ನವೆಂಬರ್ 22ರ ಸೋಮವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿವೆ. ಒಂದೆಡೆ, ಬಾಂಗ್ಲಾದೇಶದಲ್ಲಿ ನಡೆದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ 3 ಪಂದ್ಯಗಳಲ್ಲಿಯೂ ಜಯ ಸಾಧಿಸಿರುವ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ವೈಟ್ ವಾಶ್ ಬಳಿದಿದ್ದರೆ, ಮತ್ತೊಂದೆಡೆ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಅಭ್ಯಾಸ ಆರಂಭಿಸಿದೆ. ಹೀಗೆ ನವೆಂಬರ್ 22ರ ಕ್ರಿಕೆಟ್ ಜಗತ್ತಿನ ಸುದ್ದಿಗಳು ಈ ಕೆಳಕಂಡಂತಿವೆ.
* ಟಿ20 ವಿಶ್ವಕಪ್ನ ನಂತರ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಿದೆ. ಈ ಮೂರು ಪಂದ್ಯಗಳಲ್ಲಿ ಮೂರನ್ನು ಕೂಡ ಪ್ರವಾಸಿ ಪಾಕಿಸ್ತಾನ ಗೆದ್ದು ಬೀಗಿದೆ. ಈ ಮೂಲಕ ತವರಿನಲ್ಲಿ ಬಾಂಗ್ಲಾದೇಶ ತಂಡಕ್ಕೆ ವೈಟ್ವಾಶ್ ಬಳಿದಿದೆ. ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ಧ ಬಾಂಗ್ಲಾದೇಶ ಭಾರೀ ಅಂತರದಿಂದ ಗೆದ್ದುಕೊಂಡಿತ್ತು. ಹೀಗಾಗಿ ಪಾಕಿಸ್ತಾನದ ವಿರುದ್ಧಧ ಸರಣಿ ಕೂಡ ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ ಈ ಸರಣಿಯಲ್ಲಿ ಬಾಂಗ್ಲಾದೇಶ ಪಾಕಿಸ್ತಾನಕ್ಕೆ ತೀವ್ರ ಪೈಪೋಟಿ ನೀಡಿತ್ತು. ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ರೋಚಕವಾಗಿ ಗೆದ್ದುಕೊಳ್ಳುವ ಮೂಲಕ ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಪಾಕಿಸ್ತಾನ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ 124/7 ರನ್ಗಳಿಸಿತ್ತು. ಇದನ್ನು ಬೆನ್ನಟ್ಟಿದ ಪಾಕಿಸ್ತಾನ ಅಂತಿಮ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ಗೆಲುವು ಸಾಧಿಸಿದೆ. ಈ ಮೂಲಕ ಐದು ವಿಕೆಟ್ಗಳ ಅಂತರದ ಗೆಲುವು ಸಾಧಿಸಿದೆ.
* ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ಗಳು ಸ್ಥಿರ ಪ್ರದರ್ಶನ ನೀಡಿದರು. ಆದರೆ ತಂಡದ ಮಧ್ಯಮ ಕ್ರಮಾಂಕವು ಸಂಪೂರ್ಣ ಉತ್ತಮ ಸ್ಥಿತಿಯಲ್ಲಿರಲಿಲ್ಲ. ಅದ್ರಲ್ಲು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಫಾರ್ಮ್ ವೈಫಲ್ಯ ಅನುಭವಿಸುತ್ತಿದ್ದಾರೆ ಎಂದು ವೆಟ್ಟೋರಿ ಆ ಅಂಶವನ್ನ ಎತ್ತಿಹಿಡಿದಿದ್ದಾರೆ. "ಅವರು ಟಿ20 ಕ್ರಿಕೆಟ್ನಲ್ಲಿ ಅವರ ಗತಿಯನ್ನು ಸರಿಯಾಗಿ ಪಡೆದಿಲ್ಲ. ನಿರ್ದಿಷ್ಟವಾಗಿ ಈ ಸರಣಿಯಲ್ಲಿ ಅವರು ತಮ್ಮ ಪಾತ್ರವನ್ನು ಅರ್ಥಮಾಡಿಕೊಂಡಿಲ್ಲ. ಕೆಲವೊಮ್ಮೆ ಅವನು ಅತಿಯಾಗಿ ಜಾಗರೂಕನಾಗಿರುತ್ತಾನೆ ಮತ್ತು ನಂತರ ಅವನು ಅಜಾಗರೂಕನಾಗಿರುತ್ತಾನೆ. ಒಬ್ಬ ಶ್ರೇಷ್ಠ ಟಿ20 ಬ್ಯಾಟ್ಸ್ಮನ್ ಉತ್ತಮವಾಗಿ ಬ್ಯಾಟಿಂಗ್ ಮಾಡುವುದನ್ನು ನೀವು ನೋಡಿದಾಗ, ಅದು ಫ್ಳೋ, ವೇಗ ಮತ್ತು ಆ ಲಯವನ್ನು ಸಹ ನೀವು ಕಾಣುತ್ತೀರಿ. ಆದ್ರೆ ಆತ ನಿಜವಾಗಿಯೂ ಅದನ್ನು ಇನ್ನೂ ಪಡೆದಿಲ್ಲ, "ಎಂದು ಡೇನಿಯಲ್ ವೆಟ್ಟೋರಿ ಇಎಸ್ಪಿಎನ್ಕ್ರಿಕ್ಇನ್ಫೋ ಜೊತೆ ಮಾತನಾಡುವಾಗ ಹೇಳಿದರು.
* ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 2031ರವರೆಗಿನ ಐಸಿಸಿ ಟೂರ್ನಿಗಳ ವೇಳಾಪಟ್ಟಿಯನ್ನ ಪ್ರಕಟಿಸಿತು. ಯಾವ ದೇಶ ಯಾವ ಐಸಿಸಿ ಟೂರ್ನಿಯ ಆತಿಥ್ಯವಹಿಸಲಿದೆ ಎಂದು ಬಹಿರಂಗಪಡಿಸಿತು. ಇದರಲ್ಲಿ ಭಾರತ ಮೂರು ಐಸಿಸಿ ಟೂರ್ನಿಗಳ ಆತಿಥ್ಯ ಪಡೆದುಕೊಂಡಿದೆ. ಈಗ ಐಸಿಸಿಗೆ ಅಷ್ಟೇ ಅಲ್ಲದೆ ಬಿಸಿಸಿಐಗೂ ಕೂಡ ತಲೆ ನೋವಿನ ವಿಚಾರ ಆಗಿರೋದು ಪಾಕಿಸ್ತಾನದ ಆತಿಥ್ಯ. ಹೌದು 2025ರ ಐಸಿಸಿ ಚಾಂಪಿಯನ್ ಟ್ರೋಫಿ ಆತಿಥ್ಯವನ್ನ ಪಾಕಿಸ್ತಾನ ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಭಾರತ ನಿಜಕ್ಕೂ ಪಾಕಿಸ್ತಾನದಲ್ಲಿ ಹೋಗಿ ಟೂರ್ನಿಯಲ್ಲಿ ಭಾಗಿಯಾಗುತ್ತಾ ಅನ್ನೋದು ಸಾಕಷ್ಟು ಪ್ರಶ್ನೆ ಮೂಡಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ದ್ವಿಪಕ್ಷೀಯ ಸರಣಿಗಳಲ್ಲಿ ಉಭಯ ರಾಷ್ಟ್ರಗಳು ಭಾಗಿಯಾಗಿ ಎಷ್ಟೋ ವರ್ಷಗಳೇ ಉರುಳಿ ಹೋಗಿವೆ. ಹೀಗಾಗಿ ಅದೇ ಸಾಲಿನಲ್ಲಿ 2025ರಲ್ಲಿ ಭಾರತವು ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದು ನಿಜವಾಗಿಯೂ ಸವಾಲಿನದ್ದಾಗಿದೆ ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಹೇಳಿದ್ದಾರೆ.