ಮ್ಯಾಂಚೆಸ್ಟರ್, ಜುಲೈ 09: ಹವಾಮಾನ ವರದಿ ಪ್ರಕಾರ ಮಂಗಳವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಸೆಮಿಫೈನಲ್ ಪಂದ್ಯದ ವೇಳೆ ಶೇ.40 ರಷ್ಟು ಮಳೆಯಾಗುವ ಸಾಧ್ಯತೆಯಿತ್ತು. ಅಂತೆಯೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 46.1 ಓವರ್ಗಳಲ್ಲಿ 5 ವಿಕೆಟ್ಗೆ 211 ರನ್ಗಳನ್ನು ಗಳಿಸಿದ್ದಾಗ ಸುರಿದ ಧಾರಾಕಾರ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ.
ವಿಶ್ವಕಪ್: ಭಾರತ vs ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಲೈವ್ ಸ್ಕೋರ್ ಕಾರ್ಡ್
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಮಳೆ ನಿಲ್ಲುವ ಸೂಚನೆ ಸದ್ಯಕ್ಕೆ ಇಲ್ಲದೇ ಇದ್ದರೂ ಸಾಧ್ಯವಾದಷ್ಟೂ ಮಂಗಳವಾರವೇ ಪಂದ್ಯದ ಫಲಿತಾಂಶ ಹೊರತರಲು ಟೂರ್ನಿಯ ಸಂಘಟಕರು ಹರ ಸಾಹಸ ನಡೆಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಪಂದ್ಯ ಆಯೋಜನೆಗೆ ಏನಾದರು ಅಡಚಣೆ ಎದುರಾಗಿ ನಿಯೋಜಿಸಲಾಗುವ ಸಮಯದಲ್ಲಿ ಪಂದ್ಯದ ಫಲಿತಾಂಶ ಹೊರತರಲು ಹೆಚ್ಚುವರಿ ಎರಡು ಗಂಟೆಗಳ ಸಮಯವನ್ನು ಮೊದಲೇ ನಿಗದಿ ಪಡಿಸಲಾಗಿರುತ್ತದೆ. ಒಂದು ವೇಳೆ ಫಲಿತಾಂಶ ಹೊರತರಲು ಇನ್ನಷ್ಟು ಸಮಯದ ಅಗತ್ಯವಿದ್ದರೆ ಮ್ಯಾಚ್ ರೆಫ್ರಿ ಪರಿಸ್ಥಿತಿಯನ್ನು ಗಮನಿಸಿ ಫಲಿತಾಂಶ ಬರಲಿದೆ ಎಂದು ಸಮ್ಮತಿಸಿದರೆ ಮತ್ತೊಂದು ಗಂಟೆಯ ಹೆಚ್ಚುವರಿ ಸಮಯ ಲಭ್ಯವಾಗುತ್ತದೆ.
ವಿಶ್ವಕಪ್ ಸೆಮಿಫೈನಲ್ಗೆ ಶಮಿ, ಕುಲ್ದೀಪ್ ಅವರನ್ನು ಹೊರಗಿಟ್ಟಿದ್ದೇಕೆ?
ಫಲಿತಾಂಶ ಈ ದಿನದಂದು ಸಾಧ್ಯವೇ ಇಲ್ಲ ಎಂದ ಮಾತ್ರಕ್ಕೆ ಪಂದ್ಯವನ್ನು ಮರು ದಿನಕ್ಕೆ ಮುಂದೂಡಲಾಗುತ್ತದೆ. ಒಂದು ವೇಳೆ ಸೂಪರ್ ಓವರ್ ಸ್ಪರ್ಧೆಗಾದರೂ ಪ್ರಯತ್ನಿಸಲಾಗುತ್ತದೆ. ಇದರರ್ಥ ಮಳೆ ನಿಂತರೆ ಭಾರತ ತಂಡ ತಡ ರಾತ್ರಿ 20 ಓವರ್ಗಳ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಒಂದು ವೇಳೆ 20 ಓವರ್ಗಳು ಲಭ್ಯವಾದರೆ ಭಾರತ ತಂಡಕ್ಕೆ ಡಕ್ವರ್ತ್ ಲೂಯಿಸ್ ನಿಯಮದನ್ವಯ 148 ರನ್ಗಳ ಗುರಿ ಪಡೆಯಲಿದೆ. ಹೆಚ್ಚುವರಿ ಸಮಯದಲ್ಲಿ ಸೂಪರ್ ಓವರ್ ನಡೆಯುವ ಸಾಧ್ಯತೆಯೂ ಇದೆ.
ಇನ್ನು ಪಂದ್ಯವನ್ನು ಬುಧವಾರಕ್ಕೆ ಮುಂದೂಡಿ ಬುಧವಾರವೂ ಫಲಿತಾಂಶ ಹೊರಬರದೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಭಾರತ ತಂಡಕ್ಕೆ ಫೈನಲ್ ಟಿಕೆಟ್ ಲಭ್ಯವಾಗಲಿದೆ.