ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ವಿಷಯವೆಂದರೆ ಅದು ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ. ಹೌದು, ಅಕ್ಟೋಬರ್ 17ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23ರ ಶನಿವಾರದಿಂದ ಆರಂಭಗೊಂಡಿದ್ದು ನಿನ್ನೆಯಷ್ಟೇ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋಲನ್ನು ಅನುಭವಿಸಿದೆ. ಹೀಗಾಗಿ ಇಂದು ಕ್ರಿಕೆಟ್ ಜಗತ್ತಿನಲ್ಲಿ ಅತಿಯಾಗಿ ಚರ್ಚಿಸಲ್ಪಟ್ಟ ವಿಷಯ ಇದಾಗಿದ್ದು ಇದರ ಜೊತೆ ಇಂದು ಕ್ರಿಕೆಟ್ ಜಗತ್ತಿನಲ್ಲಿ ಜರುಗಿದ ಕೆಲ ಪ್ರಮುಖ ವಿದ್ಯಮಾನಗಳು ಕೆಳಕಂಡಂತಿವೆ.
* ಪ್ರಸಕ್ತ ಸಾಲಿನ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 17ನೇ ಪಂದ್ಯದಲ್ಲಿ ಇಂದು ( ಅಕ್ಟೋಬರ್ 25 ) ಅಫ್ಘಾನಿಸ್ಥಾನ ಮತ್ತು ಸ್ಕಾಟ್ಲೆಂಡ್ ತಂಡಗಳು ಸೆಣಸಾಟ ನಡೆಸಿವೆ. ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಸೂಪರ್ 12 ಹಂತಕ್ಕೆ ಪ್ರವೇಶಿಸಿರುವ ಸ್ಕಾಟ್ಲೆಂಡ್ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ಈ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸುವುದರ ಮೂಲಕ ಎದುರಾಳಿ ಸ್ಕಾಟ್ಲೆಂಡ್ ತಂಡಕ್ಕೆ 191 ರನ್ಗಳ ಗುರಿಯನ್ನು ನೀಡಿತು. ಅಫ್ಘಾನಿಸ್ತಾನ ನೀಡಿದ 191 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಸ್ಕಾಟ್ಲೆಂಡ್ 10.2 ಓವರ್ಗಳಲ್ಲಿಯೇ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು ಕೇವಲ 60 ರನ್ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ಅಫ್ಘಾನಿಸ್ತಾನ ಸ್ಕಾಟ್ಲೆಂಡ್ ವಿರುದ್ಧ 130 ರನ್ಗಳ ಭರ್ಜರಿ ಜಯವನ್ನು ಸಾಧಿಸಿತು.
ಟಿ20 ವಿಶ್ವಕಪ್: ಈ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂದು ಬಲಿಷ್ಠ ತಂಡವನ್ನೇ ಕಡೆಗಣಿಸಿದ ಇಯಾನ್ ಚಾಪೆಲ್!
