ಕ್ರಿಕೆಟ್ ಜಗತ್ತಿನಲ್ಲಿ ನವೆಂಬರ್ 11ರ ಗುರುವಾರದಂದು ಹಲವಾರು ವಿದ್ಯಮಾನಗಳು ಜರುಗಿವೆ. ಒಂದೆಡೆ ಟಿ ಟ್ವೆಂಟಿ ವಿಶ್ವಕಪ್ ಮುಗಿದ ನಂತರ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ 3 ಟಿ ಟ್ವೆಂಟಿ ಮತ್ತು 2 ಟೆಸ್ಟ್ ಪಂದ್ಯಗಳ ಸರಣಿಯ ಪೈಕಿ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಟೀಮ್ ಇಂಡಿಯಾ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದರೆ, ಮತ್ತೊಂದೆಡೆ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಸೆಣಸಾಟದಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಹೀಗೆ ನವೆಂಬರ್ 11ರ ಗುರುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದಿರುವ ಕೆಲ ಪ್ರಮುಖ ವಿದ್ಯಮಾನಗಳ ವಿವರ ಈ ಕೆಳಕಂಡಂತಿದೆ ನೋಡಿ..
* ಈ ಬಾರಿಯ ವಿಶ್ವಕಪ್ನಲ್ಲಿ ಆರಂಭದಿಂದಲೂ ಅದ್ಭುತ ಪ್ರದರ್ಶನದೊಂದಿಗೆ ಸತತ ಗೆಲುವು ಸಾಧಿಸುತ್ತಾ ಮುನ್ನುಗ್ಗಿದ್ದ ಪಾಕಿಸ್ತಾನ ಅದೇ ಆತ್ಮ ವಿಶ್ವಾಸದೊಂದಿಗೆ ಸೆಮಿಫೈನಲ್ಗೇರಿತ್ತು. ಆದರೆ ಪಾಕಿಸ್ತಾನದ ಗೆಲುವಿನ ಓಟಕ್ಕೆ ಆಸ್ಟ್ರೇಲಿಯಾ ತಡೆ ಹಾಕಿದೆ. ಸಾಕಷ್ಟು ರೋಚಕವಾಗಿ ನಡೆದ ಈ ಕದನದಲ್ಲಿ ಅಂತಿಮವಾಗಿ ಗೆಲುವಿನ ನಗು ಆಸ್ಟ್ರೇಲಿಯಾ ತಂಡದ ಪಾಲಾಗಿದೆ. ಮ್ಯಾಥ್ಯೂ ವೇಡ್, ಮಾರ್ಕಸ್ ಸ್ಟೋಯ್ನಿಸ್ ಹಾಗೂ ಡೇವಿಡ್ ವಾರ್ನರ್ ಈ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.ಪಾಕಿಸ್ತಾನ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 176 ರನ್ಗಳಿಸಿತು.ಆಸ್ಟ್ರೇಲಿಯಾ ತಂಡದ ಗೆಲುವಿಗೆ 2 ಓವರ್ಗಳಲ್ಲಿ 22 ರನ್ಗಳ ಅಗತ್ಯವಿತ್ತು. ಬೌಲಿಂಗ್ ದಾಳಿಗೆ ಇಳಿದಿದ್ದು ಶಾಹೀನ್ ಶಾ ಅಫ್ರಿದಿ. ಮೊದಲ ಎರಡು ಎಸೆತಗಳನ್ನು ಶಾಹೀನ್ ಶಾ ಅದ್ಭುತವಾಗಿ ಎಸೆದಿದ್ದರು. ಅದರಲ್ಲೂ ಎರಡನೇ ಎಸೆತದಲ್ಲಿ ವೇಡ್ ನೀಡಿದ ಕ್ಯಾಚ್ ಕೈ ಚೆಲ್ಲಿದ್ದರು ಹಸನ್ ಅಲಿ. ಇದರ ಸಂಪೂರ್ಣ ಲಾಭವನ್ನು ವೇಡ್ ಪಡೆದುಕೊಂಡರು. ಮೂಂದಿನ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್ ಬಾರಿಸಿದ್ದರು ಮ್ಯಾಥ್ಯೂ ವೇಡ್. ಅಲ್ಲಿಗೆ ಪಾಕಿಸ್ತಾನದ ಫೈನಲ್ಗೇರುವ ಕನಸು ನುಚ್ಚು ನೂರಾಯಿತು. ಆಸ್ಟ್ರೇಲಿಯಾ ಅಮೋಘ ಗೆಲುವು ಸಾಧಿಸಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ.
