ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ 217 ರನ್ಗಳಿಗೆ ಆಲೌಟ್ ಆದ ಬಳಿಕ ನ್ಯೂಜಿಲೆಂಡ್ ಇನ್ನಿಂಗ್ಸ್ ಆರಂಭಿಸಿದ್ದು ಮಂದಬೆಳಕಿನಿಂದ ಮೂರನೇ ದಿನದಾಟ ಮುಕ್ತಾಯವಾದಾಗ ನ್ಯೂಜಿಲೆಂಡ್ ತಂಡ 101 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಹಾಗಿದ್ದರೂ ಭಾರತ ತಂಡಕ್ಕಿಂತ ನ್ಯೂಜಿಲೆಂಡ್ ಹೆಚ್ಚು ಒತ್ತಡದಲ್ಲಿದೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ.
"ಈ ಐತಿಹಾಸಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಇದರ ಲಾಭವನ್ನು ಅವರು ಪಡೆಯಬೇಕಾದರೆ ಮೊದಲ ಇನ್ನಿಂಗ್ಸ್ನಲ್ಲಿ ಕನಿಷ್ಟ 150 ರನ್ಗಳ ಮುನ್ನಡೆಯನ್ನು ಅವರು ಪಡೆಯಬೇಕಿದೆ" ಎಂದು ಆಕಾಶ್ ಚೋಪ್ರ ಹೇಳಿದ್ದಾರೆ. ಎರಡನೇ ದ್ವಿತೀಯ ಸರದಿಯಲ್ಲಿ ಬ್ಯಾಟಿಂಗ್ ಮಾಡಿ ಭಾನುವಾರ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿತು. ಆದರೆ ಅವರಿನ್ನೂ ಸಂಕಷ್ಟದಿಂದ ಹೊರಬಂದಿಲ್ಲ ಎಂಬ ಅಭಿಪ್ರಾಯವನ್ನು ಚೋಪ್ರಾ ವ್ಯಕ್ತಪಡಿಸಿದ್ದಾರೆ.
WTC Final: ನ್ಯೂಜಿಲೆಂಡ್ ಪರ 8 ದಶಕಗಳ ಹಿಂದಿನ ದಾಖಲೆ ಮುರಿದ ಕೈಲ್ ಜ್ಯಾಮಿಸನ್
ಮಳೆಯಿಂದಾಗಿ ಮೊದಲ ದಿನದಾಟ ಸಂಪೂರ್ಣವಾಗಿ ವ್ಯರ್ಥವಾದ ನಂತರ ಎರಡನೇ ದಿನ ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಮೊದಲ ದಿನದಲ್ಲಿ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 146 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ ಭಾನುವಾರ ನ್ಯೂಜಿಲೆಂಡ್ ಬೌಲರ್ಗಳು ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಬ್ಯಾಟಿಂಗ್ನಲ್ಲಿಯೂ ಈ ಪ್ರದರ್ಶನವನ್ನು ಕೀವಿಸ್ ಪಡೆ ಮುಂದುವರಿಸಿದೆ.
"ಈಗ ನ್ಯೂಜಿಲೆಂಡ್ ಕೂಡ ಭಾರತ ಆರಂಭಿಕ ದಿನದಲ್ಲಿ ಎಲ್ಲಿತ್ತು ಎಂಬುದನ್ನು ಗಮನಿಸಬೇಕು. ಭಾರತ 146ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ಇಬ್ಬರರು ಸೆಟ್ ಬ್ಯಾಟ್ಸ್ಮನ್ಗಳು ಇದ್ದರು. ಆದರೆ ಮರುದಿನ ಬೆಳಗ್ಗೆ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ತಂಡ ಕುಸಿತವನ್ನು ಕಂಡಿತ್ತು. ಎಲ್ಲಿ ತಲುಪಬೇಕು ಎಂಬ ಗುರಿಯನ್ನು ಹೊಂದಿದ್ದಿರೋ ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ. ಇದೇ ರೀತಿ ನ್ಯೂಜಿಲೆಂಡ್ ಕೂಡ ಎದುರಿಸಬೇಕಾಗುತ್ತದೆ" ಎಂದು ಆಕಾಶ್ ಚೋಪ್ರ ಸ್ಟಾರ್ಸ್ಪೋರ್ಟ್ಸ್ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.