ಮ್ಯಾಂಚೆಸ್ಟರ್, ಜುಲೈ 12: ಭಾರತ ತಂಡ ಪ್ರಸಕ್ತ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 18 ರನ್ಗಳಿಂದ ಸೋತು ಸ್ಪರ್ಧೆಯಿಂದ ನಿರ್ಗಮಿಸಿತು. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದರೂ ನಾಕ್ಔಟ್ ಹಂತದಲ್ಲಿ ಭಾರತ ಮುಗ್ಗರಿಸಿತ್ತು.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 240 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡ ಆರಂಭಿಕ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿತ್ತು, ಆದರೂ ಜಡೇಜಾ ಮತ್ತು ಧೋನಿ ಅವರ ಜವಾಬ್ದಾರಿಯುತ ಅರ್ಧಶತಕಗಳ ನೆರವಿನಿಂದ ಹೋರಾಟ ನಡೆಸಿ 221 ರನ್ಗಳಿಗೆ ಆಲ್ಔಟ್ ಆಯಿತು.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿದ ಬಳಿಕ ತಂಡವನ್ನು ಗುರಿ ಮುಟ್ಟಿಸುವ ಜವಾಬ್ದಾರಿ ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಧೋನಿ ಅವರ ಹೆಗಲ ಮೇಲಿತ್ತು. ಇದಕ್ಕೂ ಮುನ್ನ ಈ ಜವಾಬ್ದಾರಿ ನಿಭಾಯಿಸುವಲ್ಲಿ ಧೋನಿಗಿಂತಲೂ ಮುಂದೆ ಬಂದು ಆಡಿದ ರಿಷಭ್ ಪಂತ್, ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ವಿಫಲರಾಗಿದ್ದರು.
ಟೀಮ್ ಇಂಡಿಯಾದ ವೆಸ್ಟ್ ಇಂಡೀಸ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಅಂದಹಾಗೆ ಧೋನಿ ಸಾಮಾನ್ಯವಾಗಿ ನಂ.5ನಲ್ಲಿ ಬ್ಯಾಟ್ ಮಾಡುತ್ತಿದ್ದರು. ಆದರೆ, ಕಿವೀಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಅವರನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಮಾಡಲಾಯಿತು. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಈ ತಂತ್ರಗಾರಿಗೆ ಫಲ ನೀಡಲಿಲ್ಲ. ಭಾರತ ತಂಡದ ಮಾಜಿ ನಾಯಕ ಕೂಡ ಧೋನಿ ಅವರನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಮಾಡಿದ್ದೇ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಿದ್ದರು. ಅಲ್ಲದೆ ಟೀಮ್ ಇಂಡಿಯಾದ ಈ ಎಡವಟ್ಟಿನ ನಿರ್ಧಾರವನ್ನು ವೀಕ್ಷಕ ವಿವರಣೆ ಸಂದರ್ಭದಲ್ಲಿ ನೇರ ಪ್ರಸಾರದಲ್ಲೇ ಕಠುವಾಗಿ ಟೀಕಿಸಿದ್ದರು.
ಇದೇ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ, ಧೋನಿ ಅವರನ್ನು 7ನೇ ಕ್ರಮಾಂಕದಲ್ಲಿ ಆಡಿಸಿದ್ದೇಕೆ ಎಂಬುದನ್ನು ವಿವರಿಸಿದ್ದಾರೆ.
ಇಂಡೊ-ಪಾಕ್ ವಿಶ್ವಕಪ್ ಪಂದ್ಯದ ಚೆಂಡಿನ ಬೆಲೆ ಎಷ್ಟೂ ಅಂತೀರ!
"ಇದು ಸಂಪೂರ್ಣ ತಂಡದ ನಿರ್ಧಾರವಾಗಿತ್ತು. ಎಲ್ಲರೂ ಇದಕ್ಕೆ ಸಮ್ಮತಿಸಿದ್ದರು. ಧೋನಿ ವಿಕೆಟ್ ಆರಂಭದಲ್ಲೇ ಕಳೆದುಕೊಳ್ಳಲು ಯಾರೂ ಕೂಡ ಬಯಸಿರಲಿಲ್ಲ. ಏಕೆಂದರೆ ಧೋನಿ ಅದ್ಭುತ ಫಿನಿಷರ್. ಅವರ ಅನುಭವ ಇನಿಂಗ್ಸ್ ಅಂತ್ಯದಲ್ಲಿ ನೆರವಿಗೆ ಬರಲಿದೆ ಎಂಬುದನ್ನು ಅರಿತಿದ್ದೆವು. ಅವರನ್ನು ಈ ರೀತಿ ಬಳಸಿಕೊಲ್ಳುವುದರಲ್ಲಿ ತಪ್ಪೇನು ಇಲ್ಲ. ತಂಡದ ಎಲ್ಲಾ ಆಟಗಾರರು ಇದಕ್ಕೆ ಸಮ್ಮತಿಸಿದ್ದರು," ಎಂದು ಶಾಸ್ತ್ರಿ ಹೇಳಿದ್ದಾರೆ.
ಸೆಮಿಫೈನಲ್ನಲ್ಲಿ ಭಾರತ ಎಡವಿದೆಲ್ಲಿ ಎಂದು ವಿವರಿಸಿದ ಗಂಗೂಲಿ!
ಇದೇ ವೇಳೆ ಎಂಎಸ್ ಧೋನಿ ಅವರ ಪ್ರದರ್ಶನವನ್ನು ಕೋಚ್ ಶಾಸ್ತ್ರಿ ಗುಣಗಾನ ಮಾಡಿದ್ದಾರೆ. "ಅವರು ಅದ್ಭುತವಾಗಿ ಆಡಿದರು. ಪರಿಸ್ಥಿತಿಯನ್ನು ಹತೋಟಿಗೆ ತಂದರು. ಆದರೆ ರನ್ಔಟ್ ಆದದ್ದು ನಿಜಕ್ಕೂ ದುರದೃಷ್ಟವೇ ಸರಿ. ತಂಡವನ್ನು ಹೇಗೆ ಗುರಿ ಮುಟ್ಟಿಸಬೇಕೆಂಬ ಲೆಕ್ಕಾಚಾರ ಅವರ ಮನದಲ್ಲಿತ್ತು. ಯಾವ ಎಸೆತವನ್ನು ಹೊಡೆಯಬೇಕು, ಕೊನೆಯ ಓವರ್ ಎಸೆಯಲಿರುವ ಜಿಮ್ಮಿ ನೀಶಮ್ ಬೌಲಿಂಗ್ನಲ್ಲಿ ಗಳಿಸಲು ಎಷ್ಟು ರನ್ ಉಳಿಸಿಕೊಳ್ಳಬೇಕು ಎಲ್ಲವನ್ನು ಅವರು ಲೆಕ್ಕಾಚಾರ ಮಾಡಿದ್ದರು. ಅವರು ಅದನ್ನು ಮಾಡೇ ತೀರಬೇಕು ಎಂಬ ದಿಟ್ಟತನ ಡ್ರೆಸಿಂಗ್ ರೂಮ್ಗೆ ಬಂದಾಗಲೂ ಅವರ ಮುಖದಲ್ಲಿ ಕಾಣುತ್ತಿತ್ತು. ಆದರೆ, ರನ್ಔಟ್ ಎಲ್ಲವನ್ನು ಬದಲಾಯಿಸಿತು," ಎಂದಿದ್ದಾರೆ.