ಮುಂಬಯಿ, ಮೇ 03: ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾದರೆ, ಭಾರತದ ಬ್ಯಾಟಿಂಗ್ ದಂತಕತೆ ಮಾಸ್ಟರ್ ಬ್ಲಾಸ್ಟರ್ ಟೀಮ್ ಇಂಡಿಯಾ ಈ ಬಾರಿ ವಿಶ್ವಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
"ವಿಶ್ವಕಪ್ ಟ್ರೋಫಿ ಭಾರತಕ್ಕೆ ಮರಳಲಿದೆ,'' ಎಂದು ತೆಂಡೂಲ್ಕರ್ ಮಿಡ್ಲ್ಸೆಕ್ಸ್ ಗ್ಲೋಬಲ್ (ಎಂಐಜಿ) ಅಕಾಡೆಮಿಯ ಬೇಸಿಗೆ ಶಿಬಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿನ್ ತೆಂಡೂಲ್ಕರ್ ಹೇಳಿದರು. ಇದೇ ಸಂದರ್ಭದಲ್ಲಿ 46 ವರ್ಷದ ಮಾಸ್ಟರ್ ಬ್ಲಾಸ್ಟರ್ ಎಂಐಜಿ ಕ್ಲಬ್ನ ಪೆವಿಲಿಯನ್ ಉದ್ಘಾಟನೆ ಮಾಡಿದರು.
ಇಂಗ್ಲೆಂಡ್ನಲ್ಲಿ ವಿಶ್ವಕಪ್ಗೆ ಬ್ಯಾಟಿಂಗ್ ಫ್ರೆಂಡ್ಲೀ ಪಿಚ್ಗಳು: ಸಚಿನ್ ತೆಂಡೂಲ್ಕರ್
ಇದೇ ವೇಳೆ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ಬ್ಯಾಟಿಂಗ್ಗೆ ನೆರವಾಗುವ ಪಿಚ್ಗಳು ಹೆಚ್ಚು ಸಿಗಲಿವೆ ಎಂದು ಸಚಿನ್ ಹೇಳಿದ್ದಾರೆ. "ಈ ಬಾರಿ ಬೇಸಿಗೆಯ ಬಿಸಿ ಹೆಚ್ಚಿರಲಿದೆ.
ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿ ಆಡುವ ಸಂದರ್ಭದಲ್ಲೂ ಇಂಥದ್ದೇ ಸ್ಥಿತಿಯಿತ್ತು. ಹೀಗಾಗಿ ವಿಕೆಟ್ಗಳು ಬ್ಯಾಟಿಂಗ್ಗೆ ಸ್ವರ್ಗವಾಗಲಿವೆ,'' ಎಂದು ಸಚಿನ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
"ಮೋಡ ಮುಚ್ಚಿದ ವಾತಾವರಣ ಇದ್ದರಷ್ಟೇ ಸ್ಥಿತಿಗತಿಗಳಲ್ಲಿ ಕೊಂಚ ಬದಲಾವಣೆ ಆಗಿಲಿದೆ. ತಂಪಿನ ಅಂಶ ಹೆಚ್ಚಿದ್ದರೆ ಚೆಂಡು ಸ್ವಿಂಗ್ ಆಗಬಹುದು. ಆದರೂ ಇದು ಹೆಚ್ಚು ಕಾಲ ನಡೆಯುವುದಿಲ್ಲ ಕೇವಲ ಆರಂಭಿಕ ಓವರ್ಗಳಲ್ಲಿ ಮಾತ್ರವೇ ಚೆಂಡು ಸ್ವಿಂಗ್ ಪಡೆಯಲು ಸಾಧ್ಯ,'' ಎಂದು ಸಚಿನ್ ಇಂಗ್ಲೆಂಡ್ ಪಿಚ್ಗಳ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ತಂಡದ ವಿಶೇಷ ದಾಖಲೆ
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಿಂಚುತ್ತಿರುವ ಟೀಮ್ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ, ಶಿಖರ್ ಧವನ್ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೆ ಮುಂಬರುವ ವಿಶ್ವಕಪ್ಗೆ ಆತ್ಮವಿಶ್ವಾಸ ಹೆಚ್ಚಿರಲಿದೆ ಎಂದು ಸಚಿನ್ ಹೇಳಿದ್ದಾರೆ.
"ಯಾವುದೇ ಮಾದರಿಯಲ್ಲಾಗಲಿ ಆಟಗಾರರು ಉತ್ತಮ ಲಯದಲ್ಲಿದ್ದರೆ, ಆತ್ಮವಿಶ್ವಾಸವೂ ಹೆಚ್ಚಿರುತ್ತದೆ. ಇದೇ ಮುಖ್ಯ. ಆದರೂ ಆಟಗಾರರು ಕೆಲ ಹೊಂದಾಣಿಕೆಗಳನ್ನು ತಂದುಕೊಳ್ಳ ಬೇಕಾಗುತ್ತದೆ'' ಎಂದು ಹೇಳಿದ್ದಾರೆ.