ಆಡದಿದ್ದರೆ ಪಾಕ್ಗೆ ಅಂಕ!
ವಿಶ್ವಕಪ್ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತ ಪಂದ್ಯವನ್ನಾಡದಿದ್ದರೆ ಅದರಿಂದ ಲಾಭ ಪಾಕಿಸ್ತಾನಕ್ಕೇ ಹೊರತು ಭಾರತಕ್ಕಲ್ಲ. ಜೂನ್ 16ರಂದಿನ ಇತ್ತಂಡಗಳ ಮೊದಲ ಮುಖಾಮುಖಿಯಲ್ಲಿ ಭಾರತ ಪಾಲ್ಗೊಳ್ಳದಿದ್ದರೆ ಪಾಕ್ಗೆ ಎರಡು ಅಂಕಗಳನ್ನು ನೀಡಲು ಅವಕಾಶವಿದೆ. ಅಂದರೆ ಕಾದಾಟಕ್ಕೆ ಇಳಿಯದಿದ್ದರೆ ಭಾರತ ಸೋತಂತೆಯೇ ಅಲ್ಲವೆ?
ಭಾರತಕ್ಕೆ ಬಿಸಿ ಮುಟ್ಟಿಸಿದ ಐಒಸಿ
ದೇಶದ ಯೋಧರ ಮೇಲಿನ ದಾಳಿ ಖಂಡನೀಯವೇ. ಆದರೆ ದಾಳಿಯ ಹಗೆಯನ್ನು ಕ್ರೀಡೆಯ ಮೇಲೆ ತೋರಿಸುವುದರಲ್ಲಿ ಅರ್ಧವಿಲ್ಲ. ಶೂಟಿಂಗ್ ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬರಲಿದ್ದ ಪಾಕ್ ಶೂಟರ್ಗಳಿಗೆ ಭಾರತ ವೀಸಾ ನಿರಾಕರಿಸಿತ್ತು. ಇದಕ್ಕೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಭಾರತಕ್ಕೆ ಬಿಸಿ ಮುಟ್ಟಿಸಿತ್ತು. ಭವಿಷ್ಯದಲ್ಲಿ ಭಾರತದಲ್ಲಿ ನಡೆಯಲಿದ್ದ ಜಾಗತಿಕ ಕ್ರೀಡಾಕೂಟಗಳ ಆಯೋಜನೆ, ಮಾತುಕತೆಯನ್ನು ಐಒಸಿ ರದ್ದುಗೊಳಿಸಿದೆ.
ಯಾವಾಗಲೂ ಗೆಲ್ಲೋ ಭಾರತ ಸೋಲಬಾರದು
'ವಿಶ್ವಕಪ್ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಯಾವತ್ತೂ ಸೋತಿದ್ದಿಲ್ಲ. ಪಾಕಿಸ್ತಾನವನ್ನು ಮತ್ತೊಮ್ಮೆ ಸೋಲಿಸಲು ಭಾರತಕ್ಕೆ ಲಭಿಸಿರುವ ಅಪೂರ್ವ ಅವಕಾಶವಿದು. ಆಟವನ್ನು ಬದಿಗಿಟ್ಟು ನಾವು ವೈಯಕ್ತಿಕ ದ್ವೇಷವನ್ನೇ ಎತ್ತಿ ಹಿಡಿದರೆ ಅದರಿಂದ ಪಾಕಿಸ್ತಾನಕ್ಕೇ ಲಾಭವಾಗಲಿದೆ' ಎಂದು ಸಚಿನ್ ಎಚ್ಚರಿಸಿದ್ದಾರೆ.
ಭಾರತದ ನಿರ್ಧಾರಕ್ಕೆ ಬದ್ಧ
ಭಾರತದ ಕ್ರಿಕೆಟ್ ಭವಿಷ್ಯದ ವಿಚಾರವಾಗಿ ವಿವೇಚನಾಪೂರ್ವಕವಾಗಿ ಮಾತನಾಡಿರುವ ಸಚಿನ್ ತೆಂಡೂಲ್ಕರ್ ಭಾರತದ ನಿರ್ಧಾರವನ್ನು ಗೌರವಿಸುವುದಾಗಿಯೂ ಹೇಳಿದ್ದಾರೆ. 'ಎಲ್ಲದಕ್ಕಿಂತ ದೇಶವೇ ಮೊದಲು. ರಾಷ್ಟ್ರ ಕೈಗೊಳ್ಳುವ ನಿರ್ಧಾರಕ್ಕೆ ನನ್ನ ಮನಪೂರ್ವಕ ಬೆಂಬಲವಿದೆ' ಎಂದು ಸಚಿನ್ ಅಭಿಪ್ರಾಯಿಸಿದ್ದಾರೆ. ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತ ಆಡದಿದ್ದರೆ ಭಾರತ ಐಸಿಸಿ ಕೆಂಗಣ್ಣಿಗೆ ಗುರಿಯಾಗುವುದಂತೂ ಖಚಿತ. ಪ್ರಜ್ಞಾವಂತ ಭಾರತದ ಪ್ರಜೆಗಳ ಪ್ರಕಾರ ಭಾರತ ತಂಡ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಆಡಬೇಕು. ಪಾಕನ್ನು ಸೋಲಿಸಬೇಕು. ಪಾಕ್ಗೆ ಹೆಡೆಮುರಿಕಟ್ಟಿ ಯೋಧರ ಸಾವಿಗೆ ಪ್ರತೀಕಾರ ತೀರಿಸಬೇಕು!