ಐಪಿಎಲ್ ಸೇರಿದ್ದು ಹೇಗೆ?
ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಾ ಬೆಳೆದ ಸಿರಾಜ್ ಅವರನ್ನು ಐಪಿಎಲ್ ಅಂಗಳಕ್ಕೆ ಕರೆ ತಂದಿದ್ದು, ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ನೀಡಿದ ಪ್ರದರ್ಶನ ಎನ್ನಬಹುದು. ಭಾರತ 'ಎ' ಮತ್ತು ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಐಪಿಎಲ್ ತಂಡ ಸೇರಲು ನೆರವಾಯಿತು , ಸಿರಾಜ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಸ್ಟೈಲಿಷ್ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್. ಐಪಿಎಲ್ ನಲ್ಲಿ ಹೈದರಾಬಾದ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಮೆಂಟರ್ ಆಗಿದ್ದರು. ಡೇವಿಡ್ ವಾರ್ನರ್ ಅವರು ನಾಯಕರಾಗಿರುವ ತಂಡದಲ್ಲಿ ಆಡಿದ ಅನುಭವ ನನಗೆ ಲಾಭ ತಂದಿದೆ. ಕೋಚ್ ಭರತ್ ಅರುಣ್ ಅವರ ಸಲಹೆ ಸೂಚನೆ ಪಾಲಿಸಿದ್ದು ನೆರವಾಗಿದೆ ಎಂದು ಈಗಲೂ ಸಿರಾಜ್ ಸ್ಮರಿಸುತ್ತಾರೆ.
ತಂದೆ ಹಾಗೂ ತಾಯಿ ತ್ಯಾಗ, ಪ್ರೀತಿಯೇ ಕಾರಣ
ನನ್ನ ಈ ಸಾಧನೆಗೆ ತಂದೆ ಹಾಗೂ ತಾಯಿ ತ್ಯಾಗ, ಪ್ರೀತಿಯೇ ಕಾರಣ. ಆಟೋರಿಕ್ಷಾ ಚಾಲಕರಾಗಿದ್ದರೂ ನಮ್ಮ ಮೇಲೆ ಕುಟುಂಬದ ಕಷ್ಟ ಬೀಳದಂತೆ ನನ್ನಪ್ಪ ನೋಡಿಕೊಂಡರು. ಇದರಿಂದ ನಾನು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಲು ಸಾಧ್ಯವಾಯಿತು ಎಂದು ಸಿರಾಜ್ ಹೇಳಿದ್ದಾರೆ.
ಸತತ ಎರಡು ಮೇಡನ್, 3 ವಿಕೆಟ್ ಸಿರಾಜ್ ಜಿಂದಾಬಾದ್!
25 ಓವರ್ಗಳ ಕ್ಲಬ್ ಮ್ಯಾಚ್ ವೊಂದರಲ್ಲಿ 20 ರನ್ನಿಗೆ ಎದುರಾಳಿ ತಂಡದ 9 ವಿಕೆಟ್ ಗಳನ್ನು ಉರುಳಿಸಿದ್ದೆ. ಆಗ ನನ್ನ ಚಿಕ್ಕಪ್ಪ ನನಗೆ 500 ರೂ. ಬಹುಮಾನ ನೀಡಿದ್ದರು. ಅದು ನಾನು ಪಡೆದ ದೊಡ್ಡ ಬಹುಮಾನ. ಇದಾದ ಬಳಿಕ ಹರಾಜಿನಲ್ಲಿ ಐಪಿಎಲ್ ತಂಡಕ್ಕೆ ಆಯ್ಕೆಯಾಗಿದ್ದು ಅವಿಸ್ಮರಣೀಯ ಕ್ಷಣ ಎಂದಿದ್ದಾರೆ ಸಿರಾಜ್.
ತಂದೆ ತಾಯಿ ಈಗ ನನ್ನ ಬಗ್ಗೆ ಹೆಮ್ಮೆಯಿಂದ ನೋಡುತ್ತಾರೆ
ನನ್ನ ಅಣ್ಣ ಸಾಫ್ಟ್ವೇರ್ ಇಂಜಿನಿಯರ್ ಆಗಿ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಆದರೆ, ನನಗೆ ಮೊದಲಿನಿಂದಲೂ ಓದಿಗಿಂತ ಕ್ರಿಕೆಟ್ ನತ್ತ ಆಸಕ್ತಿ ಬೆಳೆಯಿತು. ನನ್ನ ತಾಯಿಗೆ ಮಾತ್ರ ನಾನು ನನ್ನ ಅಣ್ಣನಂತೆ ಇಂಜಿನಿಯರ್ ಆಗಬೇಕು ಎಂಬ ಆಸೆಯಿತ್ತು. ಆದರೆ, ಈಗ ನನ್ನ ಬಗ್ಗೆ ಹೆಮ್ಮೆಯಿಂದ ಮೊಹಲ್ಲಾದಲ್ಲಿ ಹೇಳಿಕೊಳ್ಳುತ್ತಿದ್ದಾರೆ.
