ಸೋಮವಾರ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಆಟವಾಡಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡಕ್ಕೆ ಗೆಲುವು ತಂದುಕೊಟ್ಟ ಮಂದೀಪ್ ಸಿಂಗ್ ಆಟದ ಕುರಿತು ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
56 ಎಸೆತಗಳಲ್ಲಿ ಅಜೇಯ 66 ರನ್ ಕಲೆಹಾಕಿದ ಮಂದೀಪ್ ಸಿಂಗ್ ಇನ್ನಿಂಗ್ಸ್ನಲ್ಲಿ ಎಂಟು ಬೌಂಡರಿ ಮತ್ತು ಎರಡು ಭರ್ಜರಿ ಸಿಕ್ಸ್ರ್ಗಳಿದ್ದವು. ಮತ್ತೊಂದೆಡೆ ಕ್ರಿಸ್ಗೇಲ್ 51 ರನ್ಗಳಿಸಿ ಗೆಲುವಿನ ಕೊನೆಯಲ್ಲಿ ಔಟಾದರು. ಆದರೆ ಮದೀಪ್ ಪಂದ್ಯದ ಆರಂಭದಿಂದಲೂ ತಂಡದ ಗೆಲುವಿಗೆ ಟೊಂಕಕಟ್ಟಿ ನಿಂತು ಕಿಂಗ್ಸ್ ಇಲೆವೆನ್ ಪಂಜಾಬ್ಗೆ ಎಂಟು ವಿಕೆಟ್ಗಳ ಗೆಲುವು ತಂದುಕೊಟ್ಟರು.
ತಂದೆಯ ಸಾವಿನ ನೋವಿನಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ ಮಂದೀಪ್ ಸಿಂಗ್ ಬಗ್ಗೆ ರಾಹುಲ್ ಹೆಮ್ಮೆ
ಇತ್ತೀಚೆಗಷ್ಟೇ ತಂದೆಯನ್ನು ಕಳೆದುಕೊಂಡ ಮಂದೀಪ್ ಸಿಂಗ್ ಆ ನೋವಿನಲ್ಲಿಯೂ ಉತ್ತಮ ಆಟ ಪ್ರದರ್ಶಿಸಿದಕ್ಕಾಗಿ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಅಜೇಯ ಅರ್ಧಶತಕವನ್ನು ಮಂದೀಪ್ ತಮ್ಮ ದಿವಂಗತ ತಂದೆಗೆ ಅರ್ಪಿಸಿದ್ದಾರೆ. ಇದಾದ ಬಳಿಕ ಅನೇಕ ಕ್ರಿಕೆಟಿಗರು ಮಂದೀಪ್ ಕಠಿಣ ಮನಸ್ಥಿತಿ ಮತ್ತು ಕ್ರಿಕೆಟ್ ಕುರಿತಾದ ಬದ್ಧತೆಯ ಬಗ್ಗೆ ಹೊಗಳಿಕೆಯ ಮಾತನಾಡಿದ್ದಾರೆ.
"ನನಗೆ ತಿಳಿದಿರುವ ಅತ್ಯಂತ ಪ್ರಾಮಾಣಿಕ ಸಂತೋಷದ ಕ್ರಿಕೆಟಿಗ. ಈ ಪರೀಕ್ಷಾ ಸಮಯದಲ್ಲಿ ನೀವು ಏನು ಮಾಡಿದ್ದೀರಿ ಎಂಬುದು ನಿಮ್ಮ ಜೀವನದ ಮೇಲಿನ ನಂಬಿಕೆ ಮತ್ತು ನಿಮ್ಮ ಸಕಾರಾತ್ಮಕ ಮನೋಭಾವದಿಂದಾಗಿ ಆಗಿದೆ. ಚೆನ್ನಾಗಿ ಆಡಿದೆ ಶೆರಾ. ಅವರು ನಿಮ್ಮನ್ನು ಮೇಲಿನಿಂದ ಆಶೀರ್ವದಿಸುತ್ತಿದ್ದಾರೆ. @ mandeeps12 Lion Hearted, " ಎಂದು ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.
ಅಕ್ಟೋಬರ್ 23, ಶುಕ್ರವಾರ ರಾತ್ರಿ ಮಂದೀಪ್ ಸಿಂಗ್ ತನ್ನ ತಂದೆ, 68 ವರ್ಷದ ಮಾಜಿ ಅಥ್ಲೆಟಿಕ್ಸ್ ತರಬೇತುದಾರ ಹರ್ದೇವ್ ಅವರನ್ನು ಕಳೆದುಕೊಂಡರು. ಶನಿವಾರ ಮಧ್ಯಾಹ್ನ ವಿಡಿಯೋ ಕಾಲ್ ಮೂಲಕ ತಂದೆಯ ಕೊನೆಯ ವಿಧಿ ವಿಧಾನಗಳಿಗೆ ಹಾಜರಾದರು. ಅವರ ತಂದೆ ಯಕೃತ್ತಿನ ಸೋಂಕಿನಿಂದ ಬಳಲುತ್ತಿದ್ದರು ಮತ್ತು ಮೊಹಾಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.