ಅನುಭವಕ್ಕೆ ಮಣೆ
ವೆಸ್ಟ್ ಇಂಡೀಸ್ ಮತ್ತು ಆಸೀಸ್ ಎರಡೂ ಸರಣಿಗಳನ್ನು ಗಮನಿಸಿದರೂ ರಿಷಬ್ ಪಂತ್ ಗಮನಾರ್ಹ ಅನ್ನಿಸುವ ಪ್ರದರ್ಶನವೇನೂ ನೀಡಿಲ್ಲ. ಯುವ ಬ್ಯಾಟ್ಸ್ಮನ್ ಪಂತ್ಗೆ ಅವಕಾಶ ನೀಡಿದ್ದ ಬಿಸಿಸಿಐ ಪ್ರಯೋಗ ಅಂಥದ್ದೇನೂ ಕೆಲಸ ಮಾಡಿದಂತೆ ಕಂಡಿಲ್ಲ. ಹೀಗಾಗಿ ತಂಡ ಸಮಿತಿ ಮತ್ತೆ ಅನುಭವಿ ಆಟಗಾರನ ಮೊರೆ ಹೋದಂತಿದೆ.
ರಾಹುಲ್ ಕೈ ಬಿಡೋದೇಯಿಲ್ಲ!
ಕನ್ನಡಿಗ, ಯುವ ಆಟಗಾರ ಕೆಎಲ್ ರಾಹುಲ್ ಕೈಯನ್ನು ಬಿಡೋದೇಯಿಲ್ಲ ಎಂಬಂತಿದೆ ಬಿಸಿಸಿಐ. ಇತ್ತೀಚಿನ ಯಾವುದೇ ಸರಣಿಯಲ್ಲೂ ರಾಹುಲ್ ಉತ್ತಮ ಪ್ರದರ್ಶನ ನೀಡಿಲ್ಲ. ನೀಡಿಲ್ಲ ಅನ್ನೋದಕ್ಕಿಂತಲೂ ಸೊನ್ನೆ ಸುತ್ತಿ ಸುತ್ತಿ ನಗೆಪಾಟಲಿಗೀಡಾಗಿದ್ದೇ ಹೆಚ್ಚು. ಆದರೂ ಭಾರತದ ಆಯ್ಕೆ ಸಮಿತಿಗೆ ರಾಹುಲ್ ಮೇಲಿನ ಲವ್ ಕಡಿಮೆಯಾದಂತಿಲ್ಲ. ರಾಹುಲ್ ಅವರು ಆಸೀಸ್ ಏಕದಿನ, ನ್ಯೂಜಿಲ್ಯಾಂಡ್ ಟಿ20 ಮತ್ತು ಏಕದಿನ ಮೂರರಲ್ಲೂ ಕಾಣಿಸಿಕೊಂಡಿದ್ದಾರೆ.
ಧೋನಿಗೆ 11 ಪಂದ್ಯಗಳು
ಆಯ್ಕೆ ಸಮಿತಿಯಲ್ಲಿನ ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ಪಿಟಿಐ ಜೊತೆ ಮಂಗಳವಾರ (ಡಿ.25) ಮಾತನಾಡಿ, 'ಆಸೀಸ್ ವಿರುದ್ಧ ಮೂರು ಮತ್ತು ಕಿವೀಸ್ ವಿರುದ್ಧ ಐದು ಸೇರಿ ಒಟ್ಟು 8 ಏಕದಿನ ಪಂದ್ಯಗಳಿವೆ. ಧೋನಿಗೆ ಸಾಧ್ಯವಾದಷ್ಟೂ ಹೆಚ್ಚಿನ ಅವಕಾಶ ನೀಡಲು ಆಯ್ಕೆ ಸಮಿತಿ ಬಯಸಿದೆ. ಮೂರು ಟಿ20 ಪಂದ್ಯಗಳೂ ಸೇರಿ ಒಟ್ಟು 11 ಪಂದ್ಯಗಳು ಧೋನಿ ಪಾಲಿಗಿವೆ' ಎಂದರು.
ಗುಟ್ಟು-ರಟ್ಟು!
23ರ ಹರೆಯದ ಪಂತ್ಗಿಂತ 37ರ ಅನುಭವಿ ಆಟಗಾರ ಮಾಜಿ ನಾಯಕ ಎಂಎಸ್ ಧೋನಿ ಅವರ ಅವಶ್ಯಕತೆಯನ್ನು ಬಿಸಿಸಿಐ ಮನಗಂಡಿದೆ. ಕಾರಣ 2019ರ ವರ್ಲ್ಡ್ ಕಪ್. ಕೊಂಚ ಫಾರ್ಮ್ ಕಳೆದುಕೊಂಡಂತೆ ಕಂಡರೂ ಚೇತರಿಸಿಕೊಳ್ಳಲು ಧೋನಿಗೆ ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಹೀಗಾಗಿ ಆಯ್ಕೆ ಸಮಿತಿ ಕೂಲ್ ಕ್ಯಾಪ್ಟನ್ನತ್ತ ಹೊರಳಿದೆ.ಏಕದಿನದಿಂದ ಹೊರ ಬಿದ್ದಿರುವ ರಿಷಬ್ ಪಂತ್ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ತಂಡದಲ್ಲಿ ಉಳಿದುಕೊಂಡಿದ್ದಾರೆ. ಐಸಿಸಿ ವಿಶ್ವಕಪ್ ಟೂರ್ನಿ 2019 ಮೇ 30ರಂದು ಆರಂಭಗೊಳ್ಳಲಿದೆ.