ನಾನು ಆಡಿದ ಬೆಸ್ಟ್ ಕ್ಯಾಪ್ಟನ್
ಟೀಮ್ ಇಂಡಿಯಾದಲ್ಲಿ ನಾನು ಆಡಿದವರ ಪೈಕಿ ಬೆಸ್ಟ್ ಕ್ಯಾಪ್ಟನ್ ಅಂದರೆ ಅದು ಅನಿಲ್ ಕುಂಬ್ಳೆ ಎಂದು ಗಂಭೀರ್ ಹೇಳಿದ್ದಾರೆ. ನಾಯಕನಾಗಿ ಅವರು ನೀಡುತ್ತಿದ್ದ ಸ್ವಾತಂತ್ರ್ಯ ಮತ್ತು ಬೆಂಬಲ ಬೇರೆ ಯಾವ ನಾಯಕನಿಂದಲೂ ನನಗೆ ಸಿಗಲಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
ನಾಯಕನಾಗಿ ನೀಡಿದ ಭರವಸೆ ಆಟಕ್ಕೆ ಸ್ಪೂರ್ತಿ
ಅನಿಲ್ ಕುಂಬ್ಳೆ ನಾಯಕನಾಗಿ ನೀಡಿದ ಭರವಸೆ ನಾನು ಅದ್ಭುತ ಪ್ರದರ್ಶನ ನೀಡಲು ಕಾರಣವಾಯಿತು ಎಂದು ಗಂಭೀರ್ ಹೇಳಿದ್ದಾರೆ. 2008ರ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯದ ಸರಣಿಗೂ ಮುನ್ನ ಅನಿಲ್ ಕುಂಬ್ಳೆ ವಿರೇಂದ್ರ ಸೆಹ್ವಾಗ್ ಮತ್ತು ಗಂಭೀರ್ ಜೊತೆಗೆ ಮಾತನಾಡುತ್ತಾ ನೀಡಿದ ಭರವಸೆಯನ್ನು ಗಂಭೀರ್ ನೆನಪಿಸಿಕೊಂಡರು.
8 ಡಕ್ಔಟ್ ಆದರೂ ನೀವೇ ಆರಂಭಿಸುತ್ತೀರಿ!
ಟೀಮ್ ಇಂಡಿಯಾ ಆರಂಭಿಕ ಆಟಗಾರರಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಬಳಿ ಅನಿಲ್ ಕುಂಬ್ಳೆ "ಈ ಸರಣಿಯ ನಾಲ್ಕು ಪಂದ್ಯಗಳ ಎಂಟು ಇನ್ನಿಂಗ್ಸ್ಗಳಲ್ಲಿ ನೀವೇ ಆರಂಭಿಕರಾಗಿರುತ್ತೀರಿ, ನೀವು ಎಲ್ಲದರಲ್ಲೂ ಸೊನ್ನೆಗೆ ಔಟಾದರೂ ಅಷ್ಟೆ ಎಂಬ ಮಾತನ್ನು ಹೇಳಿದ್ದರು, ಈ ರೀತಿಯ ಭರವಸೆಯನ್ನು ಯಾವ ನಾಯಕನಿಂದಲೂ ನಾನು ಕೇಳಿರಲಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
ಜೀವ ಕೊಡಬೇಕಾದ ಸಂದರ್ಭ ಬಂದರೆ ಅನಿಲ್ ಕುಂಬ್ಳೆಗೆ
ಆ ಸರಣಿಯಲ್ಲಿ ನಾಯಕ ಕುಂಬ್ಳೆ ನೀಡಿದ ವಿಶ್ವಾಸದಿಂದಾಗಿ ದ್ವಿಶತಕದ ಸಾಧನೆಯನ್ನು ಮಾಡಲು ನನ್ನಿಂದ ಸಾಧ್ಯವಾಯಿತು. ಒಂದು ವೇಳೆ ಯಾರಿಗಾದರೂ ನನ್ನ ಬದುಕನ್ನು ನೀಡುವ ಪರಿಸ್ಥಿತಿ ಬಂದರೆ ಅದು ಅನಿಲ್ ಕುಂಬ್ಳೆಗೆ ಆಗಿರುತ್ತದೆ. ಅವರು ಹೇಳಿದ ಮಾತುಗಳಿನ್ನೂ ನನ್ನ ಹೃದಯದಲ್ಲಿದೆ ಎಂದು ಗಂಭೀರ್ ಹೇಳಿದರು.
ಡಿಆರ್ಎಸ್ ಇದ್ದಿದ್ದರೆ ಕುಂಬ್ಳೆ ಹೆಸರಿನಲ್ಲಿ 900 ವಿಕೆಟ್
ಈಗ ಇರುವ ತಂತ್ರಜ್ಞಾನದಂತೆ ಡಿಆರ್ಎಸ್ ಆನಿಲ್ ಕುಂಬ್ಳೆ ಆಡುತ್ತಿದ್ದ ಸಮಯದಲ್ಲಿ ಇದ್ದಿದ್ದರೆ ಆನಿಲ್ ಕುಂಬ್ಳೆ ಹೆಸರಿನಲ್ಲಿ 900 ವಿಕೆಟ್ ಇರುತ್ತಿತ್ತು ಎಂದು ವಿಸ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಇನ್ನೋರ್ವ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಬಗ್ಗೆಯೂ ಮೆಚ್ಚುಗೆಯನ್ನು ಗಂಭೀರ್ ವ್ಯಕ್ತಪಡಿಸಿದ್ದಾರೆ.