ಮ್ಯಾಂಚೆಸ್ಟರ್, ಜೂನ್ 17: ಭಾರತ ತಂಡದ ವಿರುದ್ಧ ಪ್ರಸಕ್ತ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಅನುಭವಿಸಿದ ಹೀನಾಯ ಸೋಲಿಗೆ ಬೇಸರ ವ್ಯಕ್ತ ಪಡಿಸಿರುವ ಪಾಕ್ ತಂಡದ ಮಾಜಿ ವೇಗದ ಬೌಲರ್ ಶೊಯೇಬ್ ಅಖ್ತರ್, ನಾಯಕ ಸರ್ಫರಾಝ್ ಅಹ್ಮದ್ ಅವರನ್ನು ಹಿಗ್ಗಾಮಗ್ಗ ಜರಿದಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇಂಡೊ-ಪಾಕ್ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲಿಯೂ ಪ್ರಾಬಲ್ಯ ಮೆರೆದ ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದನ್ವಯ 89 ರನ್ಗಳ ಭರ್ಜರಿ ಜಯ ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 336/5 ರನ್ಗಳನ್ನು ಗಳಿಸಿದರೆ, ಇದಕ್ಕುತ್ತರವಾಗಿ ಪಾಕಿಸ್ತಾನ 40 ಓವರ್ಗಳಲ್ಲಿ ಪರಿಷ್ಕೃತ 302 ರನ್ಗಳ ಗುರಿ ಬೆನ್ನತ್ತಿ 212/6 ರನ್ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು.
ಆಕಳಿಸಿ ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಂಡ ಪಾಕ್ ನಾಯಕ!
"2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ನಲ್ಲಿ ಭಾರತ ತಂಡ ಮಾಡಿದ್ದ ತಪ್ಪುಗಳನ್ನು ಪಾಕಿಸ್ತಾನ ತಂಡ ಇಲ್ಲಿ ಮಾಡಿದೆ. ಅವರ ಕರ್ಮಕ್ಕೆ ಅವರೇ ಬಲಿಯಾಗಿದ್ದಾರೆ,'' ಎಂದು ಶೊಯೇಬ್ ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪಾಕಿಸ್ತಾನ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಪಾಕಿಸ್ತಾನ ತಂಡದ ನಾಯಕ ಸರ್ಫರಾಝ್ ಅಹ್ಮದ್ ಅವರ ತಲೆಯಲ್ಲಿ ಮೆದುಳೇ ಇಲ್ಲ ಎಂದು ಜರಿದಿದ್ದಾರೆ. "ಸರ್ಫರಾಝ್ ಅಹ್ಮದ್ ಮೆದುಳೇ ಇಲ್ಲದವರಂತೆ ವರ್ತಿಸುತ್ತಾರೆಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಮ್ಮ ತಂಡ ಚೇಸಿಂಗ್ ಮಾಡುವುದಿಲ್ಲ ಎಂಬ ಸಾಮಾನ್ಯ ಸಂಗತಿ ಅವರಿಗೆ ಏಕೆ ಅರ್ಥವಾಗಲಿಲ್ಲ. ಪಾಕಿಸ್ತಾನ ತಂಡ ಮೊದಲು ಬ್ಯಾಟ್ ಮಾಡಿದ್ದರೆ ಪಂದ್ಯ ಅರ್ಧ ಗೆದ್ದಂತಾಗುತ್ತಿತ್ತು. ಆದರೆ, ನಮ್ಮ ತಂಡ ಸೋಲುವುದಕ್ಕಾಗೇ ಕಠಿಣ ಶ್ರಮ ವಹಿಸಿದಂತಿದೆ,'' ಎಂದು ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ಪಾಕ್ ಬ್ಯಾಟ್ಸ್ಮನ್ಗಳಿಗೆ ರೋಹಿತ್ ಸಲಹೆ ನೀಡ್ತಾರಂತೆ! ಆದರೆ..?
"ಟಾಸ್ ಅತ್ಯಂತ ಮಹತ್ವವಾದದ್ದು. ಪಾಕಿಸ್ತಾನ ತಂಡ ಮೊದಲು ಬ್ಯಾಟ್ ಮಾಡಿ 260 ರನ್ಗಳನ್ನು ಗಳಿಸಿದ್ದರೂ, ತನ್ನ ಬೌಲಿಂಗ್ ಸಾಮರ್ಥ್ಯದೊಂದಿಗೆ ಅದನ್ನು ಯಶಸ್ವಿಯಾಗಿ ಕಾಯ್ದುಕೊಳ್ಳಬಹುದಿತ್ತು. ಇದು ಅಪ್ಪಟ ಮೆದುಳಿಲ್ಲದ ವ್ಯಕ್ತಿಯ ನಾಯಕತ್ವ. ಪಾಕಿಸ್ತಾನ ತಂಡದ ನಾಯಕನಿಂದ ಅತ್ಯಂತ ಕಳಾಹೀನ ಪ್ರದರ್ಶನವಿದು. ಸರ್ಫರಾಝ್ ಅವರಲ್ಲಿ ಇಮ್ರಾನ್ ಖಾನ್ ಅವರ ನೆರಳನ್ನು ನೋಡಬೇಕೆಂದಿದ್ದೆ. ಆದರಿದು ಖಂಡಿತಾ ಸಾಧ್ಯವಿಲ್ಲ ಎಂಬುದು ಅರ್ಥವಾಗಿದೆ,'' ಎಂದು ಅಖ್ತರ್ ಹೇಳಿದ್ದಾರೆ.
ಪಾಕಿಸ್ತಾನ ತಂಡ ಐದು ಪಂದ್ಯಗಳಿಂದ ಮೂರು ಅಂಕಗಳನ್ನು ಮಾತ್ರವೇ ಗಳಿಸಿದ್ದು, ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೇರಬೇಕಾದರೆ ತನ್ನ ಪಾಲಿನ ಇನ್ನುಳಿದ ನಾಲ್ಕೂ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಸ್ಥಿತಿಗೆ ತಲುಪಿದೆ. ಪಾಕ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪೈಪೋಟಿ ನಡೆಸಲಿದೆ.