* "ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ರಾಹುಲ್ ಚಹರ್ ಅವರಿಗೆ ಯಾಕೆ ಸ್ಥಾನ ನೀಡಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಂತಹ ಮಹತ್ವದ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ರಾಹುಲ್ ಚಾಹರ್ ಪ್ರತಿ ಓವರ್ಗೆ 7.5 ರನ್ ನೀಡಿ ಉತ್ತಮ ಪ್ರದರ್ಶನವನ್ನು ನೀಡಿದರು. ಆದರೂ ಸಹ ಇಂತಹ ಆಟಗಾರನಿಗೆ ತಂಡದಲ್ಲಿ ಸ್ಥಾನ ಯಾಕೆ ನೀಡಿಲ್ಲ ಎಂಬುದು ಮಾತ್ರ ತಿಳಿಯುತ್ತಿಲ್ಲ, ಅಷ್ಟಕ್ಕೂ ರಾಹುಲ್ ಚಹರ್ ತಾನು ಮಾಡಿದ ತಪ್ಪಾದರೂ ಏನು ಎಂದು ಆಶ್ಚರ್ಯ ಪಡುವುದಂತೂ ನಿಜ" ಎಂದು ಸುನಿಲ್ ಗವಾಸ್ಕರ್ ರಾಹುಲ್ ಚಹರ್ ಅವರನ್ನು ಆಯ್ಕೆ ಮಾಡದೇ ಇರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
* ಕೋವಿಡ್-19 ಸಾಂಕ್ರಾಮಿಕ ರೋಗವು ಜಗತ್ತಿಗೆ ಆವರಿಸಿದ ಮೇಲೆ ಎಲ್ಲವೂ ಅಸ್ತವ್ಯಸ್ತಗೊಂಡಿತ್ತು. ಅದ್ರಲ್ಲೂ ವಿವಿಧ ಕ್ರೀಡೆಯ ಅದೆಷ್ಟೋ ಟೂರ್ನಿಗಳು ರದ್ದಾದರೆ, ಅನೇಕ ಟೂರ್ನಿಗಳನ್ನ ಮುಂದೂಡಲಾಗಿತ್ತು. ಇನ್ನು ಸ್ಟೇಡಿಯಂನಲ್ಲಿ ಪ್ರೇಕ್ಷಕರಂತು ಕಾಣಸಿಗದಾಗಿತ್ತು. ಆದ್ರೆ ಇದೀಗ ಮತ್ತೆ ಆ ಕ್ಷಣ ಮರುಕಳಿಸಿದೆ. ಅದ್ರಲ್ಲೂ ಕ್ರಿಕೆಟ್ನಲ್ಲಿ ನೂರಕ್ಕೆ ನೂರರಷ್ಟು ಪ್ರೇಕ್ಷಕರನ್ನು ಕಾಣುವ ಸಮಯ ಸನಿಹವಾಗಿದೆ. ಮುಂಬರುವ ಭಾರತ-ನ್ಯೂಜಿಲೆಂಡ್ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶೇಕಡಾ 100ರಷ್ಟು ಪ್ರೇಕ್ಷಕರನ್ನು ಕಾಣಬಹುದಾಗಿದೆ.
* ಟೀಮ್ ಇಂಡಿಯಾದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬಬಲ್ಲ ಆಟಗಾರನನ್ನು ಹೆಸರಿಸಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವೆಂಕಟೇಶ್ ಐಯ್ಯರ್ ಬ್ಯಾಟಿಂಗ್ ಜೊತೆಗೆ ಮಧ್ಯಮ ವೇಗದ ಬೌಲಿಂಗ್ ಮೂಲಕವೂ ತಂಡಕ್ಕೆ ನೆರವಾಗುವ ಕಾರಣ ತಂಡಕ್ಕೆ ಸಮತೋಲನವನ್ನು ನೀಡಬಲ್ಲರು ಎಂದಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಕೊಡುಗೆ ನೀಡುವ ಸಾಮರ್ಥ್ಯವಿರುವ ವೆಂಕಟೇಶ್ ಐಯ್ಯರ್ ಟೀಮ್ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.