಸಿದ ವಿರಾಟ್ ಕೊಹ್ಲಿ ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಿರತರಾಗಿದ್ದಾರೆ. ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ಟಿ ಟ್ವೆಂಟಿ ಕ್ರಿಕೆಟ್ ತಂಡದ ನಾಯಕತ್ವದಿಂದಲೂ ಕೂಡ ಕೆಳಗಿಳಿಯುವ ನಿರ್ಧಾರವನ್ನು ವಿರಾಟ್ ಕೊಹ್ಲಿ ಘೋಷಿಸಿದ್ದಾರೆ.
ರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿ
ಇನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಪಂದ್ಯಗಳು ಆರಂಭವಾಗಿದ್ದು ಟೂರ್ನಿಗೆ ಚಾಲನೆ ದೊರಕಿದೆ. ಸದ್ಯ ದುಬೈ ನಗರದ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಿರುವ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಇದೇ ದುಬೈ ನಗರದ ವಿಶ್ವವಿಖ್ಯಾತ ಮೇಡಂ ಟುಸಾಡ್ಸ್ ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಾಗಿದೆ. ವಿರಾಟ್ ಕೊಹ್ಲಿ ಭಾರತ ಸೀಮಿತ ಓವರ್ಗಳ ಪಂದ್ಯದ ಜರ್ಸಿಯನ್ನು ತೊಟ್ಟು ಬ್ಯಾಟ್ ಹಿಡಿದು ನಿಂತಿರುವ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಈ ಪ್ರತಿಮೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
Wax statue of Virat Kohli unveiled at Dubai’s Madame Tussauds. pic.twitter.com/aE379nMOMR
— Johns. (@CricCrazyJohns) October 18, 2021
ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಮೇಡಂ ಟುಸ್ಸಾಡ್ಸ್ ಅನಾವರಣಗೊಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2018ರ ಜೂನ್ ತಿಂಗಳಿನಲ್ಲಿ ಭಾರತದ ನವದೆಹಲಿಯಲ್ಲಿನ ತನ್ನ ಮ್ಯೂಸಿಯಂನಲ್ಲಿಯೂ ಇದೇ ತರಹದ ವಿರಾಟ್ ಕೊಹ್ಲಿ ಮೇಣದ ಪ್ರತಿಮೆಯನ್ನು ಮೇಡಂ ಟುಸ್ಸಾಡ್ಸ್ ಅನಾವರಣಗೊಳಿಸಿತ್ತು. ಭಾರತ ನೆಲದಲ್ಲಿ ತಲೆ ಎತ್ತಿದ್ದ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ಇದೀಗ ದುಬೈ ನಗರದಲ್ಲಿಯೂ ರಾರಾಜಿಸುತ್ತಿರುವುದು ವಿರಾಟ್ ಕೊಹ್ಲಿ ಅಭಿಮಾನಿಗಳ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ.
ಇನ್ನು ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯವನ್ನು ಅಕ್ಟೋಬರ್ 24ರಂದು ತನ್ನ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಆದರೆ ಇದಕ್ಕೂ ಮುನ್ನ ಟೀಮ್ ಇಂಡಿಯಾ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಲಿದೆ. ಈ ಅಭ್ಯಾಸ ಪಂದ್ಯಗಳ ಪೈಕಿ ಮೊದಲನೇ ಪಂದ್ಯವು ಇಂದು ( ಅಕ್ಟೋಬರ್ 18 ) ದುಬೈನ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಟ ನಡೆಸುತ್ತಿವೆ.ಹಾಗೂ ಭಾರತದ ಪಾಲಿನ ಎರಡನೇ ಅಭ್ಯಾಸ ಪಂದ್ಯವು ಅಕ್ಟೋಬರ್ 20, ಬುಧವಾರದಂದು ನಡೆಯಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾ ತಂಡವು ಎದುರಾಳಿಯಾಗಲಿದೆ.
ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ
ಇಂದು ( ಅಕ್ಟೋಬರ್ 18 ) ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಮತ್ತು ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡಗಳ ನಡುವೆ ದುಬೈನ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವುದರ ಮೂಲಕ ಎದುರಾಳಿ ಇಂಗ್ಲೆಂಡ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿದರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಟೀಮ್ ಇಂಡಿಯಾಗೆ 189 ರನ್ಗಳ ಪೈಪೋಟಿಯುತ ಗುರಿಯನ್ನು ನೀಡಿತು. ಇಂಗ್ಲೆಂಡ್ ನೀಡಿದ ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೆಎಲ್ ರಾಹುಲ್, ಇಶಾನ್ ಕಿಶನ್ ಮತ್ತು ರಿಷಭ್ ಪಂತ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ 19 ಓವರ್ಗಳಲ್ಲಿ 192 ರನ್ ಗಳಿಸಿ 7 ವಿಕೆಟ್ಗಳ ಭರ್ಜರಿ ಜಯವನ್ನು ಸಾಧಿಸಿತು.