ವಿವಿಧ ಹಂತಗಳಲ್ಲಿ ಆಡಿ ಬೆಳೆದ ಸಿರಾಜ್
2015ರಿಂದ ಲೆದರ್ ಬಾಲ್ ಕ್ರಿಕೆಟ್ ಆಡಲು ಆರಂಭಿಸಿದ ಸಿರಾಜ್ , ಹೈದರಾಬಾದ್ ನ ಅಂಡರ್ -22, ಮುಷ್ತಾಕ್ ಅಲಿ, ವಿಜಯ್ ಹಝಾರೆ , ರಣಜಿ ಟ್ರೋಫಿ ತಂಡಕ್ಕೆ ಆಡಿದ ಸಾಧನೆ ಮಾಡಿದ್ದಾರೆ. ಭಾರತ ‘ಎ' ತಂಡದಲ್ಲಿ ಆಡುವ ಅವಕಾಶ ಕೂಡಾ ಪಡೆದರು. 2016-17 ರಣಜಿ ಋತುವಿನಲ್ಲಿ ಹೈದರಾಬಾದ್ ಪರ 9 ಪಂದ್ಯಗಳಲ್ಲಿ 41 ವಿಕೆಟ್ ಗಳಿಸಿದ್ದರು. ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿ 6 ಪಂದ್ಯಗಳಿಂದ 10 ವಿಕೆಟ್ ಪಡೆದರು. ನಂತರ 2.20 ಕೋಟಿ ರುಗೆ ಆರ್ ಸಿಬಿ ಸೇರಿಕೊಂಡರು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಆಡಿದ ಭಾರತ ತಂಡಕ್ಕೆ ಸಿರಾಜ್ ಹಾಗೂ ಶ್ರೇಯಸ್ ಅಯ್ಯರ್ ಒಟ್ಟಿಗೆ ಆಯ್ಕೆಯಾಗಿದ್ದು ಎಂಬುದನ್ನು ಮರೆಯುವಂತಿಲ್ಲ. ಒಟ್ಟಾರೆ ಐಪಿಎಲ್ ನಲ್ಲಿ 30 ಪಂದ್ಯಗಳಲ್ಲಿ 34 ವಿಕೆಟ್ 4/32 ಹಾಗೂ 3/8 ಶ್ರೇಷ್ಠ ಬೌಲಿಂಗ್ ಪ್ರದರ್ಶನ. ಎಕಾನಾಮಿ ತುಸು ಅಧಿಕ 9.02. ಆದರೆ, ಐಪಿಎಲ್ 2020ರಲ್ಲಿ ಎಕಾನಾಮಿ 7. 85 ಕಾಪಾಡಿಕೊಂಡಿದ್ದಾರೆ.
ಕೆಕೆಆರ್ ವಿರುದ್ಧ ಸಾಧನೆ ಮಾಡಿದ ಸಿರಾಜ್
ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಮೇಡನ್ ಮಾಡಿದ ಮೊದಲ ಬೌಲರ್ ಮೊಹಮ್ಮದ್ ಸಿರಾಜ್(2-2-0-3), ಪವರ್ ಪ್ಲೇನಲ್ಲಿ ಸತತ ಎರಡು ಮೇಡನ್ ಓವರ್ ಎಸೆದ ಮೊದಲ ಬೌಲರ್ ಎನಿಸಿಕೊಂಡರು. ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿ ವಿಕೆಟ್ ಕೀಪರ್ ಎಬಿ ಡಿ ವಿಲಿಯರ್ಸ್ ಅವರಿಗೆ ಕ್ಯಾಚಿತ್ತರೆ, ನಿತಿಶ್ ರಾಣಾ ಅವರ ಆಫ್ ಸ್ಟಂಪ್ ಉಡಾಯಿಸಿದ ಸಿರಾಜ್ ಮುಂದಿನ ಬೇಟೆ ಟಾಮ್ ಬಾಂಟನ್ ಆಗಿದ್ದರು.
"ಮೊದಲು ನನ್ನ ಈ ಪ್ರದರ್ಶನಕ್ಕೆ ನಾನು ಅಲ್ಲಾಹನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಂತರ ನನಗೆ ಹೊಸ ಚೆಂಡನ್ನು ನೀಡಿದ ವಿರಾಟ್ ಭಾಯಿಗೆ ಧನ್ಯವಾದಗಳು. ಹೊಸ ಚೆಂಡಿನೊಂದಿಗೆ ನಾನು ಸಾಕಷ್ಟು ಅಭ್ಯಾಸ ಮಾಡುತ್ತಿದ್ದೇನೆ. ನಾನು ಆರಂಭದಲ್ಲೇ ಬೌಲಿಂಗ್ ಮಾಡುತ್ತೇನೆ ಎಂದು ನಾವು ಯೋಜಿಸಿರಲಿಲ್ಲ ರಾಣಾಗೆ ಎಸೆದ ಚೆಂಡು ತುಂಬಾ ಚೆನ್ನಾಗಿತ್ತು. ನಾನು ಯೋಜಿಸಿದ್ದನ್ನು ನಿಖರವಾಗಿ ಕಾರ್ಯಗತಗೊಳಿಸಿದೆ "ಎಂದು ಸಿರಾಜ್ ಪಂದ್ಯದ ನಂತರದ ಸಂದರ್ಶನದಲ್ಲಿ ಹೇಳಿದ್ದಾರೆ.