ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯವಂದರೆ ಅದೊಂದು ಕೇವಲ ಕ್ರಿಕೆಟ್ ಪಂದ್ಯವಷ್ಟೇ ಅಲ್ಲ. ಅದಕ್ಕಿಂತಲೂ ಹೆಚ್ಚಿ ಜಿದ್ದಾಜಿದ್ದಿ ಅಲ್ಲಿರುತ್ತದೆ. ಮೈದಾನದಲ್ಲಿ ಇತ್ತಂಡಗಳ ಆಟಗಾರರ ನಡುವೆ ವಾಗ್ವಾದ, ವಾಗ್ಯುದ್ದಗಳು ಅಭಿಮಾನಿಗಳ ಪಾಲಿಗೂ ಸಾಕಷ್ಟು ಮನರಂಜನೆಯನ್ನು ನೀಡುತ್ತದೆ. ಇಂತಾ ಪರಿಸ್ಥಿತಿ 2010ರ ಏಷ್ಯಾಕಪ್ನಲ್ಲಿ ಸ್ವಲ್ಪ ಮಿತಿ ಮೀರಿದಂತಿತ್ತು.
ಈ ಪಂದ್ಯ ಟೀಮ್ ಇಂಡಿಯಾ ಆಟಗಾರ ಹರ್ಭಜನ್ ಸಿಂಗ್ ಮತ್ತು ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಮಧ್ಯೆ ಸಂಘರ್ಷಕ್ಕೆ ಸಾಕ್ಷಿಯಾಗಿತ್ತು. ಅದು ಎಷ್ಟರ ಮಟ್ಟಿಗೆಂದರೆ ಪಾಕಿಸ್ತಾನದ ಬೌಲರ್ ಅಖ್ತರ್ ಪಂದ್ಯ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ಆಟಗಾರರಿದ್ದ ಹೋಟೆಲ್ಗೆ ಬಂದು ಹರ್ಬಜನ್ ಸಿಂಗ್ ಜೊತೆಗೆ ಗಲಾಟೆ ಮಾಡಲು ಬಂದಿದ್ದರಂತೆ. ಇದನ್ನು ಸ್ವತಃ ಅಖ್ತರ್ ಹೇಳಿಕೊಂಡಿದ್ದಾರೆ.
ಪ್ರಥಮ ODI ದ್ವಿಶತಕ: 190 ರನ್ಗಳಿಸಿದ್ದಾಗಲೇ ಸಚಿನ್ ಔಟಾಗಿದ್ದರು ಎಂದು ಸುಳ್ಳು ಹೇಳಿದ ಡೇಲ್ ಸ್ಟೇಯ್ನ್
ಹರ್ಭಜನ್ ಸಿಂಗ್ ನಮ್ಮ ಜೊತೆ ಲಾಹೋರ್ನಲ್ಲಿ ಸುತ್ತಾಡಿದ್ದರು, ಜೊತೆಯಾಗಿ ಊಟ ಮಾಡಿದ್ದೆವು, ಪಂಜಾಬ್ನವರಾಗಿದ್ದರಿಂದ ನಮ್ಮ ಅವರ ಸಂಸ್ಕೃತಿಯಲ್ಲೂ ಸಾಕಷ್ಟು ಸಾಮ್ಯತೆಗಳಿತ್ತು. ಹಾಗಿದ್ದರೂ ಹರ್ಭಜನ್ ನನ್ನ ಜೊತೆಗೆ ಜಗಳ ಮಾಡಿಕೊಂಡಿದ್ದರು. ಇದರಿಂದ ನಾನು ಕೋಪಗೊಂಡಿದ್ದೆ. ಪಂದ್ಯ ಮುಗಿದ ಬಳಿಕ ಹೋಟೆಲ್ ಬಳಿ ಹರ್ಭಜನ್ಗಾಗಿ ಹುಡುಕಾಡಿದ್ದೆ. ಅವರ ಜೊತೆಗೆ ಜಗಳ ಮಾಡಬೇಕೆಂದು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ ಅಖ್ತರ್.
ಹರ್ಭಜನ್ ಸಿಂಗ್ ನನಗೆ ಆ ಪಂದ್ಯದ ಬಳಿಕ ಸಿಗಲಿಲ್ಲ. ಮರುದಿನ ನಾನು ಶಾಂತನಾಗಿದ್ದೆ. ಅದಾದ ಬಳಿಕ ನಡೆದ ಘಟನೆ ಬಗ್ಗೆ ಹರ್ಭಜನ್ ಸಿಂಗ್ ಕೂಡ ನನ್ನ ಬಳಿ ಕ್ಷಮೆಯನ್ನು ಕೇಳಿದ್ದರು ಎಂದು ಅಖ್ತರ್ ಹೇಳಿದ್ದಾರೆ. ಇದೇ ಘಟನೆಯ ಬಗ್ಗೆ ಹರ್ಭಜನ್ ಸಿಂಗ್ ಕೂಡ ಇತ್ತೀಚೆಗೆ ಮಾತನಾಡಿದ್ದರು. ಜಗಳಕ್ಕಾಗಿ ಹೋಟೆಲ್ಗೆ ಬರುವುದಾಗಿ ಅಖ್ತರ್ ಬೆದರಿಕೆ ಹಾಕಿದ್ದರು ಭಜ್ಜಿ ಹೇಳಿಕೆಯನ್ನು ನೀಡಿದ್ದರು.
ಸತತ ಶತಕಗಳ ಬಾರಿಸಿ ವಿಶ್ವದಾಖಲೆ ಬರೆದ ಟಾಪ್ 5 ಬ್ಯಾಟ್ಸ್ಮನ್ಗಳು
ಆದರೆ ಈ ಘಟನೆ ಇಬ್ಬರ ನಡುವಿನ ಸ್ನೇಹಕ್ಕೆ ಅಡ್ಡಿಯಾಗಿಲ್ಲ ಎಂಬುದು ಮತ್ತೊಂದು ಗಮನಾರ್ಹ ವಿಚಾರ. ಎರಡು ದೇಶಗಳ ಮಧ್ಯೆ ಹಲವಾರು ವಿಚಾರಗಳಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಇದ್ದರೂ ಹರ್ಭಜನ್ ಸಿಂಗ್ ಮತ್ತು ಅಖ್ತರ್ ಈಗಲೂ ಸ್ನೇಹಿತರಾಗಿ ಉಳಿದುಕೊಂಡಿದ್ದಾರೆ. ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಶೋಯೆಬ್ ಅಖ್ತರ್ ಅವರ ಯೂಟ್ಯೂಬ್ ಚಾನೆಲ್ನಲ್ಲೂ ಹರ್ಭಜನ್ ಕಳೆದ ವರ್ಷ ಪಾಲ್ಗೊಂಡಿದ್ದದ್ದನ್ನು ನೆನಪಿಸಿಕೊಳ್ಳಬಹುದು.