ಸೆಪ್ಟೆಂಬರ್ 18ರ ಶನಿವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಪ್ರಮುಖ ವಿದ್ಯಮಾನಗಳು ಜರುಗಿದ್ದು, ಒಂದೆಡೆ ಕ್ವಾರಂಟೈನ್ ನಿಯಮಕ್ಕೆ ಒಳಗಾಗಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಇಂದು ( ಸೆಪ್ಟೆಂಬರ್ 18 ) ಕ್ವಾರಂಟೈನ್ ನಿಯಮವನ್ನು ಯಶಸ್ವಿಯಾಗಿ ಮುಗಿಸಿದ್ದು ಮುಂಬೈ ಇಂಡಿಯನ್ಸ್ ತಂಡದ ಆಟಗಾರರನ್ನು ಸೇರಿಕೊಂಡಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಆದಷ್ಟು ಬೇಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿದು ಓರ್ವ ಬ್ಯಾಟ್ಸ್ಮನ್ ಆಗಿ ಬೆಂಗಳೂರು ತಂಡದ ಪರ ಆಡಲಿದ್ದಾರೆ ಎಂದು ರಾಜ್ಕುಮಾರ್ ಶರ್ಮಾ ಹೇಳಿಕೆ ನೀಡಿದ್ದಾರೆ. ಹೀಗೆ ಸೆಪ್ಟೆಂಬರ್ 18ರ ಶನಿವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದ ಘಟನೆಗಳ ಕಿರು ನೋಟ ಈ ಕಳೆಕಂಡಂತಿದೆ ನೋಡಿ..
* ಐಪಿಎಲ್ ಆರಂಭಿಕ ಹಂತದಲ್ಲಿ ಆರ್ಸಿಬಿ ತಂಡದಲ್ಲಿ ಆಡಿದ್ದ ಕೆಲ ಆಟಗಾರರು ದ್ವಿತೀಯ ಹಂತದಿಂದ ಕಾರಣಾಂತರಗಳಿಂದ ಮಿಸ್ ಆಡಿದ್ದರು. ಮಿಸ್ ಆದವರಲ್ಲಿ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ಕೂಡ ಇದ್ದರು. ಇವರ ಬದಲಾಗಿ ಆರ್ಸಿಬಿ ವನಿಂದು ಹಸರಂಗ ಮತ್ತು ದುಶ್ಮಂತ ಚಮೀರ ಅವರೊಡನೆ ಒಪ್ಪಂದ ಮಾಡಿಕೊಂಡಿದೆ. "ನಾವು ತಂಡದಲ್ಲಿ ಬದಲಾವಣೆ ಮಾಡಿಕೊಂಡಿದ್ದೇವೆ. ನಾವು ಬದಲಿ ಆಟಗಾರರನ್ನು ತಂಡಕ್ಕೆ ತಂದಿದ್ದೇವೆ. ಆರಂಭಿಕ ಹಂತದಲ್ಲಿ ಆಡಿದ್ದ ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ಎರಡನೇ ಹಂತದಲ್ಲಿ ಆಡುತ್ತಿಲ್ಲ. ಅವರು ಕೊಟ್ಟ ಕಾರಣ ಖಂಡಿತವಾಗಿಯೂ ಅರ್ಥಮಾಡಿಕೊಳ್ಳುವಂಥದ್ದು. ಅವರ ಬದಲಾಗಿಯೇ ಇಲ್ಲಿನ ಪರಿಸ್ಥಿತಿ ಗೊತ್ತಿರುವ ಈ ಇಬ್ಬರು ಆಟಗಾರರು ಆರ್ಸಿಬಿ ಸೇರಿಕೊಂಡಿದ್ದಾರೆ. ವನಿಂದು ಹಸರಂಗ ಮತ್ತು ದುಶ್ಮಂತ ಚಮೀರ ಇಬ್ಬರೂ ಶ್ರೀಲಂಕಾ ಪರ ಬಹಳಷ್ಟು ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇಬ್ಬರೂ ಆರ್ಸಿಬಿಗೆ ಹೊಸ ಆಯಾಮ ನೀಡಿದ್ದಾರೆ," ಎಂದು ಕೊಹ್ಲಿ ಹೇಳಿದ್ದಾರೆ.