* ಅಫ್ಘಾನಿಸ್ತಾನ ಸ್ಕಾಟ್ಲೆಂಡ್ ವಿರುದ್ಧ 130 ರನ್ಗಳ ಭರ್ಜರಿ ಜಯವನ್ನು ಸಾಧಿಸುವುದರ ಮೂಲಕ ಅಫ್ಘಾನಿಸ್ತಾನ ಸೂಪರ್ 12 ಹಂತದ ಗ್ರೂಪ್ 2 ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು ಇತ್ತೀಚೆಗಷ್ಟೇ ಭಾರತದ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿಕೊಂಡಿದ್ದ ಪಾಕಿಸ್ತಾನವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಎರಡೂ ತಂಡಗಳು ಸಹ ತಲಾ ಒಂದೊಂದು ಪಂದ್ಯವನ್ನಾಡಿ ಗೆಲುವನ್ನು ಸಾಧಿಸಿದ್ದು, ಪಾಕಿಸ್ತಾನ ತಂಡಕ್ಕಿಂತ ಅಫ್ಘಾನಿಸ್ತಾನ ತಂಡದ ನೆಟ್ ರನ್ ರೇಟ್ ಹೆಚ್ಚಾಗಿರುವ ಕಾರಣ ಅಫ್ಘಾನಿಸ್ತಾನ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
* "ನಾವು ಭಾರತ ತಂಡವನ್ನು ಬೆಂಬಲಿಸುವಾಗ ಆ ತಂಡದ ಪ್ರತಿಯೊಬ್ಬ ಆಟಗಾರನನ್ನು ಕೂಡ ಬೆಂಬಲಿಸಬೇಕು. ಮೊಹಮ್ಮದ್ ಶಮಿ ಭಾರತ ತಂಡದ ಓರ್ವ ಪ್ರಮುಖ ಬೌಲರ್. ಕ್ರಿಕೆಟ್ ಜೀವನದಲ್ಲಿ ಪ್ರತಿಯೊಬ್ಬ ಆಟಗಾರ ಎದುರಿಸಬಹುದಾದ ಕೆಟ್ಟ ದಿನವನ್ನು ಅವರು ಕೂಡ ಎದುರಿಸಿದ್ದಾರೆ. ನಾನು ಮೊಹಮ್ಮದ್ ಶಮಿ ಮತ್ತು ಟೀಮ್ ಇಂಡಿಯಾ ಪರ ನಿಲ್ಲುತ್ತೇನೆ" ಎಂದು ಟ್ವೀಟ್ ಮಾಡುವ ಮುಖಾಂತರ ಸಚಿನ್ ತೆಂಡೂಲ್ಕರ್ ಭಾರತ ತಂಡವನ್ನು ಬೆಂಬಲಿಸುವ ಕ್ರಿಕೆಟ್ ಅಭಿಮಾನಿಗಳು ಆಟಗಾರರಿಗೂ ಗೌರವ ನೀಡಬೇಕೆಂಬುದನ್ನು ಮನದಟ್ಟು ಮಾಡಿದ್ದಾರೆ.
ಪಾಕ್ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಕೊಹ್ಲಿ; ಕಳಪೆ ಪ್ರದರ್ಶನ ನೀಡಿದ ರೋಹಿತ್ ಬಗ್ಗೆ ಕೊಹ್ಲಿ ಮಾತು
* ಮುಂಬರುವ ಐಪಿಎಲ್ ಟೂರ್ನಿಗಾಗಿ ನಡೆದ ನೂತನ ತಂಡಗಳ ಹರಾಜಿನಲ್ಲಿ 22 ವಿವಿಧ ಕಂಪನಿಗಳು ಭಾಗವಹಿಸಿದ್ದು 10 ಕಂಪನಿಗಳು ಅಂತಿಮವಾಗಿದ್ದವು. ಈ ಕಂಪೆನಿಗಳ ಪೈಕಿ ಕೊನೆಗೆ ಸಂಜೀವ್ ಗೊಯಂಕಾ ಮಾಲೀಕತ್ವದ ಆರ್ಪಿಎಸ್ಜಿ ಲಕ್ನೋ ತಂಡವನ್ನು 7,090 ಕೋಟಿಗೆ ಖರೀದಿಸಿತು ಹಾಗೂ ಲಂಡನ್ ಮೂಲದ ಕಂಪೆನಿಯಾದ ಸಿವಿಸಿ ಕ್ಯಾಪಿಟಲ್ ಅಹಮದಾಬಾದ್ ತಂಡವನ್ನು 5,600 ಕೋಟಿಗೆ ತನ್ನದಾಗಿಸಿಕೊಂಡಿತು. ಈ ಬಾರಿಯ ಹರಾಜಿನಲ್ಲಿ ಲಕ್ನೋ ತಂಡವನ್ನು ಖರೀದಿಸಿರುವ ಆರ್ಪಿಎಸ್ಜಿ ಮಾಲೀಕ ಸಂಜೀವ್ ಗೊಯಂಕಾ ಈ ಹಿಂದೆ 2 ವರ್ಷಗಳ ಕಾಲ ಐಪಿಎಲ್ ಆಡಿದ್ದ ಎಂಎಸ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ಜಿಯಂಟ್ಸ್ ತಂಡವನ್ನು ಖರೀದಿಸಿದ್ದರು. ಈ ಮೂಲಕ ಸಂಜೀವ್ ಗೊಯೆಂಕಾ ರೈಸಿಂಗ್ ಪುಣೆ ಸೂಪರ್ಜಿಯಂಟ್ಸ್ ನಂತರ ಲಕ್ನೋ ತಂಡವನ್ನು ಖರೀದಿ ಮಾಡಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮರುಪ್ರವೇಶಿಸಿದ್ದಾರೆ.