ಹೇಳಿಕೆಗಳೆಲ್ಲಾ ಗೊಂದಲದ ಗೂಡು, ಅಂತಿಮ ನಿರ್ಧಾರವೇನು?
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ರದ್ದಾಗಿರುವ ಟೆಸ್ಟ್ ಪಂದ್ಯ ಬಗ್ಗೆ ಚರ್ಚಿಸಿ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಂತಿಲ್ಲ. ಕಾಲ ಕಾಲಕ್ಕೆ ಒಂದೊಂದು ಹೇಳಿಕೆ ನೀಡುತ್ತಿದೆ. ಆರಂಭದಲ್ಲಿ, ರದ್ದಾಗಿರುವ ಟೆಸ್ಟ್ ಪಂದ್ಯಕ್ಕೆ ಬದಲಾಗಿ ಮುಂದಿನ ವರ್ಷ ಜುಲೈನಲ್ಲಿ ಎರಡು ಹೆಚ್ಚುವರಿ ಟಿ20ಐ ಪಂದ್ಯಗಳನ್ನು ನಡೆಸಿ ಆ ಮೂಲಕ ಇಂಗ್ಲೆಂಡ್ ಬೋರ್ಡ್ಗೆ ಆಗಿರುವ ನಷ್ಟವನ್ನು ಸರಿದೂಗಿಸುವುದಾಗಿ ಬಿಸಿಸಿಐ ಇಸಿಬಿಗೆ ಆಫರ್ ನೀಡಿದೆ ಎನ್ನಲಾಗಿತ್ತು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದ ಸೌರವ್ ಗಂಗೂಲಿ, ರದ್ದಾದ ಟೆಸ್ಟ್ಗೆ ಬದಲು ಇಂಗ್ಲೆಂಡ್ನಲ್ಲಿ ಒಂದು ಟೆಸ್ಟ್ ಪಂದ್ಯ ನಡೆಸಲಿದ್ದೇವೆ. ಆದರೆ ಇದು ಈ ಐದು ಪಂದ್ಯಗಳ ಟೆಸ್ಟ್ ಸರಣಿಯ ಮುಂದುವರೆದ ಭಾಗವಾಗಿರದೆ ಅದು ಪ್ರತ್ಯೇಕ ಟೆಸ್ಟ್ ಆಗಿರಲಿದೆ ಎಂದಿದ್ದರು. ಮತ್ತೆ ಗಂಗೂಲಿ ಮಾತು ತಿರುಗಿಸಿದ್ದಾರೆ. ಮುಂದೆ ಈ ಟೆಸ್ಟ್ಗೆ ಸಂಬಂಧಿಸಿ ಒಂದು ಪಂದ್ಯ ನಡೆಸಲಿದ್ದೇವೆ. ಅದು ಐದನೇ ಟೆಸ್ಟ್ ಪಂದ್ಯವಾಗಿರಲಿದೆ. ಟೆಸ್ಟ್ ಸರಣಿಯ ನಿಜವಾದ ವಿಜೇತರನ್ನು ಆ ಪಂದ್ಯ ನಿರ್ಧರಿಸಲಿದೆ ಎಂದಿದ್ದಾರೆ.
