ಲಂಡನ್, ಜುಲೈ 01: ಪ್ರಸಕ್ತ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಆಲ್ರೌಂಡರ್ ವಿಜಯ್ ಶಂಕರ್ ಅವರ ಬದಲಾಗಿ ಸ್ಫೋಟಕ ಬ್ಯಾಟ್ಸ್ಮನ್ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ತಂಡಕ್ಕೇ ಸೇರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ಸಮ್ಮತಿಸಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಕರ್ನಾಟಕ ರಣಜಿ ತಂಡದ ಪರ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಮಯಾಂಕ್ ಅಗರ್ವಾಲ್, ಕಳೆದ ಆಸ್ಟ್ರೇಲಿಯಾ ಪ್ರವಾಸಲ್ಲಿ ಭಾರತದ ಪರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಆದರೆ ಒಡಿಐನಲ್ಲಿಈವರೆಗೆ ಆಡಿಲ್ಲ. ಇದೀಗ ವಿಶ್ವಕಪ್ನಲ್ಲೇ ಒಡಿಐಗೆ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದಾರೆ.
ಅಭ್ಯಾಸದ ವೇಳೆ ಎಡಗಾಲಿನ ಪಾದಕ್ಕೆ ಪೆಟ್ಟು ಮಾಡಿಕೊಂಡಿರುವ ವಿಜಯ್ ಶಂಕರ್ ಟೂರ್ನಿಯಿಂದಲೇ ನಿರ್ಗಮಿಸುವಂತಾಗಿದೆ. ಇದೀಗ ಅವರ ಸ್ಥಾನದಲ್ಲಿ ಭಾರತ ತಂಡದ 15 ಆಟಗಾರರ ಬಳಗವನ್ನು ಸೇರಿಕೊಳ್ಳಲು ಐಸಿಸಿಯ ತಾಂತ್ರಿಕ ಸಮಿತಿಯು ಸೋಮವಾರ ಗ್ರೀನ್ ಸಿಗ್ನಲ್ ನೀಡಿದೆ.
ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಬಾಂಗ್ಲಾ ತಂಡದ ನಾಯಕ!
"ವಿಜಯ್ ಶಂಕರ್ ಅವರ ಎಡಗಾಲಿನ ಪಾದದಲ್ಲಿ ಮೂಳೆ ಕೊಂಚ ಬಿರುಕು ಕಂಡಿದೆ. ಇದರಿಂದ ಚೇತರಿಸಲು ಅವರಿಗೆ ಕನಿಷ್ಠ ಮೂರು ವಾರಗಳ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಅವರು ವಿಶ್ವಕಪ್ನಿಂದ ಹೊರಗುಳಿಯುವಂತಾಗಿದೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮಯಾಂಕ್ ಅಗರ್ವಾಲ್ ಅವರನ್ನು ಬದಲಿ ಆಟಗಾರನಾಗಿ ನೀಡುವಂತೆ ಐಸಿಸಿಗೆ ಮನವಿ ಮಾಡಿದೆ,'' ಎಂದು ಬಿಸಿಸಿಐನ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ವಿಜಯ್ ಶಂಕರ್ ಆಡಿರಲಿಲ್ಲ. ಅವರ ಸ್ಥಾನದಲ್ಲಿ ಎಡಗೈ ಬ್ಯಾಟ್ಸ್ಮನ್ ರಿಷಭ್ ಪಂತ್ ಸ್ಥಾನ ಪಡೆದು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದರು. ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯಗೊಂಡು ನಿರ್ಗಮಿಸಿದ ಪರಿಣಾಮ ಪಂತ್ ಅವರನ್ನು ಬದಲಿ ಆಟಗಾರನಾಗಿ ಭಾರತ ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು.
ಟೀಮ್ ಇಂಡಿಯಾ ಪ್ಲೇಯಿಂಗ್ 11ಗೆ ಈ ಆಲ್ರೌಂಡರ್ ಎಂಟ್ರಿ ಸಾಧ್ಯತೆ!
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿಶ್ವಕಪ್ಗೆ ಪದಾರ್ಪಣೆ ಮಾಡಿದ್ದ ಆಲ್ರೌಂಡರ್ ವಿಜಯ್ ಶಂಕರ್, ಆಡಿದ ಮೊದಲ ಪಂದ್ಯದಲ್ಲೇ ಎರಡು ವಿಕೆಟ್ ಪಡೆದು ಗಮನ ಸೆಳೆದಿದ್ದರು. ಬ್ಯಾಟಿಂಗ್ನಲ್ಲೂ ಅಜೇಯ 15 ರನ್ಗಳ ಉಪಯುಕ್ತ ಕಾಣಿಕೆ ನೀಡಿ ಫೀಲ್ಡಿಂಗ್ನಲ್ಲೂ ಅದ್ಭುತ ಕ್ಯಾಚ್ ಹಿಡಿದಿದ್ದರು. ಆದರೆ ನಂತರ ನಡೆದ ಅಫಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಕ್ರಮವಾಗಿ 29 ಮತ್ತು 14 ರನ್ಗಳನ್ನು ಗಳಿಸುವ ಮೂಲಕ ನಿರಾಸೆ ಮೂಡಿಸಿದ್ದರು.