ಆಸ್ಟ್ರೇಲಿಯಾವನ್ನು ಕಾಡಿದ್ದ ಪಂತ್
ಆ ಸರಣಿಯ ಮೂರನೇ ಪಂದ್ಯದಲ್ಲಿ ಗೆಲುವಿನ ಸನಿಹಕ್ಕೆ ಬಂದಿದ್ದ ಆಸ್ಟ್ರೇಲಿಯಾ ಕನಸಿಗೆ ರಿಷಭ್ ಪಂತ್ ತಣ್ಣೀರನ್ನು ಎರಚಿದ್ದರು. ಅದರಲ್ಲಿಯೂ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ನಲ್ಲಿ ಪಂತ್ ಬಾರಿಸಿದ 97(118) ರನ್ ಭಾರತ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ಹಾಗೂ ಕೊನೆಯ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ನಲ್ಲಿ ಪಂತ್ ಅಜೇಯ 89 ರನ್ ಬಾರಿಸಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದರು ಮತ್ತು ಆ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆಸ್ಟ್ರೇಲಿಯಾ ನೆಲದಲ್ಲೇ ಆಸ್ಟ್ರೇಲಿಯಾವನ್ನು ಸೋಲಿಸಿದ ಕೀರ್ತಿ ರಹಾನೆಗಿದೆ
ಮೊದಲ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಭಾರತಕ್ಕೆ ತೆರಳಿದ ನಂತರ ಉಳಿದ 3 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು ಅಜಿಂಕ್ಯ ರಹಾನೆ. ರಹಾನೆ ನಾಯಕತ್ವವನ್ನು ವಹಿಸಿಕೊಂಡಾಗ ಅನುಮಾನಿಸಿದವರೇ ಹೆಚ್ಚು, ಆದರೆ ರಹಾನೆಯ ಜಾಣ್ಮೆಯ ನಾಯಕತ್ವದಿಂದ ಟೀಮ್ ಇಂಡಿಯಾ 2-1 ಅಂತರದಿಂದ ಆಸ್ಟ್ರೇಲಿಯಾ ನೆಲದಲ್ಲಿಯೇ ವಿಜಯ ಪತಾಕೆಯನ್ನು ಹಾರಿಸಿತು.
ಪದಾರ್ಪಣೆ ಮಾಡಿ ಅಬ್ಬರಿಸಿದ ಮೊಹಮ್ಮದ್ ಸಿರಾಜ್
ಈ ಸರಣಿ ಮೊಹಮ್ಮದ್ ಸಿರಾಜ್ ಕ್ರಿಕೆಟ್ ಜೀವನವನ್ನು ಬದಲಾಯಿಸಿತು ಎಂದರೆ ತಪ್ಪಾಗಲಾರದು. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮೊಹಮ್ಮದ್ ಸಿರಾಜ್ ಆ ಸರಣಿಯಲ್ಲಿ 13 ವಿಕೆಟ್ ಪಡೆದು ಮಿಂಚಿದರು. ಅದರಲ್ಲಿಯೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ಗಳ ಗೊಂಚಲನ್ನು ಪಡೆದು ಮೊಹಮ್ಮದ್ ಸಿರಾಜ್ ಅದ್ಭುತ ಪ್ರದರ್ಶನವನ್ನು ನೀಡಿ ಟೀಮ್ ಇಂಡಿಯಾಕ್ಕೆ ಭರವಸೆಯ ಬೌಲರ್ ಆದರು.
ಗಬ್ಬಾಗೆ ಬಾ ಎಂದು ಆಹ್ವಾನ ನೀಡಿ ಮುಖಭಂಗ ಅನುಭವಿಸಿದ್ದ ಟಿಮ್ ಪೇನ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಗಬ್ಬಾದಲ್ಲಿ ನಡೆಯಿತು. ಈ ಪಂದ್ಯಕ್ಕೂ ಮುನ್ನ ಅಶ್ವಿನ್ ಬ್ಯಾಟ್ ಮಾಡುವ ವೇಳೆ ಕೀಪಿಂಗ್ ಮಾಡುತ್ತಿದ್ದ ಟಿಮ್ ಪೇನ್ ಗಬ್ಬಾಗೆ ಬಂದು ಗೆಲ್ಲಿ ಎಂದು ಅಶ್ವಿನ್ಗೆ ವ್ಯಂಗ್ಯವಾಗಿ ಆಹ್ವಾನ ನೀಡಿದ್ದರು. ಆದರೆ ಗಬ್ಬಾದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಶರಣಾಯಿತು, ಈ ಮೂಲಕ ಟಿಮ್ ಪೇನ್ ಸುಮ್ಮನೆ ಇರಲಾರದೆ ಆಹ್ವಾನ ನೀಡಿ ಮುಖಭಂಗ ಅನುಭವಿಸಿದ್ದರು.