* ಈ ಬಾರಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡಕ್ಕೆ ಎಂಎಸ್ ಧೋನಿ ಅವರನ್ನು ಮೆಂಟರ್ ಆಗಿ ಆಯ್ಕೆ ಮಾಡಿರುವ ಬಿಸಿಸಿಐ ಆಯ್ಕೆ ಕುರಿತು ವಿರೇಂದ್ರ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರರೇ ತುಂಬಿರುವ ತಂಡಕ್ಕೆ ಎಂಎಸ್ ಧೋನಿಯಂತಹ ಅನುಭವಿ ಕ್ರಿಕೆಟಿಗ ಮೆಂಟರ್ ಆಗಿ ನೇಮಕವಾಗಿರುವುದು ಉತ್ತಮವಾದ ಆಯ್ಕೆ ಎಂದು ವಿರೇಂದ್ರ ಸೆಹ್ವಾಗ್ ಶ್ಲಾಘಿಸಿದ್ದಾರೆ.
* ಕೋಲ್ಕತ್ತಾ ನೈಟ್ ರೈಡರ್ಸ್ನ ಸ್ಟಾರ್ ಬ್ಯಾಟ್ಸ್ಮನ್, ವೆಸ್ಟ್ ಇಂಡೀಸ್ನ ಆಲ್ ರೌಂಡರ್ ಆ್ಯಂಡ್ರೆ ರಸೆಲ್ ಸೆಪ್ಟೆಂಬರ್ 18ರಂದು ಅಭ್ಯಾಸ ಆರಂಭಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಬಂದಿರುವ ರಸೆಲ್ ನೆಟ್ ಅಭ್ಯಾಸ ನಡೆಸಿದ್ದಾರೆ.
* ಕ್ವಾರಂಟೈನ್ ನಿಯಮಕ್ಕೆ ಒಳಗಾಗಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಇಂದು ( ಸೆಪ್ಟೆಂಬರ್ 18 ) ಕ್ವಾರಂಟೈನ್ ನಿಯಮವನ್ನು ಯಶಸ್ವಿಯಾಗಿ ಮುಗಿಸಿದ್ದು ಮುಂಬೈ ಇಂಡಿಯನ್ಸ್ ತಂಡದ ಆಟಗಾರರನ್ನು ಸೇರಿಕೊಂಡಿದ್ದಾರೆ. ಹೀಗೆ ಕ್ವಾರಂಟೈನ್ ಮುಗಿಸಿ ತಂಡಕ್ಕೆ ಪ್ರವೇಶವನ್ನು ಮಾಡಿದ ರೋಹಿತ್ ಶರ್ಮಾಗೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ನಗುಮುಖದೊಂದಿಗೆ ಪರಸ್ಪರ ಅಪ್ಪುಗೆಯನ್ನು ನೀಡುತ್ತಾ ಸ್ವಾಗತವನ್ನು ಕೋರಿದರು.
* ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದರ ಕುರಿತಾಗಿ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುವ ವೇಳೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ತ್ಯಜಿಸಲಿದ್ದಾರೆ ಎಂಬುದರ ಕುರಿತು ಕೂಡ ಕೊಹ್ಲಿ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕತ್ವದ ಕುರಿತು ಹೆಚ್ಚಿನ ಗಮನ ಹರಿಸುವ ಸಲುವಾಗಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ವಿದಾಯ ಹೇಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜ್ಕುಮಾರ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಹೌದು, ವಿರಾಟ್ ಕೊಹ್ಲಿ ಆದಷ್ಟು ಬೇಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿದು ಓರ್ವ ಬ್ಯಾಟ್ಸ್ಮನ್ ಆಗಿ ಬೆಂಗಳೂರು ತಂಡದ ಪರ ಆಡಲಿದ್ದಾರೆ ಎಂದು ರಾಜ್ಕುಮಾರ್ ಶರ್ಮಾ ಹೇಳಿಕೆ ನೀಡಿದ್ದಾರೆ.
* ಭಾರತದ ಇಂಗ್ಲೆಂಡ್ ಪ್ರವಾಸದ ವೇಳೆ ಬೌಲರ್ ಶಾರ್ದೂಲ್ ಠಾಕೂರ್ ಮಿಂಚಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಶಾರ್ದೂಲ್ಗೆ ಅಭಿಮಾನಿಗಳು ಪ್ರೀತಿಯಿಂದ 'ಲಾರ್ಡ್ಸ್ ಶಾರ್ದೂಲ್' ಎಂದು ಕರೆಯತೊಡಗಿದ್ದರು. ಅಂಥ ಶಾರ್ದೂಲ್ ಇತ್ತೀಚಿಗೆ ಟಿ20 ವಿಶ್ವಕಪ್ಗಾಗಿ ಭಾರತ ಪ್ರಕಟಿಸಿದ ತಂಡದಲ್ಲಿ ಇರಲಿಲ್ಲ. ಶಾರ್ದೂಲ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.