ನವೆಂಬರ್ 17ರ ಬುಧವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿವೆ. ಒಂದೆಡೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 5 ವಿಕೆಟ್ zwj;ಗಳ ರೋಚಕ ಜಯವನ್ನು ಸಾಧಿಸಿದ್ದರೆ, ಮತ್ತೊಂದೆಡೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಟಿ ಟ್ವೆಂಟಿ ಪಂದ್ಯದ ಟಿಕೆಟ್ ಗಳು ಕೇವಲ 15 ನಿಮಿಷಗಳಲ್ಲಿಯೇ ಮಾರಾಟವಾಗಿದೆ. ಹೀಗೆ ನವೆಂಬರ್ 17ರ ಪ್ರಮುಖ ಕ್ರಿಕೆಟ್ ಸುದ್ದಿಗಳು ಈ ಕೆಳಕಂಡಂತಿವೆ ಓದಿ..* ಜೈಪುರದ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ಗಳ ಗೆಲುವನ್ನ ಸಾಧಿಸಿದೆ. ಟೀಂ ಇಂಡಿಯಾದ ಹೊಸ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಹಾಗೂ ಹೋಸ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತವು ಶುಭಾರಂಭ ಮಾಡಿದೆ. * ಸೆಮಿಫೈನಲ್ ಹಂತದಲ್ಲಿ ಸೋಲುವುದರ ಮೂಲಕ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ಪಾಕಿಸ್ತಾನ ತಂಡ ಇದೀಗ ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡಿದ್ದು 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಯನ್ನಾಡಲು ಮೀರ್ ಪುರ್ ನಗರದಲ್ಲಿರುವ ಶೇರ್ ಎ ಬಾಂಗ್ಲಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ತಂಡದ ಆಟಗಾರರು ನವೆಂಬರ್ 15ರಂದು ಅಭ್ಯಾಸ ನಡೆಸಿದ್ದರು. ಹೀಗೆ ಪಾಕಿಸ್ತಾನ ಅಭ್ಯಾಸ ನಡೆಸುವ ವೇಳೆ ತನ್ನ ದೇಶದ ಬಾವುಟವನ್ನು ಕ್ರೀಡಾಂಗಣದಲ್ಲಿ ನೆಟ್ಟು ತಾಲೀಮು ನಡೆಸಿದೆ. ಇದನ್ನು ಕಂಡ ಬಾಂಗ್ಲಾ ಜನತೆ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡದ ಅಭಿಮಾನಿಗಳು ಪಾಕಿಸ್ತಾನ ಆಟಗಾರರ ನಡೆಯ ವಿರುದ್ಧ ಕಿಡಿಕಾರಿದ್ದಾರೆ. * ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನವೆಂಬರ್ 21ರಂದು ನಡೆಯಲಿರುವ ತೃತೀಯ ಟಿ ಟ್ವೆಂಟಿ ಪಂದ್ಯದ 15000 ಟಿಕೆಟ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಲಾಗಿದೆ. ಹೀಗೆ 15000 ಟಿಕೆಟ್ ಗಳ ಆನ್ ಲೈನ್ ಮಾರಾಟ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಮುಗಿಬಿದ್ದು ಪ್ರೇಕ್ಷಕರು ಟಿಕೆಟ್ ಖರೀದಿಸಿದ್ದಾರೆ. ಪರಿಣಾಮ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ತೃತೀಯ ಟಿ ಟ್ವೆಂಟಿ ಪಂದ್ಯದ 15000 ಟಿಕೆಟ್ ಗಳು ಕೇವಲ 15 ನಿಮಿಷಗಳಲ್ಲಿ ಮಾರಾಟವಾಗಿವೆ. ಅಷ್ಟೇ ಅಲ್ಲದೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನವೆಂಬರ್ 19ರಂದು ರಾಂಚಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ದ್ವಿತೀಯ ಟಿ ಟ್ವೆಂಟಿ ಪಂದ್ಯದ ಟಿಕೆಟ್ ಗಳು ಕೂಡ ಮಾರಾಟವಾಗಿವೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. * ಕಳೆದ 9 ವರ್ಷಗಳ ಕಾಲ ಐಸಿಸಿ ಪುರುಷರ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿದ್ದ ಅನಿಲ್ ಕುಂಬ್ಳೆ ಅವರ ಸೇವಾವಧಿ ಪೂರ್ಣಗೊಂಡಿದೆ. ಹೀಗಾಗಿ ಆ ಸ್ಥಾನಕ್ಕೆ ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ನೇಮಕವಾಗಿದ್ದಾರೆ. ಈ ಬಗ್ಗೆ ಐಸಿಸಿ ನವೆಂಬರ್ 17ರಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಈವರೆಗೆ ಐಸಿಸಿ ಪುರುಷರ ಕ್ರಿಕೆಟ್ ಸಮಿತಿಗೆ ಮುಖ್ಯಸ್ಥರಾಗಿದ್ದ ಅನಿಲ್ ಕುಂಬ್ಳೆ 3 ವರ್ಷಗಳ ಗರಿಷ್ಠ ಪೂರು ಅವಧಿಯನ್ನು ಪೂರೈಸಿದ್ದಾರೆ. ಅಂದರೆ 9 ವರ್ಷಗಳ ಕಾಲ ಈ ಹುದ್ದೆಯನ್ನು ಕುಂಬ್ಳೆ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹೀಗಾಗಿ ಆ ಸ್ಥಾನಕ್ಕೆ ಈಗ ಹೊಸ ನೇಮಕ ಮಾಡಿಕೊಳ್ಳಲಾಗಿದೆ. ಐಸಿಸಿ ಮುಖ್ಯಸ್ಥ ಗ್ಲೆಗ್ ಬಾರ್ಕ್ಲೆ ಮಾಧ್ಯಮ ಪ್ರಕಟಣೆಯ ಮೂಲಕ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. * ಟಿ20 ವಿಶ್ವಕಪ್ ನ ಫೈನಲ್ ಪಂದ್ಯದ ಬಳಿಕ ಐಸಿಸಿ ನೂತನ ಟಿ20 ಶ್ರೇಯಾಂಕಪಟ್ಟಿಯನ್ನು ಪ್ರಕಟಿಸಿದೆ. ಈ ನೂತನ ಪಟ್ಟಿಯಲ್ಲಿ ಪಾಕಿಸ್ತಾನದ ಉಪ ನಾಯಕ ಮೊಹಮ್ಮದ್ ರಿಜ್ವಾನ್ ಏರಿಕೆ ಕಂಡಿದ್ದು ಟಾಪ್ ಐದರಲ್ಲಿ ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ 8ನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಐದನೇ ಶ್ರೇಯಾಂಕದಲ್ಲಿದ್ದ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಬೌಲರ್ ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ ಏರಿಕೆ ಕಂಡಿದ್ದಾರೆ. ಆಡಂ ಜಂಪಾ ಎರಡು ಸ್ಥಾನಗಳ ಏರಿಕೆ ಕಂಡಿದ್ದು ಟಾಪ್ 3 ಬೌಲರ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.