ಸೌಥಾಂಪ್ಟನ್, ಜೂನ್ 23: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿ ಮೀಸಲು ದಿನಕ್ಕೆ ಕಾಲಿಟ್ಟಿದೆ. ಐದನೇ ದಿನದಾಟದಲ್ಲಿ ಎರಡೂ ತಂಡಗಳ ಬೌಲರ್ಗಳು ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಮೊಹಮ್ಮದ್ ಶಮಿ ಎದುರಾಳಿಗೆ ದೊಡ್ಡ ಆಘಾತವನ್ನು ನೀಡಿದರು.
ರಾಸ್ ಟೇಲರ್, ವಾಟ್ಲಿಂಗ್, ಗ್ರಾಂಡ್ಹೋಮ್ ಹಾಗೂ ಜ್ಯಾಮಿಸನ್ ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಶಮಿ ಪಂದ್ಯದ ಮೇಲೆ ಮತ್ತೆ ಟೀಮ್ ಇಂಡಿಯಾ ಹಿಡಿತ ಸಾಧಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಅದರಲ್ಲೂ ಆರಂಭದಲ್ಲಿ ರಾಸ್ ಟೇಲರ್ ವಿಕೆಟ್ ಪಡೆಯಲು ಯಶಸ್ವಿಯಾಗಿದ್ದು ತಂಡಕ್ಕೆ ಹುರುಪು ನೀಡಿತ್ತು.
WTC Final: ಟೀಮ್ ಇಂಡಿಯಾದಲ್ಲಿ ಆಡಿಸಲೇಬೇಕಿದ್ದ ಆಟಗಾರನ ಹೆಸರಿಸಿದ ಗವಾಸ್ಕರ್
ಈ ಬಗ್ಗೆ ಮಾತನಾಡಿದ ಲಕ್ಷ್ಮಣ್ ಶಮಿ ಎಸೆತಗಳಲ್ಲಿನ ತೀವ್ರತೆ ಹಾಗೂ ಸ್ಥಿರತೆ ಅವರ ಈ ಅದ್ಭುತ ಪ್ರದರ್ಶನಕ್ಕೆ ಕಾರಣವಾಗಿದೆ ಎಂದಿದ್ದಾರೆ. "ನೀವು ನಿಮ್ಮ ಅನುಭವಿ ಬೌಲರ್ಗಳಿಂದ ಇದನ್ನೇ ನಿರೀಕ್ಷಿಸಬೇಕು. ಭಾರತ ಮೂವರು ವೇಗಿಗಳಾದ ಬೂಮ್ರಾ, ಶಮಿ ಹಾಗೂ ಇಶಾಂತ್ ಅನುಭವಿ ಬೌಲರ್ಗಳಾಗಿದ್ದಾರೆ. ಅವರಿಗೆ ತಮಗೇನು ಮಾಡಬೇಕೆಂಬ ಅರಿವಿದೆ. ಅವರು ತಮ್ಮ ತಪ್ಪುಗಳಿಂದ ಪಾಠ ಕಲಿತಿದ್ದಾರೆ. ಸೂಕ್ಷ್ಮತೆಗಳನ್ನು ಆದಷ್ಟು ಬೇಗನೆ ಅರಿತುಕೊಳ್ಳಬೇಕೆಂಬುದನ್ನು ಅನುಭವ ಕಲಿಸುತ್ತದೆ. ಅದನ್ನು ಮೊಹಮ್ಮದ್ ಶಮಿ ಮಾಡಿದ್ದಾರೆ" ಎಂದು ಲಕ್ಷ್ಮಣ್ ಪ್ರತಿಕ್ರಿಯಿಸಿದರು.
"ಈ ಹಿಂದಿನ ದಿನದಾಟದಲ್ಲಿಯೂ ಶಮಿ ಎಸೆತವನ್ನು ಆಡುವುದು ಬ್ಯಾಟ್ಸ್ಮನ್ಗಳುಗೆ ಅಸಾಧ್ಯವಾಗಿತ್ತು. ಅವರ ಎಸೆತಗಳನ್ನು ಆಟಗಾರರು ಆಡದೆ ಬಿಡುತ್ತಿದ್ದರು. ಆದರೆ ವಿಕೆಟ್ ತೆಗೆಯುವಂತಾ ಎಸೆತಗಳು ಬಂದಿರಲಿಲ್ಲ. ಆದರೆ ಅದನ್ನು ಇಂದು ಸರಿಪಡಿಸಿಕೊಂಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಕೆಟ್ ಪಡೆಯಲು ಸಾಧ್ಯವಾಗುವಂತಾ ಲೆಂತ್ ಪಡೆದುಕೊಂಡರು" ಎಂದಿದ್ದಾರೆ.
"ಮೊಹಮ್ಮದ್ ಶಮಿ ನಿಜಕ್ಕೂ ದೊಡ್ಡ ಸ್ಪೆಲ್ ಬೌಲಿಂಗ್ ಮಾಡಿದ್ದಾರೆ. ಆದರೆ ಆರಂಭದ ಎಸೆತದಿಂದ ಕೊನೆಯ ಎಸೆತದವರೆಗೆ ಅವರ ವೇಗದಲ್ಲಿ ಸ್ಪಲ್ಪವೂ ತೀವ್ರತೆ ಕಡಿಮೆಯಾಗಿಲ್ಲ. ಅದರರ್ಥ ಅವರು ತಮ್ಮ ಫಿಟ್ನೆಸ್ ಮೇಲೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಬೌಲಿಂಗ್ನಲ್ಲಿನ ತೀಕ್ಷ್ಣತೆ ನಿಜಕ್ಕೂ ಅದ್ಭುತವಾಗಿದೆ" ಎಂದು ವಿವಿಎಸ್ ಲಕ್ಷ್ಮಣ್ ಭಾರತೀಯ ಅನುಭವಿ ವೇಗಿ ಮೊಹಮ್ಮದ್ ಶಮಿ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.