ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಪಿಚ್ ಬಗ್ಗೆ ಸಾಕಷ್ಟು ವಿವಾದಗಳು ಎದ್ದಿದೆ. ಪಿಚ್ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ಟೀಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಟೀಕೆಗಳಿಗೆ ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ಪ್ರತಿಕ್ರಿಯಿಸಿದ್ದಾರೆ. ಭಾರತ ಯಾವಾಗಲೂ ವಿದೇಶಿ ನೆಲದಲ್ಲಿ ಬ್ಯಾಟಿಂಗ್ ಮಾಡುವಾಗ ಸೀಮಿಂಗ್ ಪಿಚ್ ಎಂದು ದೂರು ನೀಡಿಲ್ಲ ಎಂದಿದ್ದಾರೆ.
ಅಹ್ಮದಾಬಾದ್ನಲ್ಲಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ನಡೆದಿದ್ದು ಅದು ಎರಡನೇ ದಿನದಲ್ಲೇ ಅಂತ್ಯ ಕಂಡಿತ್ತು. ಭಾರತೀಯ ಬೌಲರ್ಗಳ ದಾಳಿಯನ್ನು ಎದುರಿಸಲು ಇಂಗ್ಲೆಂಡ್ ಪಡೆ ವಿಫಲವಾಗಿತ್ತು. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ನ ಮಾಜಿ ಆಟಗಾರರು ಪಿಚ್ ಬಗ್ಗೆ ಅಪಸ್ವರವೆತ್ತಿದ್ದಾರೆ. ಆದರೆ ನಾಲ್ಕನೇ ಪಂದ್ಯಕ್ಕೂ ಮುನ್ನ ನಡೆದ ವರ್ಚುವಲ್ ಪ್ರೆಸ್ ಕಾನ್ಫರೆನ್ಸ್ನಲ್ಲಿ ಅಜಿಂಕ್ಯ ರಹಾನೆ ಈ ಚರ್ಚೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಜನರು ಅವರಿಗೆ ಏನನ್ನು ಮಾತನಾಡಲು ಬಯಸುತ್ತಾರೋ ಅದನ್ನು ಮಾತನಾಡುತ್ತಾರೆ. ನಾವು ವಿದೇಶಗಳಿಗೆ ಪ್ರವಾಸ ಮಾಡುವಾಗ ಅಲ್ಲಿನ ಪಿಚ್ಗಳು ಎಷ್ಟು ಸೀಮಿಂಗ್ ಆಗಿರುತ್ತದೆ ಎಂಬುದನ್ನು ಯಾರೂ ಮಾತನಾಡಲಾರರು. ಆಗ ಅವರು ಭಾರತೀಯ ಬ್ಯಾಟ್ಸ್ಮನ್ಗಳ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ಜನರು ಈ ರೀತಿ ಆಡುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ಎನಿಸುವುದಿಲ್ಲ ಎಂದು ರಹಾನೆ ಉತ್ತರಿಸಿದ್ದಾರೆ.
"ನಾವು ವಿದೇಶಕ್ಕೆ ಪ್ರವಾಸ ಮಾಡಿದಾಗ ಮೊದಲ ದಿನವೇ ಪಿಚ್ ತೇವವಾಗಿರುತ್ತದೆ. ಪಿಚ್ ಯಾವಾಗ ಹುಲ್ಲಿನಿಂದ ಕೂಡಿರುತ್ತದೋ ಆಗ ಅದು ಮೇಲೆ ಕೆಳಗೆ ವರ್ತಿಸುತ್ತದೆ. ಆಗ ಅದು ಅಪಾಯಕಾರಿಯಾಗಿರುತ್ತದೆ. ಆದರೆ ಆ ಬಗ್ಗೆ ನಾವು ಯಾವಾಗಲೂ ದೂರು ನೀಡಿಲ್ಲ ಅಥವಾ ಮಾತನಾಡಿಲ್ಲ" ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.