ಭಾರತ ಉತ್ತಮ ಸ್ಥಿತಿಯಲ್ಲಿದೆ
ನ್ಯೂಜಿಲೆಂಡ್ ವಿರುದ್ಧದ ಐತಿಹಾಸಿಕ ಟೆಸ್ಟ್ನಲ್ಲಿ ಭಾರತ ತಂಡ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ವಿಕ್ರಂ ರಾಥೋರ್ ಹೇಳಿದ್ದಾರೆ. ಸೌಥಾಂಪ್ಟನ್ ಅಂಗಳದ ಪರಿಸ್ಥಿತಿಯನ್ನು ಗಮನಿಸಿಕೊಂಡು ಭಾರತ 250ಕ್ಕಿಂತ ಹೆಚ್ಚಿನ ರನ್ಗಳಿಸಿದರೆ ಅದು ಉತ್ತಮ ಮೊತ್ತವಾಗಲಿದೆ ಎಂದು ವಿಕ್ರಂ ರಾಥೋರ್ ಅಭಿಪ್ರಾಯಪಟ್ಟಿದ್ದಾರೆ.
ಸವಾಲಿನ ಮೊತ್ತವನ್ನು ತಿಳಿಸಿದ ಬ್ಯಾಟಿಂಗ್ ಕೋಚ್
"ನಾವು ಸಾಧ್ಯವಾದಷ್ಟು ಹೆಚ್ಚಿನ ರನ್ಗಳಿಸಲು ಪ್ರಯತ್ನಿಸಲಿದ್ದೇವೆ. ಆದರೆ 250ಕ್ಕಿಂತ ಹೆಚ್ಚಿನ ರನ್ಗಳಿಸುವುದು ಈ ಪಿಚ್ನಲ್ಲಿ ಸವಾಲಿನ ಮೊತ್ತವಾಗಲಿದೆ" ಎಂದು ವಿಕ್ರಂ ರಾಥೋರ್ ಎರಡನೇ ದಿನದಾಟ ಅಂತ್ಯದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಬಹಿರಂಗಪಡಿಸಿದ್ದಾರೆ.
ಆರಂಭಿಕರಿಗೆ ಶ್ರೇಯಸ್ಸು
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಭಾರತೀಯ ಆರಂಭಿಕ ಜೋಡಿಯನ್ನು ಪ್ರಶಂಸಿದ್ದಾರೆ. ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಹೊಸ ಚೆಂಡನ್ನು ಅದ್ಭುತ ರೀತಿಯಲ್ಲಿ ಎದುರಿಸಿದ್ದಾರೆ ಎಂದರು. ಈ ಜೋಡಿ ಮೊದಲ ವಿಕೆಟ್ಗೆ 62 ರನ್ಗಳಿಸಿತು. "ಬ್ಯಾಟಿಂಗ್ ಅಂದರೆ ರನ್ಗಳಿಸುವುದುದು. ರೋಹಿತ್ ಹಾಗೂ ಗಿಲ್ ಅದ್ಭುತವಾಗಿ ಆಟವಾಡುತ್ತಾ ಹೆಚ್ಚು ರನ್ಗಳಿಸುವತ್ತ ಚಿತ್ತ ನೆಟ್ಟರು. ಎಲ್ಲಿ ಸಾಧ್ಯವೋ ಅಲ್ಲಿ ರನ್ಗಳಿಸುತ್ತಾ ಸಾಗಿದ್ದರು. ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆಗೂ ಹ್ಯಾಟ್ಸ್ಆಫ್ ಆದರೆ ಹೆಚ್ಚಿನ ಶ್ರೇಯಸ್ಸು ಆರಂಭಿಕರಿಗೆ ಸಲ್ಲಬೇಕು" ಎಂದು ವಿಕ್ರಂ ರಾಥೋರ್ ಹೇಳಿದ್ದಾರೆ.
ಪೂಜಾರ ಬ್ಯಾಟಿಂಗ್ ಬಗ್ಗೆ ಕಳವಳವಿಲ್ಲ
ಇನ್ನು ಇದೇ ಸಂದರ್ಭದಲ್ಲಿ ಚೇತೇಶ್ವರ್ ಪೂಜಾರ ಬ್ಯಾಟಿಂಗ್ನಲ್ಲಿನ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದರು. "ನಾವು ನಿಜಕ್ಕೂ ಆ ವಿಚಾರವಾಗಿ ಕಳವಳವನ್ನು ಹೊಂದಿಲ್ಲ, ಯಾಕೆಂದರೆ ಆತ ನಿಜಕ್ಕೂ ಅತ್ಯುತ್ತಮ ಆಟಗಾರ. ವೇಗ ಆತನಿಗೆ ಸಮಸ್ಯೆಯಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಆತ ಬ್ಯಾಟಿಂಗ್ ನಡೆಸುವವರೆಗೂ ಅದ್ಭುತವಾಗಿ ಕಾಣಿಸುತ್ತಾರೆ. ಇವತ್ತು ಕೂಡ ಅವರು 50 ಎಸೆತಗಳನ್ನು ಎದುರಿಸಿದ್ದಾರೆ. ಈ ಉತ್ತಮ ಆರಂಭವನ್ನು ತಮ್ಮ ಪರವಾಗುವಂತೆ ಅವರು ಮಾಡಬೇಕಿದೆಯಷ್ಟೆ. ಅದು ಶೀಘ್ರದಲ್ಲಿಯೇ ಆಗಲಿದೆ" ಎಂದು ವಿಕ್ರಂ ರಾಥೋರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