ಗೆಲ್ತೀವಿ, ಬೇಕಾದರೆ ಬರೆದಿಟ್ಟುಕೊಳ್ಳಿ
ಅಂದ್ಹಾಗೆ ನೆಹ್ರಾ ಮಾರ್ಚ್ 31ರ ಭಾನುವಾರ 9.49 amಗೆ ಒಂದು ಟ್ವೀಟ್ ಮಾಡಿದ್ದರು. ಇದರಲ್ಲಿ 'ಇಲ್ಲಿಂದ ಎಲ್ಲಾ ಪಂದ್ಯಗಳನ್ನು ಗೆಲ್ತೀವಿ, ಇದನ್ನು ಬೇಕಾದರೆ ಬರೆದಿಟ್ಟುಕೊಳ್ಳಿ' ಎಂದು ಬರೆಯಲಾಗಿತ್ತು. ದುರಾದೃಷ್ಟವೆಂದರೆ ಅದೇ ದಿನ ಸನ್ ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಆರ್ಸಿಬಿ 118 ರನ್ ಹೀನಾಯ ಸೋಲು ಅನುಭವಿಸಿತ್ತು.
ಬೇರ್ಸ್ಟೊವ್-ವಾರ್ನರ್ ಅಬ್ಬರ
ಅಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಬೆಂಗಳೂರು ಬೌಲಿಂಗ್ ಆಯ್ದುಕೊಂಡಿತು. ಇನ್ನಿಂಗ್ಸ್ ಆರಂಭಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ, ಜಾನಿ ಬೇರ್ಸ್ಟೊವ್ 114, ಡೇವಿಡ್ ವಾರ್ನರ್ 100 ರನ್ನೊಂದಿಗೆ 231 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಆರ್ಸಿಬಿ 19.5 ಓವರ್ಗೆ ಎಲ್ಲಾ ವಿಕೆಟ್ ಕಳೆದು 113 ಪೇರಿಸಿತು. ಪಂದ್ಯದಲ್ಲಿ ಆರ್ಸಿಬಿ ಪರ 20ಕ್ಕೂ ಹೆಚ್ಚಿನ ವೈಯಕ್ತಿಕ ರನ್ ಗಳಿಸಿದ್ದು ಕಾಲಿನ್ ಡೆ ಗ್ರ್ಯಾಂಡ್ ಹೋಮ್ (37) ಒಬ್ಬರೆ.
ನಿರೀಕ್ಷೆ ಸುಳ್ಳಾಯ್ತು
ಆರ್ಸಿಬಿ ತಂಡದ ಸದ್ಯದ ಪರಿಸ್ಥಿತಿ ಚೆನ್ನಾಗಿಲ್ಲ. ಈ ಸಾರಿ ಐಪಿಎಲ್ ಹಾರಾಜಿನ ವೇಳೆ ಆರ್ಸಿಬಿ ಉತ್ತಮ ಆಟಗಾರರನ್ನು ತಂಡಕ್ಕೆ ಸೇರಿಕೊಂಡಿದ್ದರಿಂದ ಬೆಂಗಳೂರು ಅಭಿಮಾನಿಗಳಲ್ಲಿ ತಂಡದ ಬಗ್ಗೆ ನಿರೀಕ್ಷೆಯಿತ್ತು. ಆದರೆ ಈ ಬಾರಿ ಚೆನ್ನೈ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲೂ ಆರ್ಸಿಬಿ ಕಳಪೆ ಪ್ರದರ್ಶನದೊಂದಿಗೆ ಸೋಲನುಭವಿಸಿತ್ತು. ಆರ್ಸಿಬಿ ಅಭಿಮಾನಿಗಳ ಆಸೆ-ನಿರೀಕ್ಷೆ ಸುಳ್ಳಾಗಿತ್ತು.
ಕಪ್ ಎತ್ತದ ತಂಡಗಳಲ್ಲಿ ಬೆಂಗಳೂರು
ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸದ ತಂಡಗಳಲ್ಲಿ ಡೆಲ್ಲಿ, ಪಂಜಾಬ್ ಮತ್ತು ಬೆಂಗಳೂರು ಸೇರಿವೆ. ತಂಡದ ಸೋಲಿನಿಂದಾಗಿ ಆರ್ಸಿಬಿ ಮುನ್ನಡೆಸುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೂ ಅವಮಾನಕ್ಕೀಡಾಗುತ್ತಿದ್ದಾರೆ. ಈ ನಡುವೆ ನೆಹ್ರಾ ಇನ್ನೆಲ್ಲಾ ಪಂದ್ಯಗಳನ್ನು ನಾವು ಗೆಲ್ಲುತ್ತೀವಿ ಎಂದಿರುವುದು ಸರಿಯಲ್ಲ. ಟೂರ್ನಿಯಲ್ಲಿ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತೇವೆ ಅನ್ನುವ ವಿಶ್ವಾಸ ಟ್ರೋಫಿ ಗೆದ್ದ ತಂಡಗಳೂ ವ್ಯಕ್ತಪಡಿಸಲಾರವು. ಅಂಥದ್ದರಲ್ಲಿ ನೆಹ್ರಾರ ಅತೀ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂದು ಆರ್ಸಿಬಿ ಅಭಿಮಾನಿಗಳೇ ಹೇಳುತ್ತಿದ್ದಾರೆ.
ಇನ್ನೊಂದು ಉಲ್ಲೇಖಾರ್ಹ ಸಂಗತಿಯೆಂದರೆ ಹಾಸ್ಯಾತ್ಮಕವಾಗಿ ಟ್ವೀಟ್ ಆಗಿರುವ ಈ ಟ್ವಿಟರ್ ಅಕೌಂಟ್ ನೆಹ್ರಾ ಅವರ ಅಧಿಕೃತ ಟ್ವಿಟರ್ ಅಕೌಂಟ್ ಹೌದೋ ಅಲ್ಲವೋ ಸ್ಪಷ್ಟವಾಗಿಲ್ಲ. ಪರಿಶೀಲಿಸಿದಾಗ ಇದೇ ಅಕೌಂಟ್ನಲ್ಲಿ 'ಟ್ವಿಟರ್ ಹ್ಯಾಂಡಲ್ ಆಫ್ ಆಶೀಷ್ ನೆಹ್ರಾ, ಕ್ರಿಕೆಟರ್' ಎಂದು ಬರೆದುಕೊಂಡಿದೆ. ಈ ಬಗ್ಗೆ ನೆಹ್ರಾ ಕೂಡ ಸ್ಪಷ್ಟನೆ ನೀಡಿಲ್ಲ.