ಸರಣಿ ಪೂರ್ಣಗೊಳ್ಳುವುದನ್ನು ನಾವು ಬಯಸಿದ್ದೇವೆ
ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಸೌರವ್ ಗಂಗೂಲಿ, ಐದನೇ ಟೆಸ್ಟ್ ಬಗ್ಗೆ ಮಾತನಾಡಿದ್ದಾರೆ. "2007ರ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಗೆಲ್ಲುತ್ತಿರುವ ಚೊಚ್ಚಲ ಟೆಸ್ಟ್ ಸರಣಿ ಇದಾಗುತ್ತಿರುವುದರಿಂದ ನಾವು ಈ ಟೆಸ್ಟ್ ಸರಣಿಯನ್ನು ಪೂರ್ಣಗೊಳಿಸಲು ಬಯಸಿದ್ದೇವೆ. ಬಿಸಿಸಿಐ ಟೆಸ್ಟ್ ಕ್ರಿಕೆಟ್ಗಿರುವ ಗೌರವವನ್ನು ಕಾಪಾಡಿಕೊಳ್ಳುತ್ತದೆ. ಇದರ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ," ಎಂದು ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಐದು ಪಂದ್ಯಗಳ ಟೆಸ್ಟ್ ಸರಣೀಯಲ್ಲೀಗ ನಾಲ್ಕು ಪಂದ್ಯಗಳು ಮುಗಿಸಿದ್ದು, ಭಾರತ 2-1ರಿಂದ ಸರಣಿ ಮುನ್ನಡೆಯಲ್ಲಿದೆ. ಐದನೇ ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ಪಂದ್ಯ ಗೆದ್ದರೆ 3-1ರಿಂದ ಭಾರತ ಸರಣಿ ಗೆಲ್ಲುತ್ತದೆ, ಇಂಗ್ಲೆಂಡ್ ಗೆದ್ದರೆ 2-2ರಿಂದ ಸರಣಿ ಸಮಬಲವಾಗುತ್ತದೆ, ಪಂದ್ಯ ಡ್ರಾ ಆದರೆ 2-1ರಿಂದ ಸರಣಿ ಭಾರತ ಗೆದ್ದಂತಾಗುತ್ತದೆ. ಸದ್ಯ ಮಟ್ಟಿಗೆ ಭಾರತ ಸರಣಿ ಗೆದ್ದ ಸ್ಥಿತಿಯಲ್ಲಿ ರುವುದರಿಂದ ಬಹುಶಃ ಇಸಿಬಿ, ಭಾರತ ನೀಡಿದ್ದ ಎರಡು ಟಿ20ಐ ಪಂದ್ಯಗಳ ಆಫರ್ ಅನ್ನು ತಿರಸ್ಕರಿಸಿರಬಹುದು. ಕಡೇಯ ಪಂದ್ಯವನ್ನು ಗೆದ್ದು ಸರಣಿ ಸಮಬಲ ಸಾಧಿಸಬಹುದಾಗಿರುವುದರಿಂದ ಆ ಅವಕಾಶಕ್ಕಾಗಿ ಬಿಸಿಸಿಐಯನ್ನು ಒತ್ತಾಯಿಸಿರಬಹುದು. ಆದರೆ ಇಸಿಬಿಯ ಕೊನೇ ನಿರ್ಧಾರ ಕೇಳದೆ ಮೊದಲೇ ಹೇಳಿಕೆಗಳನ್ನು ನೀಡಿದ್ದರಿಂದ ಬಿಸಿಸಿಐ ಪದೇ ಪದೇ ಗೊಂದಲ ಸೃಷ್ಟಿಸಿರಬಹುದು.
ಯಾವಾಗ ನಡೆಯುತ್ತದೆ ರದ್ದಾಗಿರುವ ಅಂತಿಮ ಟೆಸ್ಟ್?
ಸೌರವ್ ಗಂಗೂಲಿ ಹೇಳುವ ಪ್ರಕಾರ ಭಾರತ vs ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿ ಇನ್ನೂ ಪೂರ್ಣಗೊಂಡಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಟಿ20 ವಿಶ್ವಕಪ್ ಮುಗಿದ ಬಳಿಕ ಮುಂದಿನ ವರ್ಷ ಟೀಮ್ ಇಂಡಿಯಾ ಇಂಗ್ಲೆಂಡ್ಗೆ ಮತ್ತೆ ಪ್ರವಾಸ ಹೋಗಲಿದೆ. ಆಗ ಅಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನು ಭಾರತ ಆಡಲಿದೆ. ಇದೇ ವೇಳೆ ಬಹುಶಃ ಒಂದು ಟೆಸ್ಟ್ ಪಂದ್ಯ ನಡೆಸಿ ಆ ಬಳಿಕ ರದ್ದಾಗಿರುವ ಮ್ಯಾನ್ಚೆಸ್ಟರ್ ಟೆಸ್ಟ್ ಅನ್ನು ಪೂರ್ಣಗೊಳಿಸಬಹುದು. ಅಂತೂ ಟೆಸ್ಟ್ ಸರಣಿ ರದ್ದಿನಿಂದಾಗಿ ಎದುರಾಗಿರುವ ಸಮಸ್ಯೆ ಪರಿಹರಿಸುವಂತೆ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಇಸಿಬಿ)ಗೆ ಪತ್ರ ಬರೆದಿದೆ. ಆದರೆ ಐಸಿಸಿ ಈ ಬಗ್ಗೆ ಇನ್ನೂ ಏನೂ ಹೇಳಿಕೆ ನೀಡಿಲ್ಲ. ಒಂದಷ್ಟು ಸ್ಪಷ್ಟ, ರದ್ದಾಗಿರುವ ಟೆಸ್ಟ್ಗೆ ಬದಲಾಗಿ ಮುಂದೊಮ್ಮೆ ಟೆಸ್ಟ್ ಪಂದ್ಯ ನಡೆಯುತ್ತದೆ. ಆಮೂಲಕ ಟೆಸ್ಟ್ ಸರಣಿ ವಿಜೇತನ್ನು ನಿರ್ಧರಿಸಲಾಗುತ್ತದೆ ಎನ್ನುವುದನ್ನು ನಾವು ಗಂಗೂಲಿ ಹೇಳಿಕೆಯಿಂದ ಅರ್ಥ ಮಾಡಿಕೊಳ್ಳಬಹುದು.
