ಲಂಡನ್, ಜೂನ್ 21: ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಒಂದರಲ್ಲಷ್ಟೇ ಗೆದ್ದು, ಸೆಮಿಫೈನಲ್ಸ್ ತಲುಪಲು ಉಳಿದ ನಾಲ್ಕೂ ಪಂದ್ಯಗಳನ್ನೂ ಗೆಲ್ಲಲೇ ಬೇಕಾದ ಸ್ಥಿತಿಯಲ್ಲಿರುವ ಪಾಕಿಸ್ತಾನ ತಂಡ ಅಂಕಪಟ್ಟಿಯಲ್ಲಿ ಸದ್ಯಕ್ಕೆ 9ನೇ ಸ್ಥಾನದಲ್ಲಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಈ ಸಂದರ್ಭದಲ್ಲಿ ಮಾತನಾಡಿರುವ ಪಾಕಿಸ್ತಾನ ತಂಡ ಅನುಭವಿ ಬ್ಯಾಟ್ಸ್ಮನ್ ಮೊಹಮ್ಮದ್ ಹಫೀಝ್, ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ತಂಡ ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿರವುದೇ ವೈಫಲ್ಯಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.
"ಒಂದು ತಂಡವಾಗಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದೇವೆ. ಸಂಘಟಿತ ಪ್ರದರ್ಶನ ನೀಡುವಲ್ಲಿ ನಮ್ಮ ತಂಡ ಸಂಪೂರ್ಣವಾಗಿ ವಿಫಲವಾಗಿದೆ. ಕೇವಲ ವೈಯಕ್ತಿಕ ಶ್ರೇಷ್ಠ ಪ್ರದರ್ಶನಗಳು ಪಂದ್ಯವನ್ನು ಗೆದ್ದುಕೊಡುವುದಿಲ್ಲ. ಇಂದಿನ ಕ್ರಿಕೆಟ್ನಲ್ಲಿ ಒಂದು ತಂಡವಾಗಿ ಉತ್ತಮ ಪ್ರದರ್ಶನ ನೀಡಬೇಕು. ಇದರಲ್ಲಿ ಎಲ್ಲಾ ಆಟಗಾರರ ಕೊಡುಗೆ ಇರಬೇಕು,'' ಎಂದು ಹಫೀಝ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕ್ರಿಕೆಟ್ ಆಟವೇ ಮಹಾನ್ ಗುರು ಎಂದ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ!
"ತಂಡದ ಹೀನಾಯ ಸ್ಥಿತಿಗೆ ಕೇವಲ ಒಬ್ಬ ಆಟಗಾರನನ್ನು ದೂರಲು ಖಂಡಿತಾ ಸಾಧ್ಯವಿಲ್ಲ. ವೈಫಲ್ಯಕ್ಕೆ ಎಲ್ಲಾ ಆಟಗಾರರು ಸಮನಾಗಿ ಹೊಣೆ ಹೊರಬೇಕು,'' ಎಂದಿದ್ದಾರೆ.
ಪ್ರಮುಖವಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡದ್ದನ್ನು ಎಲ್ಲೆಡೆ ಕಟುವಾಗಿ ಟೀಕೆ ಮಾಡಲಾಗಿತ್ತು. ಏಕೆಂದರೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 336 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಿ ಎಂದುಯ ಪಾಕಿಸ್ತಾನ ತಂಡದ ಪ್ರಧಾನಿ ಹಾಗೂ 1992ರಲ್ಲಿ ಪಾಕ್ಗೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಮ್ರಾನ್ ಖಾನ್ ಹೇಳಿದ್ದರೂ ಕೂಡ ಸರ್ಫರಾಝ್ ಕ್ಷೇತ್ರ ರಕ್ಷಣೆಯ ಮೊರೆ ಹೋಗಿದ್ದರು.
ವಿಜಯ್ ಶಂಕರ್ಗೆ ಎಸೆದ ಯಾರ್ಕರ್ ಬಗ್ಗೆ ಮಾತನಾಡಿದ ಬುಮ್ರಾ!
ಆದರೆ, ನಾಯಕ ಸರ್ಫರಾಝ್ ಅವರ ನಿರ್ಧಾರವನ್ನು ಹಫೀಝ್ ಸಮರ್ಥಿಸಿಕೊಂಡಿದ್ದಾರೆ. "ಇದು ತಂಡದ ನಿರ್ಧಾರವಾಗಿತ್ತು. ಆದರೆ, ನಾವು ನಿರೀಕ್ಷಿತ ಮಟ್ಟದಲ್ಲಿ ಬೌಲಿಂಗ್ ದಾಳಿ ನಡೆಸಲು ವಿಫಲರಾದ ಕಾರಣ ಸೋಲೆದುರಿಸುವಂತಾಯಿತು ಅಷ್ಟೇ.'' ಎಂದು ಹಫೀಝ್ ಹೇಳಿದ್ದಾರೆ.
ಪಾಕಿಸ್ತಾನ ತಂಡ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪೈಪೋಟಿ ನಡೆಸಲಿದ್ದು, ಬಳಿಕ ಜೂನ್ 26ರಂದು ನ್ಯೂಜಿಲೆಂಡ್ ಮತ್ತು ಜೂನ್ 29ರಂದು ಅಫಘಾನಿಸ್ತಾನ ವಿರುದ್ಧ ಪಂದ್ಯಗಳನ್ನಾಡಲಿದೆ.