ಲೌಡರ್ಹಿಲ್, ಆಗಸ್ಟ್ 04: ಅಮೆರಿಕದ ಪ್ಲೋರಿಡಾದಲ್ಲಿ ಶನಿವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಪಂದ್ಯಗಳ ಮೊದಲ ಹಣಾಹಣಿಯಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡ ಪ್ರವಾಸಿ ಭಾರತ ವಿರುದ್ಧ 4 ವಿಕೆಟ್ಗಳ ಸೋಲುಂಡಿತು.
ಹಾಲಿ ಟಿ20 ವಿಶ್ವ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡ ಟಿ20 ಕ್ರಿಕೆಟ್ನಲ್ಲಿ ಭಾರತಕ್ಕೆ ಕಠಿಣ ಸವಾಲೊಡ್ಡಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಪಂದ್ಯದಲ್ಲಿ ವಿಂಡೀಸ್ ತಂಡದ ಕಳಾಹೀನ ಪ್ರದರ್ಶನದ ಬಳಿಕ ಮಾತನಾಡಿದ ನಾಯಕ ಕಾರ್ಲೋಸ್ ಬ್ರಾತ್ವೇಟ್ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲಗೊಂಡಿದ್ದೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.
ಮೊದಲ ಟಿ20: ಸೈನಿ-ಭುವಿ ಬೌಲಿಂಗ್ ದಾಳಿಗೆ ಶರಣಾದ ವೆಸ್ಟ್ ಇಂಡೀಸ್
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 9 ವಿಕೆಟ್ ನಷ್ಟದಲ್ಲಿ 95 ರನ್ಗಳನ್ನು ಮಾತ್ರವೇ ದಾಖಲಿಸಿತು. ಕೈರೊನ್ ಪೊಲಾರ್ಡ್ ಕೆಚ್ಚೆದೆಯ ಹೋರಾಟದ ಮೂಲಕ 49 ರನ್ಗಳನ್ನು ಗಳಿಸಿದ್ದನ್ನು ಹೊರತು ಪಡಿಸಿ ಕೆರಿಬಿಯನ್ ಪಡೆ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು.
ಪಂದ್ಯದ ಬಳಿಕ ಮಾತನಾಡಿದ ಬ್ರಾತ್ವೇಟ್, "ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾದೆವು. ತಂಡಕ್ಕೆ ಬ್ಯಾಟಿಂಗ್ನಲ್ಲಿ ಆಸರೆಯಾದ ಪೊಲಾರ್ಡ್ ಅವರ ಆಟವನ್ನು ಪ್ರಸಂಶಿಸಲೇ ಬೇಕು. ತಮ್ಮ ಅನುಭವವನ್ನು ಅವರು ಧಾರೆ ಎರೆದರು. ಈ ಪಿಚ್ನಲ್ಲಿ 130-140 ರನ್ಗಳನ್ನು ಗಳಿಸಿದ್ದರೆ ಉತ್ತಮವಾಗಿರುತ್ತಿತ್ತು," ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಟ್ರೋಲ್ ಮಾಡಿ ತಾನೇ ಫಜೀತಿಗೆ ಸಿಲುಕಿದ ಜೇಮ್ಸ್ ನೀಶಮ್!
"ಪಂದ್ಯವನ್ನು ಅಂತ್ಯದವರೆಗೂ ಸಾಗುವಂತೆ ಮಾಡುವಲ್ಲಿ ನಮ್ಮ ತಂಡ ನಿಜಕ್ಕೂ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿತು. ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಲ್ಲಿ ವಿಫಲವಾಗಿ ಉತ್ತಮ ಬ್ಯಾಟಿಂಗ್ ನಡೆಸದೇ ಇದ್ದದ್ದೇ ಸೋಲಿಗೆ ಪ್ರಮುಖ ಕಾರಣ ಎಂಬುದು ಈಮೂಲಕ ತಿಳಿಯುತ್ತದೆ. ವೆಸ್ಟ್ ಇಂಡೀಸ್ ತಂಡ ಸಾದಾ ಕಾಯ್ದುಕೊಳ್ಳುವ ಆಕ್ರಮಣಕಾರಿ ಆಟವನ್ನೇ ಮುಂದುವರಿಸುವಂತೆ ಆಟಗಾರರಿಗೆ ತಿಳಿಸಿದ್ದೆ," ಎಂದು ಬ್ರಾತ್ವೇಟ್ ವಿವರಿಸಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇದೇ (ಲೌಡರ್ಹಿಲ್ ಕ್ರೀಡಾಂಗಣ) ಅಂಗಣದಲ್ಲಿ ಭಾನುವಾರ (ಆಗಸ್ಟ್ 04, 2019) ಎರಡನೇ ಟಿ20 ಪಂದ್ಯವನ್ನಾಡಲಿವೆ. ಇದೇ ವೇಳೆ ಎರಡನೇ ಪಂದ್ಯದಲ್ಲಿ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಮೂಲಕ ತಮ್ಮ ಹೊಡೆತಗಳ ಆಯ್ಕೆ ವಿಚಾರದಲ್ಲಿಯೂ ಗಮನ ನೀಡುವುದಾಗಿ ಬ್ರಾತ್ವೇಟ್ ತಿಳಿಸಿದ್ದಾರೆ.
ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿಗೆ 3 ತಿಂಗಳ ಅಮಾನತು ಶಿಕ್ಷೆ!
"ಆತ್ಮವಿಶ್ವಾಸ ಕಾಯ್ದುಕೊಳ್ಳುವ ಸಂದೇಶ ರವಾನಿಸಿದ್ದೇನೆ. ಪರಿಸ್ಥಿತಿಗೆ ಮೊದಲು ಹೊಂದಿಕೊಳ್ಳಬೇಕು. ಜೊತೆಗೆ ದೊಡ್ಡ ಹೊಡೆತಕ್ಕೆ ಮುಂದಾದ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು, ಸುನಿಲ್ ನರೈನ್ ಅವರ ನಾಲ್ಕು ಓವರ್ಗಳು ಅತ್ಯಂತ ಮೌಲ್ಯಯುತವಾದದ್ದು. ಜೊತೆಗೆ ನಮ್ಮ ವೇಗದ ಬೌಲರ್ಗಳು ಕೂಡ ಉತ್ತಮ ಆರಂಭ ಒದಗಿಸುತ್ತಿದ್ದಾರೆ," ಎಂದು ಬ್ರಾತ್ವೇಟ್ ಎರಡನೇ ಪಂದ್ಯದಲ್ಲಿನ ತಮ್ಮ ರಣತಂತ್ರದ ಕುರಿತಾಗಿ ಮಾತನಾಡಿದ್ದಾರೆ.