ಟೆಸ್ಟ್ ಪಂದ್ಯ ರದ್ದಾಗಲು ನಿಜವಾದ ಕಾರಣವೇನು?
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಒಬ್ಬ ಫಿಸಿಯೋ ಕೋವಿಡ್ ಸೋಂಕಿಗೀಡಾಗಿದ್ದರು. ಆದರೂ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ವೇಳೆ ಕೋಚ್ಗಳಿಲ್ಲದೆ, ಬೆಂಬಲ ಸಿಬ್ಬಂದಿಯಿಲ್ಲದೆ ಆಡಿ ಪಂದ್ಯ ಗೆದ್ದಿತ್ತು. ಮ್ಯಾನ್ಚೆಸ್ಟರ್ನಲ್ಲಿ ನಡೆಯಲಿದ್ದ ಕೊನೇಯ ಟೆಸ್ಟ್ಗೆ ಮುನ್ನ ಭಾರತೀಯ ತಂಡದಲ್ಲಿದ್ದ ಒಬ್ಬ ಫಿಸಿಯೋ ಕೂಡ ಕೋವಿಡ್-19 ಸೋಂಕಿಗೆ ತುತ್ತಾಗಿದ್ದರಿಂದ ಪಂದ್ಯ ಆಡಲು ಭಾರತೀಯ ಕ್ರಿಕೆಟಿಗರು ಹಿಂದೇಟು ಹಾಕಿದ್ದರು. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ರದ್ದೆಂದು ಘೋಷಿಸಲಾಗಿತ್ತು. ಈ ವೇಳೆ ಕೆಲವರು ಭಾರತ ತಂಡದಲ್ಲಿ ಕೋಚ್ಗಳು, ಬೆಂಬಲ ಸಿಬ್ಬಂದಿ ಇಲ್ಲದಿರುವಾಗ ಟೆಸ್ಟ್ ಆಡೋದು ಹೇಗೆ ಎಂದು ಭಾರತದ ನಿಲುವನ್ನು ಬೆಂಬಲಿಸಿದ್ದರೆ, ಇನ್ನು ಕೆಲವರು ಟೀಮ್ ಇಂಡಿಯಾಕ್ಕೆ ಟೆಸ್ಟ್ ಕ್ರಿಕೆಟ್ಗಿಂತ ನಗದು ಶ್ರೀಮಂತ ಐಪಿಎಲ್ ದೊಡ್ಡದಾಯ್ತು ಎಂದಿದ್ದರು. ಐದನೇ ಟೆಸ್ಟ್ ರದ್ದಿಗೆ ಐಪಿಎಲ್ ದೂರಿದವರಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸೇರಿದಂತೆ ಇನ್ನೊಂದಿಷ್ಟು ಮಂದಿಯಿದ್ದರು. ಆದರೆ ಇದಕ್ಕೂ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಆಟಗಾರರು ಆಡಲು ನಿರಾಕರಿಸಿದ್ದರಿಂದ ಪಂದ್ಯ ರದ್ದಾಯಿತೇ ಹೊರತು ಐಪಿಎಲ್ ಕಾರಣಕ್ಕಾಗಿ ಅಲ್ಲ ಎಂದು ಗಂಗೂಲಿ ಹೇಳಿದ್ದಾರೆ.