ಡಿಸೆಂಬರ್ 7ರ ಮಂಗಳವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು ಒಂದೆಡೆ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ೨೧ ಆಟಗಾರರ ತಂಡವನ್ನು ಪ್ರಕಟಿಸಿದ್ದರೆ, ಮತ್ತೊಂದೆಡೆ ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಜೇಮ್ಸ್ ಆಂಡರ್ಸನ್ ಬ್ರಿಸ್ಬೇನ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ನಡೆದ ಡಿಸೆಂಬರ್ 7ರ ಕ್ರಿಕೆಟ್ ವಿದ್ಯಮಾನಗಳ ರೌಂಡ್ಅಪ್ ಈ ಕೆಳಕಂಡಂತಿದೆ..
* ವಿರಾಟ್ ಕೊಹ್ಲಿ ನಾಯಕತ್ವದ ಕುರಿತು ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟ್ ನಾಯಕ ಸಲ್ಮಾನ್ ಬಟ್ ವಿರಾಟ್ ಕೊಹ್ಲಿ ತನ್ನ ತಂಡದ ಆಟಗಾರರಿಗೆ ನೀಡುವ ಬೆಂಬಲವನ್ನು ಕೊಂಡಾಡಿದ್ದಾರೆ. ಇತ್ತೀಚಿಗಷ್ಟೆ ವಿರಾಟ್ ಕೊಹ್ಲಿ ಸಾಲು ಸಾಲು ಕಳಪೆ ಪ್ರದರ್ಶನ ನೀಡುವ ಮೂಲಕ ಮಂಕಾಗಿರುವ ಅಜಿಂಕ್ಯಾ ರಹಾನೆ ಕುರಿತು ಮಾತನಾಡುವಾಗ ಬೆಂಬಲವನ್ನು ಸೂಚಿಸಿದ್ದರು. ಈ ವಿಷಯದ ಬಗ್ಗೆ ಮಾತನಾಡಿರುವ ಸಲ್ಮಾನ್ ಬಟ್ ವಿರಾಟ್ ಕೊಹ್ಲಿ ಅವರ ಈ ಗುಣದಿಂದಾಗಿಯೇ ಟೀಮ್ ಇಂಡಿಯಾ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿದೆ, ತಂಡದ ಆಟಗಾರರು ಕಳಪೆ ಫಾರ್ಮ್ ಹೊಂದಿದ್ದಾಗ ಈ ರೀತಿ ಬೆಂಬಲ ಸಿಗಬೇಕು ಎಂದಿದ್ದಾರೆ.
* ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕುರಿತಾಗಿ ಇಂದು ದೊಡ್ಡದೊಂದು ಸುದ್ದಿ ಹರಿದಾಡುತ್ತಿದ್ದು, ಮುಂದಿನ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹರ್ಭಜನ್ ಸಿಂಗ್ ಪ್ರತಿಷ್ಠಿತ ಫ್ರಾಂಚೈಸಿಯೊಂದರ ಸಿಬ್ಬಂದಿ ವರ್ಗದ ಸದಸ್ಯನಾಗಲಿದ್ದಾರೆ ಎನ್ನಲಾಗುತ್ತಿದೆ.
* ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಜಯ ಸಾಧಿಸಿರುವ ಭಾರತ ಡಿಸೆಂಬರ್ ೧೭ಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದ್ದು ಮೊದಲಿಗೆ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ. ಅತ್ತ ಈ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾ ೨೧ ಆಟಗಾರರನ್ನೊಳಗೊಂಡ ತಂಡವನ್ನು ಇಂದು ಪ್ರಕಟಿಸಿದ್ದು, ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..
ಡೀನ್ ಎಲ್ಗರ್ (ನಾಯಕ), ಟೆಂಬಾ ಬವುಮಾ (ಉಪನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕಗಿಸೊ ರಬಾಡ, ಸರೆಲ್ ಎರ್ವೀ, ಬ್ಯೂರಾನ್ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಐಡೆನ್ ಮಾರ್ಕ್ರಾಮ್, ವಿಯಾನ್ ಮಲ್ಡರ್, ಆನ್ರಿಚ್ ನಾರ್ಟ್ಜೆ , ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆಯ್ನ್ನೆ, ಮಾರ್ಕೊ ಜಾನ್ಸೆನ್, ಗ್ಲೆಂಟನ್ ಸ್ಟೌರ್ಮನ್, ಪ್ರೆನೆಲನ್ ಸುಬ್ರಾಯೆನ್, ಸಿಸಂಡಾ ಮಗಾಲಾ, ರಿಯಾನ್ ರಿಕೆಲ್ಟನ್, ಡುವಾನ್ ಒಲಿವಿಯರ್
* ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಢಾಕಾದ ಶೇರ್ ಬಾಂಗ್ಲಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಮೊದಲ ಇನ್ನಿಂಗ್ಸಿನಲ್ಲಿ ೪ ವಿಕೆಟ್ ನಷ್ಟಕ್ಕೆ ೩೦೦ ರನ್ ಗಳಿಸಿ ಡಿಕ್ಲೇರ್ ನೀಡಿದ್ದು, ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಬಾಂಗ್ಲಾದೇಶ ನಾಲ್ಕನೇ ದಿನದಾಟದಂತ್ಯಕ್ಕೆ ೭ ವಿಕೆಟ್ ನಷ್ಟಕ್ಕೆ ೭೬ ರನ್ ಕಲೆಹಾಕಿ ೨೨೪ ರನ್ ಹಿನ್ನಡೆ ಅನುಭವಿಸಿದೆ.
* ನ್ಯೂಜಿಲೆಂಡ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ಬಂದಿರುವ ಕೇನ್ ವಿಲಿಯಮ್ಸನ್ ಈ ಬಾರಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ನಂತರ ಮೊಣಕೈ ಗಾಯಕ್ಕೆ ಒಳಗಾಗಿದ್ದರು. ಹೌದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಡುವಿನ ಸಮಯದಲ್ಲಿ ಮೊಣಕೈ ಗಾಯಕ್ಕೆ ಒಳಗಾಗಿದ್ದ ಕೇನ್ ವಿಲಿಯಮ್ಸನ್ ಸದ್ಯ ಚಿಕಿತ್ಸೆಗೆ ಒಳಗಾಗಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕೇನ್ ವಿಲಿಯಮ್ಸನ್ ಕ್ರಿಕೆಟ್ ಆಡುವುದರಿಂದ ಎರಡರಿಂದ ಮೂರು ತಿಂಗಳುಗಳ ಕಾಲ ದೂರ ಉಳಿಯಲಿದ್ದಾರೆ.